ಹಾರಣಗೇರಾ ಬಸಂದೇವರ ಗುಡಿ ಗೋಪುರಕ್ಕೆ ಬಡಿದ ಸಿಡಿಲು, ಭಕ್ತರಲ್ಲಿ ಆತಂಕ
ಗುಡಿಯೊಳಗಿನ ದೇವರ ಪೂರ್ತಿಗಳು ಭಗ್ನ-ಭಕ್ತರಲ್ಲಿ ಆತಂಕ
ಶಹಾಪುರಃ ಗ್ರಾಮದ ಪುರಾತನ ಕಾಲದ ಬಸವಣ್ಣ ದೇವರ ಗುಡಿ ಗೋಪುರಕ್ಕೆ ಗುರುವಾರ ರಾತ್ರಿ ಸುರಿದ ಧಾರಕಾರದ ಮಳೆ, ಗಾಳಿ ಜೊತೆಗೆ ಹಠಾತ್ತನೆ ಸಿಡಿಲು ಬಡಿದು ಗೋಪುರ ಸೇರಿದಂತೆ ಗುಡಿಯೊಳಗಿನ ಮೂರ್ತಿಗಳು ಭಗ್ನಗೊಂಡ ಘಟನೆ ತಾಲೂಕಿನ ಹಾರಣಗೇರಾ ಗ್ರಾಮದಲ್ಲಿ ನಡೆದಿದೆ.
ಪುರಾತನ ಬಸವಣ್ಣ ಗುಡಿಯ ಮೇಲೆ ಮೂರು ವರ್ಷಗಳ ಹಿಂದೆ ಗೋಪುರ ನಿರ್ಮಿಸಲಾಗಿ ದೇವಸ್ಥಾನ ಪುನರುಜ್ಜೀವನಗೊಳಿಸಲಾಗಿತ್ತು. ಅಲ್ಲದೆ ಪ್ರತಿ ವರ್ಷ ರಥೋತ್ಸವ ಜಾತ್ರೆ ಧಾರ್ಮಿಕ ಕಾರ್ಯಗಳು ಭಕ್ತಿಪೂರ್ವಕವಾಗಿ ಸಂಭ್ರಮದಿಂದ ಜರುಗುತ್ತಿದ್ದವು.
ಆದರೆ ಮೊನ್ನೆ ರಾತ್ರಿ ಹಠಾತ್ತನೆ ಬಡಿದ ಸಿಡಿಲು ದೇವಸ್ಥಾನವನ್ನು ಭಗ್ನಗೊಳಿಸಿದೆ. ಅದೃಷ್ಟವಶಾತ್ ಈ ವೇಳೆಗೆ ಮಂದಿರದಲ್ಲಿ ಯಾರೊಬ್ಬರು ಇರಲಿಲ್ಲ. ಕಾರಣ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಘಟನೆ ಕುರಿತು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಶ್ರೀದೇವರ ಮೂರ್ತಿ ಮತ್ತು ಗೋಪುರ ಭಗ್ನಗೊಂಡ ಹಿನ್ನೆಲೆ ಭಕ್ತಾಧಿಗಳಲ್ಲಿ ಆತಂಕದ ಛಾಯೆ ಮನೆ ಮಾಡಿದೆ. ಈ ಕುರಿತು ಗ್ರಾಮಸ್ಥರು ಹಲವಾರು ಸ್ವಾಮೀಜಿಗಳನ್ನು ಸಂಪರ್ಕಿಸಿ ಮುಂದಿನ ಧಾರ್ಮಿಕ ಕಾರ್ಯ ಕೈಗೊಳ್ಳುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.