ಧ್ಯಾನ, ಯೋಗದಿಂದ ಉತ್ತಮ ಜ್ಞಾನ ಶಕ್ತಿ ಉತ್ಪತ್ತಿಃ ಶಿರವಾಳ
ಸಕರಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಿಃ ರಾಜಯೋಗಿನಿ ವಿಜಯ ಅಕ್ಕ
ಯಾದಗಿರಿಃ ಬದುಕಿಗೆ ಸಕರಾತ್ಮಕ ಚಿಂತನೆಯ ಅಗತ್ಯವಿದೆ. ಅದನ್ನು ಮೈಗೂಡಿಸಿಕೊಂಡಲ್ಲಿ ಶಾಂತಿ ಸಮಧಾನದ ಸುಂದರ ಜೀವನ ರೂಪಿಸಿಕೊಳ್ಳಬಹುದು ಎಂದು ಶಾಸಕ ಗುರು ಪಾಟೀಲ್ ಶಿರವಾಳ ಹೇಳಿದರು.
ಜಿಲ್ಲೆಯ ಶಹಾಪುರ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಮಂಗಳವಾರ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಆಯೋಜಿಸಿದ್ದ ನನ್ನ ಭಾರತ ಸ್ವರ್ಣಿಮ ಭಾರತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಒತ್ತಡದ ಜೀವನದಲ್ಲಿ ಮನುಷ್ಯನ ಆರೋಗ್ಯ ಹದಗೆಡುತ್ತಿದೆ. ಮಹಾ ನಗರಗಳಲ್ಲಿ ರಾತ್ರಿ ಹಗಲು ಬಿಡುವಿಲ್ಲದೆ ದುಡಿಯುತ್ತಿರುವ ಜನರು ಇಂದು ಆಧ್ಯಾತ್ಮಿಕ ಜ್ಞಾನ ಸಂಪಾದನೆಯನ್ನು ಮರೆತಿದ್ದಾರೆ. ಬರಿ ಹಣ ಗಳಿಕೆಯೊಂದೆ ಅವರ ತಲೆಯಲ್ಲಿದೆ. ಮತ್ತು ತಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಅದರಲ್ಲೂ ಹೆಚ್ಚಿನ ದುಡ್ಡು ಗಳಿಸುವಂತೆ ಕ್ಷೇತ್ರದಲ್ಲಿಯೇ ಬೆಳೆಸಬೇಕೆಂಬ ಮಹಾದಾಸೆಯಿಂದ ಮಕ್ಕಳಿಗೆ ಇಷ್ಟವಿಲ್ಲದ ಶಿಕ್ಷಣ ಕೊಡಿಸುವ ಮೂಲಕ ತಮ್ಮ ಆಸೆಯನ್ನು ಈಡೇರಿಸಿಕೊಳ್ಳುತ್ತಿರುವುದು ವಿಷಾಧನೀಯ.
ಬರಿ ಹಣ ಗಳಿಕೆ ಮಾಡಬೇಕೆಂಬ ಒಂದೇ ಆಸೆಯಿಂದ ಎಲ್ಲವನ್ನು ಮರೆತಿದ್ದಾರೆ. ತಂದೆ ತಾಯಿ ಮಕ್ಕಳ ಭಾವನಾತ್ಮಕ ಸಂಬಂಧವು ಅಳಿಸಿ ಹೋಗುತ್ತಿದೆ. ಹೀಗಾಗಿ ಸಮಾಜ ಬೇರೆ ದಿಕ್ಕಿನಡೆಗೆ ಸಾಗುತ್ತಿದೆ ಅದರ ವೇಗ ಗಮನಿಸಿದರೆ ಮುಂದೆ ದೊಡ್ಡ ಅಪಘಾತವೇ ಕಾದಿದೆ ಎಂಬ ಭಯ ಶುರುವಾಗಿದೆ.
ಕಾರಣ ಉತ್ತಮ ಬದುಕು ನಿರ್ವಹಣೆಗೆ ಸರಳತೆಯನ್ನು ಮೈಗೂಡಿಸಿಕೊಳ್ಳಬೇಕು. ಪ್ರಕೃತಿದತ್ತವಾಗಿ ದೈವಿಸ್ವರೂಪವಾಗಿ ಜೀವನಕ್ಕೆ ಬೇಕಾಗಿರುವ ಎಲ್ಲವನ್ನು ನಿಸರ್ಗದಲ್ಲಿ ಅಡಗಿದೆ. ಅದನ್ನು ನಾವು ಸಕರಾತ್ಮಕವಾಗಿ ಕಂಡುಕೊಳ್ಳಬೇಕಿದೆ. ಆಸ್ವಾಧಿಸಬೇಕಿದೆ. ಧ್ಯಾನ, ಯೋಗದಿಂದ ಅಂತಹ ಜ್ಞಾನದ ಶಕ್ತಿ ನಮ್ಮಲ್ಲಿ ಬರಲಿದೆ.
ಅಲ್ಲದೆ ಯಾವುದೇ ಆರೋಗ್ಯ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಸಮಾಧನದಿಂದ ಎದುರಿಸುವ ಶಕ್ತಿಯು ನಮ್ಮಲ್ಲಿ ಜಾಗೃತಿಯಾಗುತ್ತದೆ. ಅದನ್ನು ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯ ದೇಶದ ಯಾವುದೇ ವಿಶ್ವ ವಿದ್ಯಾಲಯದಲ್ಲಿ ಕಲಿಯದ ಬದುಕಿನ ಪಾಠವನ್ನು ಅವರು ಕಲಿಸಲಿದ್ದಾರೆ. ಸರ್ವರು ಈ ಸಂಸ್ಥೆಯಡಿ ಭಾಗಿಗಳಾಗಿ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ರಾಜಯೋಗಿನಿ ಬ್ರಹ್ಮಾಕುಮಾರಿ ವಿಜಯಾ ಅಕ್ಕನವರು ಸ್ವರ್ಣಿಮ ಭಾರತ ನಿರ್ಮಾಣ ಮತ್ತು ಮನುಷ್ಯ ಸಕರಾತ್ಮಕವಾಗಿ ಬದುಕುವುದು ಹೇಗೆ ಎಂಬುದನ್ನು ಸವಿವರವಾಗಿ ಉಪನ್ಯಾಸ ನೀಡಿದರು.
ಮಾಜಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ, ಡಾ.ಶರಣು ಗದ್ದುಗೆ ಮಾತನಾಡಿದರು. ಫಾದರ್ ಫೆಡ್ರಿಕ್ ಡಿಸೋಜಾ, ಬಂತೆ ಮೆಟಪಾಲ ಸಾರಿಪುತ್ರ, ಗುರು ಕಾಮಾ, ಶಿವರಾಜ ದೇಶಮುಖ, ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಎಲ್ಲಾ ಮಹಿಳೆಯರು ಸಹೋದರಿ ಸಹೋದರತ್ವದಿಂದ ಕಾಣಬೇಕೆಂದು ಪ್ರಮಾಣ ವಚನ ಬೋಧಿಸಲಾಯಿತು. ಮುಂಚಿತವಾಗಿ ನಗರದಲ್ಲಿ ಬೈಕ್ ರ್ಯಾಲಿ ಜರುಗಿತು. ಮಹಿಳೆಯರು, ಯುವಕರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.