ರಾಯಚೂರು ವಿದ್ಯಾರ್ಥಿನಿ ಮಧು ಸಾವು ಪ್ರಕರಣ : ಸಿಐಡಿ ವರದಿ ಸಲ್ಲಿಕೆ
ಬೆಂಗಳೂರು: ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ರಾಯಚೂರಿನ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಮಧು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ಆತ್ಮಹತ್ಯೆ ಎಂದು ಮಂಗಳವಾರ ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ.
ಎಂಜಿನಿಯರಿಂಗ್ ವಿದ್ಯಾರ್ಥಿ ಮಧು ಕಾಲೇಜಿನಿಂದ ವಾಪಾಸು ಮನೆಗೆ ಬಂದಿರಲಿಲ್ಲ ಎಂದು ಅವರ ತಂದೆ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಅದಾದ ಎರಡು ದಿನಗಳ ನಂತರ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮಧು ಶವ ಪತ್ತೆಯಾಗಿತ್ತು. ಆ ಸ್ಥಳದಲ್ಲಿ ಮಹಜರು ನಡೆಸಿದ ಪೊಲೀಸರು ಅಲ್ಲಿ ಸಿಕ್ಕಿದ ಸಾಕ್ಷಾಧಾರಗಳಿಗನುಗುಣವಾಗಿ ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನು ಖಂಡಿಸಿ ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ಪ್ರಮುಖ ವ್ಯಕ್ತಿಗಳು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದರು.
ಪ್ರತಿಭಟನೆ ತೀವ್ರವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ಗೆ ವಹಿಸಿತ್ತು. ತನಿಖೆ ನಡೆಸಿ, ಸುದರ್ಶನ್ ಯಾದವ್ ಎಂಬ ವ್ಯಕ್ತಿಯಿಂದ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎಂದು ತಿಳಿಸಿದೆ.ಈ ಕಿರುಕುಳದಿಂದ ನೊಂದ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.