ಶಹಾಪುರಃ ಸೇಂಟ್ ಪೀಟರ್ ಶಾಲೆಯಲ್ಲಿ ಕ್ರಿಸ್ಮಸ್ ಸಂಭ್ರಮ
ವಾರದ ರಜೆ ಇಲ್ಲದೆ ದುಡಿಯುವ ಕಾಯಕ ಜೀವಿ ತಾಯಿ-ಶಿವಪೂಜೆ
ಯಾದಗಿರಿ, ಶಹಾಪುರಃ ಮಕ್ಕಳ ಲಾಲನೆ, ಪಾಲನೆ ಮುಂದಿನ ಅವರ ಭವಿಷ್ಯದ ಒಳಿತಿಗೆ ತಾಯಿ ಎಂಬ ಜೀವ ನಿರಂತರ ಯಾವುದೇ ಒಂದು ದಿನ ರಜೆ ತೆಗೆದುಕೊಳ್ಳದೆ ಮಕ್ಕಳಿಗಾಗಿ ಇಡಿ ಬದುಕು ಸವೆಸುವವಳು ಯಾರಾದ್ರೂ ಇದ್ದರೆ ಅದು ತಾಯಿ ಮಾತ್ರ ಹೀಗಾಗಿ ಎಲ್ಲಾ ಮಕ್ಕಳು ಮೊದಲು ತಾಯಿಯನ್ನು ಗೌರವಿಸಬೇಕು. ವಯಸ್ಸಾದಾಗ ಅವಳಿಗೆ ನೀವು ತಾಯಿಯಾಗಿ ನೋಡಿಕೊಳ್ಳಬೇಕೆಂದು ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ ಹೇಳಿದರು.
ನಗರದ ಸೇಂಟ್ ಪೀಟರ್ ಶಾಲೆ ಆವರಣದಲ್ಲಿ ಕ್ರಿಸ್ಮಸ್ ಹಬ್ಬದಂಗವಾಗಿ ಆಯೋಜಿಸಿದ ಕ್ರಿಸ್ಮಸ್ ಉತ್ಸವ ಕಾರ್ಯಕ್ರಮವನ್ನು ಕೇಕ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸೇಂಟ್ ಪೀಟರ್ ಶಾಲೆಗಳು ಕೇವಲ ಶಹಾಪುರದಲ್ಲಿ ಮಾತ್ರವಲ್ಲಿ ಕಲಬುರ್ಗಿ, ಯಾದಗಿರಿ ಸೇರಿದಂತೆ ಬೀದರ ಜಿಲ್ಲೆಗಳಲ್ಲೂ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡುತ್ತಿವೆ. ಶಿಸ್ತು, ಸಂಯಮ, ಶಿಕ್ಷಣದ ಜೊತೆಗೆ ಸಾಂಸ್ಕೃತಿಕವಾಗಿ ಮಕ್ಕಳನ್ನು ಬೆಳೆಯಲು ಸಹಕಾರ ನೀಡುತ್ತಿವೆ. ಇಂತಹ ಶಾಲೆಗಳಲ್ಲಿ ವಿಧ್ಯಾಭ್ಯಾಸ ಮಾಡುವ ನೀವೆಲ್ಲರೂ ಧನ್ಯರು.
ಕ್ರೈಸ್ತ್ ಸಮುದಾಯ ಪ್ರೀತಿ, ಶಾಂತಿ, ಸಮಾನತೆ ಮತ್ತು ಸಮಧಾನ, ಸೌಹಾರ್ಧತೆಗೆ ಒತ್ತು ನೀಡುತ್ತದೆ. ಎಲ್ಲಾ ಸಮುದಾಯ ಧರ್ಮಳಿಗೆ ಮಾನ್ಯತೆ ಗೌರವ ನೀಡುತ್ತದೆ. ಅಲ್ಲದೆ ಮುಖ್ಯವಾಗಿ ಶಾಲಾ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುತ್ತದೆ. ಮಕ್ಕಳು ಅಷ್ಟೆ ಗುಣಮಟ್ಟದ ಶಿಕ್ಷಣ ಪಡೆದು ಮುಂದೆ ಸತ್ಪ್ರಜೆಗಳಾಗಿ ಬಾಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಲಬುರ್ಗಿಯ ಮದರ್ ತೆರೇಸಾ ಚಾರ್ಟೇಬಲ್ ಹಾಸ್ಪಿಟಲ್ ಟ್ರಸ್ಟ್ ನಿರ್ದೇಶಕ ಫಾದರ್ ಸಂತೋಷ ಡೈಸ್ ಅಧ್ಯಕ್ಷತೆವಹಿಸಿದ್ದರು. ಬಿಇಓ ರುದ್ರಗೌಡ ಪಾಟೀಲ್, ಸಿಪಿಐ ಹನುಮರಡ್ಡೆಪ್ಪ, ಬ್ರಹ್ಮಕುಮಾರಿ ಉಷಾ ಅಕ್ಕ, ಸೇಂಟ್ ಪೀಟರ್ ಶಾಲೆಯ ಪಿಟಿಎ ಉಪಾಧ್ಯಕ್ಷ ಮಲ್ಲಿಕಾರ್ಜುನ ಮುದನೂರ, ಸಿಆರ್ಸಿ ರೇಣುಕಾ ಪಾಟೀಲ್, ಸೇಂಟ್ ಮೀಟರ್ ಚರ್ಚ್ ಉಪಾಧ್ಯಕ್ಷ ಸುರೇಶ ರೆಡ್ಡಿ ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕ ಫಾದರ್ ಫೆಡ್ರಿಕ್ ಡಿಸೋಜಾ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಯಿನಿ ಸಿಸ್ಟರ್ ರೀನಾ ಡಿಸೋಜಾ ವಂದಿಸಿದರು. ಶಾಲಾ ಶಿಕ್ಷಕ, ಶಿಕ್ಷಕಿಯರು ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.