ವಿನಯ ವಿಶೇಷಸಾಹಿತ್ಯ

ಮೇರು ವ್ಯಕ್ತಿತ್ವದ ಸಾಹಿತಿ, ಸಗರನಾಡಿನ ಕೀರುತಿ ಡಾ.ಈಶ್ವರಯ್ಯ ಮಠ ಮಾರುತಿ

ಕಲ್ಯಾಣ ಕರ್ನಾಟಕದ ಕೀರ್ತಿ ಡಾ . ಈಶ್ವರಯ್ಯ ಮಠ

ಮಹೇಶ್ ಪತ್ತಾರ. ದೋರನಹಳ್ಳಿ

ಕಲಬುರ್ಗಿ – ಕಲ್ಯಾಣ ಕರ್ನಾಟಕದಲ್ಲಿ ಮೇರು ವ್ಯಕ್ತಿತ್ವ ಹೊಂದಿದ ಡಾ.ಈಶ್ವರಯ್ಯ ಮಠ ಅವರು ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೆಯಾದ ಗಟ್ಟಿ ತನವನ್ನು, ಚಿಂತನಾಶೀಲತೆಯನ್ನು ಪಸರಿಸಿದ ಅಜಾನುಬಾಹು ಶಕ್ತಿಶಾಲಿ, ಬುದ್ಧಿವಂತ ದೇವ ಮಾರುತಿಯಂತೆ  ಸಾಹಿತ್ಯಕವಾಗಿ ಬಲಿಷ್ಠ ರಾಗಿದ್ದರು. ಇಂತಹ ಅಪರೂಪದ ಕನ್ನಡದ ವಾಗ್ಮಿ ಇದೀಗ ನಮ್ಮಿಂದ ಅಗಲಿರುವುದು ಈ ಭಾಗದ ಜನರ ನೋವು ಮುಗಿಲು ಮುಟ್ಟಿದೆ‌.

ವಾಸ್ತು ನೊಡದೆ ವಾಸ್ತವದಲ್ಲಿ ನಡೆದು ಮೌಡ್ಯತೆಯ ಬೇರು ಕಿತ್ತು ಹಾಕಲು ತಮ್ಮ ವೈಚಾರಿಕ ವಿಚಾರಗಳ ಮೂಲಕ ಸಮಾಜದಲ್ಲಿ ತಾಂಡವಾಡುತ್ತಿರುವ ಮೌಢ್ಯತೆಯ ವಿರುದ್ಧ ಹೋರಾಡಿದ ಕನ್ನಡದ ಮಹಾನ್ ವಿದ್ವಾಂಸರೆಂದು ಅನೇಕ ಸಾಹಿತಿಗಳು ತಮ್ಮ ಮನದಾಳದ ಮಾತು ದುಃಖದಿಂದ ಹಂಚಿಕೊಳ್ಳುತ್ತಾರೆ.

57 ವರ್ಷಗಳ ಕಾಲ ಬದ್ದತೆಯ ಬದುಕಿನಲ್ಲಿ ಹಿಗ್ಗದೆ ಕುಗ್ಗದೆ ಸದಾ ಸಮತೆ ಮಮತೆಯ ಸೇತುವೆಯ ಮೇಲೆ ಬದುಕು ಸಾಗಿಸಿಗೊಂಡು ಎಲ್ಲರನ್ನು ಪ್ರೀತಿಸುವ ಮನೋಭಾವ ಮಾದರಿಯಾಗಿದೆ.

ಡಾ. ಈಶ್ವರಯ್ಯ ಮಠ ಅವರು ಸುರಪುರ ತಾಲೂಕಿನ ದೇವರಗೋನಾಲದ ಸಿದ್ದರಾಮಯ್ಯ ಹಾಗೂ ಅಕ್ಕನಾಗಮ್ಮ ಎಂಬ ಸ್ವಾಮಿ‌ ಮನೆತನದ ದಂಪತಿಗಳ ಪುಣ್ಯಗರ್ಭದಲ್ಲಿ 1964 ರಲ್ಲಿ ಹುಟ್ಟಿದ್ದರು.ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು
ಸ್ವ ಗ್ರಾಮ ದೇವರ ಗೋನಾಲದಲ್ಲಿ ಮುಗಿಸಿ,ಪದವಿ ಪೂರ್ವ ಹಾಗೂ ಪದವಿ ಹಂತದ ಶಿಕ್ಷಣವನ್ನು ಸುರುಪುರದ ಪ್ರಭು ಮಹಾ ವಿದ್ಯಾಲದಲ್ಲಿ ಮುಗಿಸಿ ಮುಂದಿನ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಲಬುರ್ಗಿಯಲ್ಲಿ ಎಮ್ ಎ,ಎಮ್ ಫಿಲ್ ಮತ್ತು ಪಿ ಹೆಚ್ ಡಿ ಯು ಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು.

1991 ರಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಎಮ್ ಎಸ್ ಆಯ್ ಪದವಿ ಮಹಾ ವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದರು.
ಇದೀಗ ಕಲಬುರ್ಗಿಯ ಶ್ರೀಮತಿ ವಿ.ಜಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ವಿಭಾಗದ ಸಹಾ ಪ್ರಾಧ್ಯಾಪಕರಾಗಿ ಕಾರ್ಯ ದಕ್ಷತೆಯಿಂದ ನಿರ್ವಹಿಸುತ್ತಾ ಕಲಬುರ್ಗಿಯ ಜನತೆಯ ಪ್ರೀತಿಗೆ ಪಾತ್ರರಾಗಿದ್ದರು.

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯ ಸಂಪಾದನೆಯ ಜವಾಬ್ದಾರಿಯುನ್ನು ಮುಂದಾಳತ್ವ ವಹಿಸಿ ಅಚ್ಚುಕಟ್ಟಾಗಿ ಮಾಡುವ ಮೂಲಕ ಮಾರ್ಗದರ್ಶಕರು ಕೂಡಾ ಆಗಿದ್ದರು.

ಬಸವಾದಿ ತತ್ವವನ್ನು ಅಳವಡಿಸಿಕೊಂಡು ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ಖಂಡಿಸುತ್ತಾ ಜನರಲ್ಲಿ ಆತ್ಮವಲೋಕನ ಮಾಡಿಕೊಳ್ಳುವಂತಹ ಜಾಗೃತಿಯ ಉಪನ್ಯಾಸಗಳನ್ನು ಕೈಗೊಂಡು ಮೌಢ್ಯತೆಯ ವಿರುದ್ಧ ಖಡಕ್ ಮಾತನಾಡುವ ಡಾ. ಈಶ್ವರಯ್ಯ ಮಠ ಅವರು ನಡೆದು ಬಂದ ದಾರಿ ನಮಗೆಲ್ಲ ದಾರಿ ದೀಪವಾಗಿದೆ.

ಮನುಷ್ಯತ್ವದ ನೆಲೆಗಟ್ಟಿನ ಮೇಲೆ ತಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯು ಕೂಡ ಬಹಳ ಅರ್ಥಪೂರ್ಣತೆಯಿಂದ ಮುನ್ನಡೆಯುವುದರ ಮೂಲಕ ಬೆಳೆಯುವ ಮೊಳಕೆಗಳಿಗೆ ಬೆನ್ನೆಲುಬಾಗಿ ನಿಂತು ಉತ್ತಮ ಮಾರ್ಗದರ್ಶನ ನೀಡುವ ವಿಶಾಲ ಮನೋಭಾವ ಹೊಂದಿದರು.

ಅನೇಕ ಬಾರಿ ಕನ್ನಡ ಸಾಹಿತ್ಯದ ಸಮ್ಮೇಳನಗಳಲ್ಲಿಡಾ. ಈಶ್ವರಯ್ಯ ಮಠ ಅವರ ಪ್ರಗತಿಪರ ಉಪನ್ಯಾಸವನ್ನು ಕೇಳಿ ಕನ್ನಡದ ಪಂಡಿತರು ಬೆರಗಾಗಿದ್ದಾರೆ.

ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೂಡ ತಮ್ಮದೇ ದೃಷ್ಟಿಕೋನದಲ್ಲಿ ಸಾಹಿತ್ಯದ ಕೃಷಿ ಮಾಡಿದ್ದರು.

ಕನ್ನಡ ಸಾಹಿತ್ಯದ ಸಮ್ಮೇಳನಗಳ ಸ್ಮರಣ ಸಂಚಿಕೆಗಳ ಸಂಪಾದನೆ ,ಕಲ್ಯಾಣ ಕರ್ನಾಟಕದ ಸಾಧಕ-ಬಾಧಕಗಳ ಕುರಿತು ಅನೇಕ ಲೇಖನಗಳನ್ನು ಬರೆಯುವ ಮೂಲಕ ಈ ಭಾಗದ ಜನರಿಗೆ ಮಾಹಿತಿಯನ್ನು ಒದಗಿಸಿ ಕೊಡುವಲ್ಲಿ ಯಶಸ್ವಿಯಾದರು.

ಒಟ್ಟಾರೆಯಾಗಿ ಈಶ್ವರಯ್ಯ ಮಠ ಅವರ ಬದುಕು-ಬರಹ ವೃತ್ತಿ ಹಾಗೂ ಪ್ರವೃತ್ತಿಯಲ್ಲಿ ಪ್ರಾಮಾಣಿಕತೆಯ ವ್ಯಕ್ತಿಯಾಗಿ ಈ ಕಲ್ಯಾಣ ಕರ್ನಾಟಕದ ಸಾಹಿತ್ಯ ಕ್ಷೇತ್ರದ ಶಕ್ತಿಯಾಗಿ ಬೆಳದು ಇಂದು ನಮ್ಮಿಂದ ಬಾಹ್ಯವಾಗಿ ಅಗಲಿರಬಹುದು .ಆದರೆ ಭೌತಿಕವಾಗಿ ನಮ್ಮೊಂದಿಗೆ ಅವರ ವಿಚಾರಗಳು ಜೀವಂತವಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಕನ್ನಡದ ಸಾಂಸ್ಕೃತಿಕ ಮನಸ್ಸುಗಳು ಸ್ಮರಿಸುತ್ತಾರೆ.

ಡಾ.ಈಶ್ವರಯ್ಯ ಮಠ ಅವರು ವಿರುದ್ಧ ಮೂಢನಂಬಿಕೆಗಳನ್ನು ಕಡೆಗಣಿಸಿ ಸಮಾಜಕ್ಕೆ ಸಂದೇಶವನ್ನು ನೀಡಲು ಸ್ವಂತ ತಮ್ಮನ ಮದುವೆ ಹೋಳಿ ಹುಣ್ಣಿಮೆಯ ದಿನದಂದು ಮದುವೆ ವಿಜೃಂಭಣೆಯಿಂದ ಮಾಡುವ ಮೂಲಕ ಸಮಾಜಕ್ಕೆ ಧನಾತ್ಮಕ ಚಿಂತನೆಗಳನ್ನು ಅರಿತುಕೊಳ್ಳಲು ಈಶ್ವರಯ್ಯ ಮಠರವರು ಕಾರ್ಯವನ್ನು ಕೈಗೊಂಡು ಮೌಡ್ಯತೆಯಲ್ಲಿ ಮುಳುಗಿರುವ ಮನಸ್ಸುಗಳಿಗೆ ಜಾಗೃತಿ ಮೂಡಿಸಲು ಮುಂದಾಗಿರುವ ಕಾರ್ಯ ಶ್ಲಾಘನೀಯ.

ಡಾ.ಈಶ್ವರಯ್ಯ ಮಠ ಅವರ ಸಾಂಸ್ಕೃತಿಕ ಪರಿಚಯ

ಹೈದರಾಬಾದ್‌ ಕರ್ನಾಟಕ ಪ್ರದೇಶದ ಶೈಕ್ಷ ಣಿಕ ಮತ್ತು ವಚನ ಸಾಹಿತ್ಯ, ಸಾಂಸ್ಕೃತಿಕ ಪರಿಸರದಲ್ಲಿ ವೈಚಾರಿಕ ಹಾಗೂ ಕ್ರಿಯಾಶೀಲ ವ್ಯಕ್ತಿಯಾಗಿರುವ ಡಾ.ಈಶ್ವರಯ್ಯ ಮಠ ಅವರು ಒಟ್ಟು 29 ಗ್ರಂಥಗಳನ್ನು ಪ್ರಕಟಿಸಿದ್ದಾರೆ.

ಸ್ವರವಚನ ಸಾಹಿತ್ಯದ ಕುರಿತು ಪಿಎಚ್‌ಡಿ ಪದವಿಗಾಗಿ ಮಂಡಿಸಿದ ಸಂಶೋಧನಾ ಪ್ರಬಂಧ ಎರಡು ಬಾರಿ ಮರುಮುದ್ರಣಗೊಂಡಿದೆ. ಓದುವುದನ್ನೇ ಹವ್ಯಾಸ ಮಾಡಿಕೊಂಡಿರುವ ಶ್ರೀಯುತರ ಮನೆಯ ಗ್ರಂಥಾಲಯದಲ್ಲಿ ಇಂದಿಗೂ ಐದು ಲಕ್ಷ ರೂ.ಗಳ ಪುಸ್ತಕ ಭಂಡಾರ ಕಾಣಬಹುದಾಗಿದೆ.

500ಕ್ಕೂ ಹೆಚ್ಚು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸಭೆ, ಸಮ್ಮೇಳನ, ಸಮಾರಂಭ, ವಿಚಾರ ಸಂಕಿರಣ ಹಾಗೂ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ವಿಷಯ ಪರಿಣಿತರಾಗಿ, ಉಪನ್ಯಾಸಕರಾಗಿ ಮಠ ಪಾಲ್ಗೊಂಡಿದ್ದಾರೆ.

ಇದರ ಜತೆಗೆ, ಆಕಾಶವಾಣಿ, ದೂರದರ್ಶನದಲ್ಲಿ ಅನೇಕ ಉಪನ್ಯಾಸ, ಭಾಷಣ, ಚರ್ಚೆ, ಸಂವಾದ ಮತ್ತು ವಿಶ್ಲೇಷಣಾ ಸಂದರ್ಶನಗಳು ಪ್ರಸಾರಗೊಂಡಿವೆ. ಇದೆಲ್ಲದರ ಜತೆಗೆ, ಡಾ.ಈಶ್ವರಯ್ಯ ಮಠ ಅವರು ಬಸವಣ್ಣನವರ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ‘ಋುಣಭಾರ’ ನಾಟಕವು ದೂರದರ್ಶನ ವಾಹಿನಿಯಲ್ಲಿ ಹತ್ತಾರು ಬಾರಿ ಪ್ರದರ್ಶನಗೊಂಡಿದೆ.

“ನಾಡ ಕಂಡ ಅತ್ಯಂತ ವಾಗ್ಮಿ ಗಳಲ್ಲಿ ಈಶ್ವರಯ್ಯ ಮಠ ಅವರು ಕೂಡಾ ಒಬ್ಬರು. ವೈಚಾರಿಕ ನೆಲೆಗಟ್ಟಿನ ಮೇಲೆ ವಿಚಾರಮಾಡುವ ಪ್ರಗತಿಪರ ಚಿಂತಕರು.ಇಂತಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡ ಈ ನಾಡು ಸಾಂಸ್ಕೃತಿಕ, ಸಾಹಿತ್ಯಕ ಲೋಕ ಬಡವಾಗಿದೆ ಎಂದು ಹೇಳಲು ತುಂಬಾ ದುಃಖಕರ ಸಂಗತಿ.”

– ಡಾ.ಗಾಳೆಪ್ಪ ಪೂಜಾರಿ
  ಸಾಹಿತಿ ಯಾದಗರಿ.

****

“ನಾಡಿನ ಪ್ರತಿಭೆ ಉತ್ತಮ ವಾಗ್ಮಿ ಪ್ರಗತಿಪರ ಚಿಂತಕ, ಮಾರ್ಗದರ್ಶಕ, ಲೇಖಕ, ಶರಣ ಸಾಹಿತ್ಯದ ಕುರಿತು ಅಪಾರ ಅಧ್ಯಯನ ಮಾಡಿದ್ದಾರೆ ಹಾಗೂ ನಾಗಚಂದ್ರನ ಕುರಿತು ಕೂಡ ಅಧಿಕೃತವಾಗಿ ಮಾತನಾಡಿದ್ದಾರೆ.ಇಂತಹ ಒಬ್ಬ ಕ್ರಿಯಾಶೀಲ ಈಶ್ವರಯ್ಯ ಮಠ ಅವರನ್ನು ಕಳೆದುಕೊಂಡ ಕಲ್ಬುರ್ಗಿ ಕನ್ನಡಸಾಹಿತ್ಯಪರಿಷತ್ತು ಕಂಗಾಲಾಗಿದೆ”.

– ಪಿ.ಮಾನು. ಸಗರ.

Related Articles

Leave a Reply

Your email address will not be published. Required fields are marked *

Back to top button