ಶತ ಶತಮಾನಗಳಿಂದಲೂ ಹೆಣ್ಣಿನ ದೌರ್ಜನ್ಯ ಮುಂದುವರೆದಿದೆ-ಡಾ.ಬಾಳಿ
ಎರಡೂ ಕಾಲೂರಿ ನಡೆಯಲು ಕಲೆತದ್ದೆ ಹೆಣ್ಣಿನಿಂದ-ಡಾ.ಮೀನಾಕ್ಷಿ ಬಾಳಿ ಅಭಿಮತ
ಯಾದಗಿರಿ, ಶಹಾಪುರಃ ಶತ ಶತಮಾನಗಳಿಂದಲೂ ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಕ್ರೌರ್ಯ ನಡೆಯುತ್ತಿದೆ. ಹೆಣ್ಣು ಕೇವಲ ಭೋಗದ ವಸ್ತುವೆಂದು ನಮ್ಮೆಲ್ಲರ ಮನಸ್ಸುಗಳಲ್ಲಿ ವಿಷ ಬೀಜ ಬಿತ್ತಲಾಗಿದೆ. ಇದು ಅನ್ಯಾಯದ ಪರಮಾವಧಿ ಎಂದು ಖ್ಯಾತ ಚಿಂತಕಿ ಡಾ.ಮೀನಾಕ್ಷಿ ಬಾಳಿ ಪ್ರತಿಪಾದಿಸಿದರು.
ಸ್ಥಳೀಯ ಬಸವಮಾರ್ಗ ಪ್ರತಿಷ್ಠಾನದವತಿಯಿಂದ ಲಿಂ.ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ ನಡೆದ ಬಸವ ಬೆಳಕು 91 ರ ಕಾರ್ಯಕ್ರಮದಲ್ಲಿ ಅನುಭಾವಿಗಳಾಗಿ ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಸೃಷ್ಟಿಯ ಸಂರಚನೆ ವೈವಿಧ್ಯತೆಯಿಂದ ಕೂಡಿದೆ. ಧನಾತ್ಮಕ ಹಾಗೂ ಋಣಾತ್ಮಕವಾದ ಶಕ್ತಿಗಳು ಅಗತ್ಯವಾಗಿ ಬೇಕು. ಭಗವಂತನ ಚಿಂತನೆಯಲ್ಲಿ ಇಲ್ಲದ ತಾರತಮ್ಯವನ್ನು ಮನುಷ್ಯನಾದವನು ಮಾಡಿಕೊಂಡ. ಮೂಲತಃ ಮನುಷ್ಯ ಡಾರ್ವಿನ ಸಿದ್ಧಾಂತದ ಪ್ರಕಾರ ಮಂಗನಿಂದ ಮಾನವ. ಮಂಗನಂತೆ ನಾಲ್ಕು ಕಾಲೂರಿ ನಡೆಯುತ್ತಿದ್ದ, ಮನುಷ್ಯ ಪ್ರಾಣಿ ಎರಡು ಕಾಲೂರಿ ನಡೆಯಲು ಕಲಿತ್ತದ್ದು ಹೆಣ್ಣಿನ ಮೂಲಕ. ಒಂದು ಪ್ರದೇಶದಲ್ಲಿ ನೆಲೆ ನಿಂತು ಉತ್ತು ಬಿತ್ತಿ ಬೆಳೆಯುವ ಅನಿವಾರ್ಯತೆ ಗಂಡಿಗೆ ಉಂಟಾಗುವಂತೆ ಮಾಡಿದ್ದೆ ಹೆಣ್ಣು.
ಅಲೆಮಾರಿಯಾಗಿದ್ದ ಜೀವನವನ್ನು ಒಂದೆಡೆ ನಿಲ್ಲುವಂತೆ ಪ್ರೇರೇಪಿಸಿ ಕುಟುಂಬದ ಮಕ್ಕಳನ್ನು ಗಂಡನನ್ನು ತನ್ನ ಪ್ರೀತಿಯ ತೆಕ್ಕೆಯಲ್ಲಿಟ್ಟು ಸಾಕಿದವಳು ಹೆಣ್ಣು. ಮಾತೃ ಪ್ರಧಾನವಾಗಿದ್ದ ಮಾನವ ಸಮುದಾಯವನ್ನು ತುಳಿದು, ಗಂಡು ಮೇಲು ಎಂಬ ಭಾವನೆ ತಳೆದದ್ದು ಮಾರಕವಾಗಿದೆ.
ಶರಣರು ಮಹಿಳೆಯರ ಕುರಿತಾದ ಸನಾತನ ಪರಂಪರೆಯ ನಿಲುವನ್ನು ಖಂಡ ತುಂಡವಾಗಿ ಖಂಡಿಸಿದರು. ಮಹಿಳೆಯರು ಮತ್ತು ಪುರುಷರಲ್ಲಿ ಭಿನ್ನ ಭಿನ್ನ ಎನ್ನುವುದಕ್ಕೆ ಆಗುವುದೆ ಇಲ್ಲ ಎಂಬ ವೈಜ್ಞಾನಿಕ ಅರಿವನ್ನು ಮೂಡಿಸಿದರು.
ಸಾಧನೆಗೆ ಮೈಲಿಗೆ ಮುಟ್ಟು ಅಡೆತಡೆ ಆಗಬಾರದು. ನೈಸರ್ಗಿಕ ಕ್ರಿಯೆಗಳಿಲ್ಲದೆ ಯಾವ ಪುರುಷನೂ ಜನ್ಮವೆತ್ತಿ ಬಂದಿಲ್ಲ. ಎಲ್ಲಾ ಮಹಾನ್ ಮಹಾನ್ ಸಾಧಕರು ಹುಟ್ಟಿದ್ದು ತಾಯಿಯ ಉದರದಲ್ಲಿ ಎಂಬ ಪ್ರಜ್ಞೆ ಎಲ್ಲರಲ್ಲೂ ಶರಣರು ಒಡಮೂಡಿಸಿದರು ಎಂದು ಮಾರ್ಮಿಕವಾಗಿ ಬಣ್ಣಿಸಿದರು.
ಹೆಣ್ಣು ಗ್ಲಾಮರ್ ಇರುವುದರಿಂದ ಅವಳ ಮೇಲೆ ನಿರಂತರ ಅತ್ಯಾಚಾರವಾಗುತ್ತಿದೆ ಎನ್ನುವುದು ಮೂರ್ಖವಾದ. ಸಣ್ಣ ಸಣ್ಣ ಮಕ್ಕಳ ಮೇಲೂ ನಡೆದಿರುವ ಪೈಶಾಚಿಕ ಕೃತ್ಯಕ್ಕೆ ಕಾರಣ ಹೆಣ್ಣು ಭೋಗದ ವಸ್ತುವೆಂಬ ದಾಷ್ಟ್ರ್ಯದ, ವಿವೇಕರಹಿತ ತಿಳುವಳಿಕೆ ಎಂದವರು ಖಾರವಾಗಿ ಪ್ರತಿಕ್ರಿಯಿಸಿದರು.
ಹೆಣ್ಣು, ಹಲಗೆ ಮತ್ತು ದನ ಬಾರಿಸಿಕೊಳ್ಳುವುದಕ್ಕೆ ಇರುವ ವಸ್ತುಗಳು ಎಂಬ ವೇದೋಕ್ತಿಯ ಮಾತುಗಳನ್ನು ಖಂಡಿಸಿದ ಶರಣರು ವೇದಕ್ಕೆ ಒರೆಯ ಕಟ್ಟುವೆ ಎಂದರು. ಶಾಸ್ತ್ರಕ್ಕೆ ನಿಗಳವನಿಕ್ಕುವೆ. ತರ್ಕದ ಬೆನ್ನ ಬಾರನೆತ್ತುವೆ ಎಂದು ಘೋಷಿಸುವ ಮೂಲಕ ಸನಾತನಿಗಳಿಗೆ ಬಿಸಿ ಮುಟ್ಟಿಸಿದರು.
ತಂದೆ ಆಕಸ್ಮಿಕವಾದರೆ ತಾಯಿ ವಾಸ್ತವಿಕ ಸತ್ಯ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದರು. ಹೆಣ್ಣನ್ನು ನೋಡಿದರೆ ಚಿತ್ತ ಚಂಚಲವಾಗುತ್ತದೆ ಎಂಬ ವಾದವನ್ನು ಒಪ್ಪಲಾಗದು. ಗಂಡನ್ನು ನೋಡಿದ ಹೆಣ್ಣಿಗೂ ಅದೆ ಭಾವ ಉಂಟಾಗುತ್ತಿದ್ದರೂ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಶಕ್ತಿ ಹೆಣ್ಣಿಗೆ ಇದೆ. ಗಂಡು ಮನಸ್ಸುಗಳಿಗೆ ಅದು ಇಲ್ಲವೆ ಇಲ್ಲ ಎಂದು ವಾಸ್ತವಿಕ ಸಂಗತಿಗಳೊಂದಿಗೆ ವಿವರಿಸಿದರು.
ಪ್ರತಿಯೊಂದು ಮಗು ಹುಟ್ಟುವಾಗ ತಾಯಿಯಾದವಳು ಬಕೇಟ್ ಗಟ್ಟಲೆ ರಕ್ತ ಹರಿಸಬೇಕಾಗುತ್ತದೆ. ಪ್ರತಿ ಮಗುವಿನ ಹುಟ್ಟು ಹೆಣ್ಣಿಗೆ ಪುನರ್ಜನ್ಮವಿದ್ದಂತೆ. ತಾಯಿಯ ಒಡಲೊಳಗೆ ಹುಟ್ಟಿದ ಮಗು ದೊಡ್ಡವನಾಗುತ್ತಲೆ ಆಕೆಯನ್ನು ತಾತ್ಸಾರದಿಂದ ಕಾಣುವ ಮನಸ್ಥಿತಿಯಿಂದ ನಾವೆಲ್ಲ ಹೊರಬರಬೇಕಾದರೆ ವಚನ ಸಾಹಿತ್ಯದ ಅಧ್ಯಯನ ಪ್ರಮುಖವಾಗಿದೆ ಎಂದರು.
ಸಭೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ವಕೀಲರಾದ ಸಾಲೋಮನ್ ಆಲಫ್ರೆಡ್ ಮಾತನಾಡಿ, ಹೆಣ್ಣಿಗೆ ಕಳಂಕ ತರುವ ಕೆಲಸದಲ್ಲಿ ಗಂಡು ತೊಡಗಬಾರದು. ಸೃಷ್ಠಿಯಲ್ಲಿ ಹೆಣ್ಣು ಗಂಡು ಇಬ್ಬರೂ ಸಮಾನ ಎಂಬುದನ್ನು ವಚನಕಾರರು ಬದುಕಿ ತೋರಿಸಿದ್ದಾರೆ. ಶರಣರ ವಚನಗಳ ಹಿನ್ನೆಲೆಯಲ್ಲಿ ನಮ್ಮ ಬದುಕನ್ನು ಕಟ್ಟಿಕೊಂಡರೆ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಪ್ರೀತಿ, ವಿಶ್ವಾಸ, ಹಾಗೂ ಕಕ್ಕುಲತೆಗಳಿಂದ ನೋಡಲು ಸಾಧ್ಯವಾಗಲಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ದೇವರಾಜು ಅರಸು ಕಾಲೇಜಿನ ದೇವೇಂದ್ರ ಮೇಟಿ ವಹಿಸಿದ್ದರು. ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಾವತಿ ಸತ್ಯಂಪೇಟೆ, ಕಾವೇರಿ ಮತ್ತು ಗೀತಾ ಶರಣ ಗೀತೆ ಹಾಡಿದರು. ಪ್ರಥಮದಲ್ಲಿ ಅಮೋಘ ಸತ್ಯಂಪೇಟೆಯವರಿಂದ ವಚನ ಗಾಯನ ನಡೆಯಿತು. ಡಾ.ಎಸ್.ಎಸ್. ನಾಯಕ ಸ್ವಾಗತಿಸಿದರು.
ಸಭೆಯಲ್ಲಿ ವಿಶ್ವನಾಥರೆಡ್ಡಿ ಗೊಂದಡಗಿ, ಶಿವಲೀಲಾ, ಚಂದ್ರಕಲಾ ಕುಂಬಾರ, ಶರಣಪ್ಪ ಸಲಾದಪುರ, ಎಂ.ಬಿ.ನಾಡಗೌಡ, ಬಿರಾದಾರ, ತಿಪ್ಪಣ್ಣ ಮಾಸ್ಟರ್, ನಾಗರತ್ನ ಜಾಲವಾದಿ, ಡಾ.ಭೀಮರಾಯ ಲಿಂಗೇರಿ, ಯಂಕಪ್ಪ ಅಲೆಮನಿ, ಗುಂಡಣ್ಣ ಯಾದಗಿರ, ಗುಂಡಪ್ಪ ತುಂಬಗಿ, ಶಿವಶಂಕರ ಔರಸಂಗ, ಶಿವಯೋಗಪ್ಪ ಮುಡಬೂಳ ಮತ್ತು ಸಂಗಡಿಗರು ಭಾಗವಹಿಸಿದ್ದರು. ಕೊನೆಯಲ್ಲಿ ರಾಜು ಕುಂಬಾರ ವಂದಿಸಿದರು.