ಯಾದಗಿರಿ- ಕ್ರೀಡೆಗಳಿಂದ ಆರೋಗ್ಯ ವೃದ್ಧಿ : ಮಲ್ಲಿಕಾರ್ಜುನರೆಡ್ಡಿ ಕಂದಕೂರ
ಕ್ರೀಡೆಗಳಿಂದ ಆರೋಗ್ಯ ವೃದ್ಧಿ : ಮಲ್ಲಿಕಾರ್ಜುನರೆಡ್ಡಿ ಕಂದಕೂರ
ಯಾದಗಿರಿ : ದೈಹಿಕ ಶ್ರಮದ ಕ್ರೀಡೆಗಳಿಂದ ಮನೋಲ್ಲಾಸದ ಜೊತೆಗೆ ದೇಹಾರೋಗ್ಯವೂ ವೃದ್ಧಿಯಾಗುತ್ತದೆ ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಪುತ್ರರಾದ, ಜೆಡಿಎಸ್ ಯುವ ಮುಖಂಡ ಮಲ್ಲಿಕಾರ್ಜುನರೆಡ್ಡಿ ಕಂದಕೂರ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ವಡ್ನಳ್ಳಿ ಗ್ರಾಮದಲ್ಲಿ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಗ್ರಾಮೀಣ ಮಟ್ಟದ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡುತ್ತಾ, ಯುವ ಶಕ್ತಿ ಸದಾ ಕ್ರಿಯಾಶೀಲತೆಯಿಂದ ಕೂಡಿರಬೇಕು. ಸದಾ ನಮ್ಮನ್ನು ಉಲ್ಲಾಸಿತವಾಗಿರಿಸಲು ಕ್ರೀಡೆಗಳು ಅತ್ಯವಶ್ಯಕವಾಗಿದೆ. ಆಟದಲ್ಲಿ ಸೂಲು-ಗೆಲುವು ಎರಡೂ ಇರುತ್ತವೆ, ಇಲ್ಲಿ ಭಾಗವಹಿಸುವಿಕೆ ಬಹಳ ಮುಖ್ಯವಾಗಿರುತ್ತದೆ.
ಗೆದ್ದವರು ಹಿಗ್ಗದೇ, ಸೋತವರು ಕುಗ್ಗದೇ ಪರಸ್ಪರ ಉತ್ತಮ ಬಾಂಧವ್ಯದೊಂದಿಗೆ ಸಾಮರಸ್ಯದಿಂದ ಆಟವಾಡಲು ಸಲಹೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಯುವಕರು ಅಂತರಜಾಲದ ಡಿಜಿಟಲ್ ಗೇಮ್ಗಳಿಗೆ ಕಾಲಕಳೆಯುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ.
ದೈಹಿಕ ಶ್ರಮದ ಆಟಗಳನ್ನು ಆಡುವ ಮೂಲಕ ದೇಹಾರೋಗ್ಯವನ್ನು ಸಂಪಾದಿಸಿಕೊಳ್ಳಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಕಂದಕೂರ ಅವರು ಬ್ಯಾಟಿಂಗ್ ಮಾಡುವ ಮೂಲಕ ಕ್ರಿಕೇಟ್ ಪಂದ್ಯಾವಳಿಯ ಆಟಕ್ಕೆ ಚಾಲನೆ ನೀಡಿದರು. ಈ ವೇಳೆ ಪಂದ್ಯಾವಳಿಯ ಆಟಗಾರರು, ಊರಿನ ಗಣ್ಯರು, ಕ್ರಿಡಾಭಿಮಾನಿಗಳು ಉಪಸ್ಥಿತರಿದ್ದರು.