ವೈದ್ಯಕೀಯ ಕಾಲೇಜು ಆರಂಭಕ್ಕೆ ವಕೀಲರ ಆಗ್ರಹ
ವೈದ್ಯಕೀಯ ಕಾಲೇಜು ಆರಂಭಕ್ಕೆ ಆಗ್ರಹಿಸಿ ವಕೀಲರ ಪ್ರತಿಭಟನೆ
ಯಾದಗಿರಿ, ಶಹಾಪುರ: ಯಾದಗಿರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಆಗ್ರಹಿಸಿ ಯಾದಗಿರಿ ಬಂದ್ ಕರೆಗೆ ಬೆಂಬಲಿಸಿ ಬುಧವಾರ ಇಲ್ಲಿನ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.
ಯಾದಗಿರಿ ಜಿಲ್ಲೆಯಾಗಿ 10 ವರ್ಷ ತುಂಬುತ್ತಾ ಬಂದಿದ್ದರೂ, ಇಂದಿಗೂ ಅಗತ್ಯ ಕಟ್ಟಡಗಳು ಹಾಗೂ ಕಚೇರಿ ಸ್ಥಾಪನೆಯಾಗಿಲ್ಲ. ಅದರಲ್ಲಿ ವೈದ್ಯಕೀಯ ಕಾಲೇಜು ಒಂದಾಗಿದೆ. ಕಾಲೇಜು ಸ್ಥಾಪನೆಯಿಂದ ಅಭಿವೃದ್ದಿಗೆ ಪೂರಕವಾಗಲಿದೆ. ರೋಗಿಗೆ ತಕ್ಷಣ ಚಿಕಿತ್ಸೆ ದೊರೆಯುವ ಅವಕಾಶವಿದೆ.
ಆರೋಗ್ಯದಲ್ಲಿ ತುಸು ಏರುಪೇರಾದರು ಕಲಬುರ್ಗಿ ಕಡೆ ಮುಖ ಮಾಡುವ ದುಸ್ಥಿತಿ ಬಂದಿದೆ. ಹಿಂದುಳಿದ ಪ್ರದೇಶವನ್ನು ಇನ್ನಷ್ಟು ಹಿಂದುಳುವಿಕೆಗೆ ನಾವೆಲ್ಲರೂ ಬಿಡುವುದಿಲ್ಲ. ನ್ಯಾಯಬದ್ದ ಹಕ್ಕುಗಳನ್ನು ಹೋರಾಟದ ಮೂಲಕ ಪಡೆಯುತ್ತೇವೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವೈದ್ಯಕೀಯ ಕಾಲೇಜು ಸ್ಥಾಪನೆ ಅಗತ್ಯವಿಲ್ಲ ಎಂದು ಹೇಳಿರುವುದು ನಮ್ಮೆಲ್ಲರಿಗೆ ಬೇಸರ ಮೂಡಿಸಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಮಲ್ಲಪ್ಪ ರಾಂಪುರೆ ಹೇಳಿದರು.
ವಕೀಲರ ಸಂಘದ ಕಾರ್ಯದರ್ಶಿ ಸಂದೀಪ ದೇಸಾಯಿ, ಲಕ್ಷ್ಮಿಕಾಂತ ಶಿಬರಬಂಡಿ ಹಾಗೂ ಹಿರಿಯ ವಕೀಲರಾದ ಬಿ.ಕೃಷ್ಣಮೂರ್ತಿ, ಎಂ.ಆರ್.ಮಾಲಿಪಾಟೀಲ್, ಆರ್.ಎಂ.ಹೊನ್ನಾರಡ್ಡಿ, ಶಾಂತಗೌಡ ಪಾಟೀಲ್, ಯೂಸೂಫ್ ಸಿದ್ದಕ್ಕಿ, ವಿಶ್ವನಾಥರಡ್ಡಿ ಮಾಲಿಪಾಟೀಲ್, ಅಮರೇಶ ದೇಸಾಯಿ, ಸಾಲೋಮನ್ ಆಲ್ಫ್ರೇಡ್, ಗುರುರಾಜ ಪಡಶೆಟ್ಟಿ, ಲಕ್ಷ್ಮಿನಾರಾಯಣ, ಎಚ್.ಆರ್.ಪಾಟೀಲ್, ಮಲ್ಲಪ್ಪ ಪೂಜಾರಿ, ಶ್ರೀಮಂತ ಕಂಚಿ, ಶರಬಣ್ಣ ರಸ್ತಾಪುರ, ಶರಣಪ್ಪ ಹೊಸ್ಮನಿ, ಬಸ್ಸಮ್ಮ ರಾಂಪುರೆ, ನಜೀಮಾ ಫಾತಿಮಾ, ಶರಣರಾಜ ಮುದನೂರ ಇದ್ದರು.