ವಿಶೇಷ ಮಿಷನ್ ಇಂದ್ರಧನುಷ್ ಅಭಿಯಾನಕ್ಕೆ ಚಾಲನೆ
ಮಕ್ಕಳನ್ನು ಮಾರಕ ಕಾಯಿಲೆಗಳಿಂದ ರಕ್ಷಿಸಲು ಲಸಿಕೆ ಹಾಕಿಸಿ-ಡಾ. ಪಟೇಲ್
ಯಾದಗಿರಿಃ ಒಂಬತ್ತು ಮಾರಕ ಕಾಯಿಲೆಗಳಾದ ಬಾಲ್ಯ ಕ್ಷಯ, ಗಂಟಲು ಮಾರಿ, ನಾಯಿಕೆಮ್ಮು, ಧನುರ್ವಾಯು, ಕಾಮಾಲೆ, ನಿಮೋನಿಯಾ, ಪೋಲಿಯೊ, ದಡಾರ, ರುಬೆಲ್ಲಾ ರೋಗಗಳಿಂದ ರಕ್ಷಿಸಲು ಲಸಿಕೆ ಹಾಕಿಸಬೇಕು. ಗರ್ಭಿಣಿಯರು ಕೂಡಾ ಧನುರ್ವಾಯು ಲಸಿಕೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಹಬೀಬ್ ಉಸ್ಮಾನ್ ಪಟೇಲ್ ಅವರು ಮನವಿ ಮಾಡಿದರು.
ಜಿಲ್ಲೆಯ ವಡ್ಡನಳ್ಳಿ ಗ್ರಾಮದಲ್ಲಿ ಶುಕ್ರವಾರ ಗ್ರಾಮ ಸ್ವರಾಜ್ ಅಭಿಯಾನದ ವಿಶೇಷ ತೀವ್ರಗೊಂಡ ಮಿಷನ್ ಇಂದ್ರಧನುಷ್ ಜಿಲ್ಲಾ ಮಟ್ಟದ ಮೂರನೇ ಸುತ್ತಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾದಗಿರಿ ಜಿಲ್ಲೆಯಲ್ಲಿ 0-2 ವರ್ಷದ 2,453 ಲಸಿಕೆ ವಂಚಿತ ಮಕ್ಕಳು ಹಾಗೂ 117 ಗರ್ಭಿಣಿಯರಿದ್ದು, ಎಲ್ಲಾ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆ ಮತ್ತು ಚುಚ್ಚುಮದ್ದು ಹಾಕಿಸಬೇಕೆಂದು ಅವರು ಕೋರಿದರು. ಜಿಲ್ಲಾ ಕುಷ್ಠ ರೋಗ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಭಗವಂತ ಅನವಾರ ಅವರು ಮಾತನಾಡಿ, ಆರೋಗ್ಯ ಇಲಾಖೆಯಿಂದ ಉಚಿತ ಕುಷ್ಠರೋಗ ಚಿಕಿತ್ಸೆ, ಕಣ್ಣಿನ ಪರಿ ಶಸ್ತ್ರಚಿಕಿತ್ಸೆ, ಮಾನಸಿಕ ರೋಗಗಳ ಚಿಕಿತ್ಸೆ, ಕ್ಷಯ ರೋಗಗಳ ಚಿಕಿತ್ಸೆ ಹಾಗೂ ಆರೋಗ್ಯದ ಬಗ್ಗೆ ಮಾರ್ಗದರ್ಶನ ನೀಡಿದರು.
ಜಿಲ್ಲಾ ಆರ್ಸಿಎಚ್ ಅಧಿಕಾರಿಗಳಾದ ಡಾ|| ಲಕ್ಷ್ಮೀಕಾಂತ ಅವರು ಮಾತನಾಡಿ, ವಡ್ಡನಳ್ಳಿ ಗ್ರಾಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸ್ಥಾಪನೆಯಾಗಿದೆ. ಈ ಕೇಂದ್ರದಲ್ಲಿ 12 ಸೇವೆಗಳಾದ ತಾಯಿ ಮತ್ತು ಮಗುವಿನ ಆರೈಕೆ, ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ಚಿಕಿತ್ಸೆ, ಹದಿಹರಿಯದವರ ಆರೋಗ್ಯ ಮತ್ತು ಶಿಕ್ಷಣ ರಾಷ್ಟ್ರೀಯ ಕಾರ್ಯಕ್ರಮ ಮಾಹಿತಿ ಮುಂತಾದ ಸೇವೆಗಳನ್ನು ರಿಜ್ವಾನಾ ಎಮ್.ಎಲ್.ಹೆಚ್.ಪಿ ನೀಡುತ್ತಿದ್ದಾರೆ. ಸಾರ್ವಜನಿಕರು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಹಕರಿಸಬೇಕೆಂದು ಅವರು ಕೋರಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಲಿಂಗಪ್ಪ ಅವರು ಮಾತನಾಡಿ, ಪ್ರತಿ ಆರೋಗ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸುತ್ತೇವೆ. ಮಕ್ಕಳಿಗೆ ಚುಚ್ಚುಮದ್ದು ಕೂಡಾ ನೀಡಲು ಸಹಕರಿಸುತ್ತೇವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಪ್ಪ, ಬಸವರಾಜ, ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಕುಮಾರ, ಭಾಗಪ್ಪ, ಸುದರ್ಶನ, ರಾಮಕೃಷ್ಣ ಲಿಲಿ ಮಾರ್ಗರೆಟ್, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಂಕರ ಬಿರಾದಾರ ಕಾರ್ಯಕ್ರಮ ನಿರೂಪಣೆ ಮಾಡಿದರು. ಡಾ.ಝರೀನಾ ಪೀರದೋಸ್ ಅವರು ವಂದನಾರ್ಪಣೆ ಮಾಡಿದರು.