ಇದೆಂಥ ಸರ್ಕಾರ.? ಮೃತ ರೈತನ ಕುಟುಂಬಕ್ಕೆ ದಕ್ಕದ ಪರಿಹಾರ.!
ಕಂದಾಯ ಇಲಾಖೆ ಸಿಬ್ಬಂದಿ ಮಾಡಿದ ಎಡವಟ್ಟು, ಕೈಗೆಟುಕದ ಪರಿಹಾರ
ಪರಿಹಾರಕ್ಕಾಗಿ ಮಗನ ಅಲೆದಾಟ, ಪಂಚನಾಮೇ ವರದಿ ವಿಳಂಬ, ಯಾರದೋ ತಪ್ಪು ಯಾರಿಗೆ ಬರೆ
ಮಲ್ಲಿಕಾರ್ಜುನ ಮುದ್ನೂರ
ಯಾದಗಿರಿಃ ಶಹಾಪುರಃ 2018 ಜನೇವರಿ 6 ರಂದು ಶಹಾಪುರ ವಿಧಾನಸಭೆ ವ್ಯಾಪ್ತಿ ಬರುವ ಸುರಪುರ ತಾಲೂಕಿನ ಗೌಡಗೇರಾ ಗ್ರಾಮದ ಮಾನಪ್ಪ ತಂದೆ ಸೋಮರಾಯ ಭಂಟನೂರ (55) ಎಂಬ ರೈತನೇ ಸಾಲಬಾಧೆಯಿಂದ ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದ. ಘಟನೆ ನಡೆದು ಹತ್ತು ತಿಂಗಳು ಕಳೆದರೂ ಇದುವರೆಗೆ ಮೃತ ರೈತನ ಕುಟುಂಬಕ್ಕೆ ಪರಿಹಾರ ದೊರೆಯದ ಕಾರಣ ಕುಟಂಬಸ್ಥರು ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ.
ಕೆಂಭಾವಿ ಠಾಣಾ ವ್ಯಾಪ್ತಿ ನಡೆದ ಘಟನೆ ಇದಾಗಿದ್ದು, ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಮೃತ ರೈತನ ಕುರಿತು ಜ.6, 2018 ರಂದು ಪ್ರಕರಣ ದಾಖಲಾಗಿದೆ. ಅಲ್ಲದೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ವರದಿ ಸಾಕ್ಷಿ ಸಮೇತ ಸಿದ್ಧಪಡಿಸಿಕೊಂಡು ತೆರಳಿದ್ದರು.
ಆದರೆ ಪಂಚನಾಮೆ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಸುವಲ್ಲಿ ಸುರಪುರ ತಾಲೂಕಿನ ಕಂದಾಯ ನಿರೀಕ್ಷಕರು 6 ತಿಂಗಳು ವಿಳಂಬ ಮಾಡಿದ್ದಲ್ಲದೆ, ಮೃತ ರೈತನ ದಿನಾಂಕ ಜನೇವರಿ 6, 2018ರ ಬದಲು ಜೂನ್ 14, 2018 ಎಂದು ತಪ್ಪಾಗಿ ನಮೂದು ಮಾಡಿರುವುದೆ ಪರಿಹಾರ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಕುಟಂಬಸ್ಥರು ದೂರಿದ್ದಾರೆ.
ಅಲ್ಲದೆ ಮೃತ ದಿನದಂದು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಸಾಕ್ಷಿಗಳ ಹೆಸರು ಮತ್ತು ಮರಣೋತ್ತರ ಪರೀಕ್ಷೆ ನಡೆಸಿದಾಗ ಮಾಡಿದ ಸಾಕ್ಷಿಗಳ ಹೆಸರು ಸರಿ ಇದೆ.
ಆದರೆ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರು ಸಲ್ಲಿಸಿದ ವರದಿಯಲ್ಲಿ ತಪ್ಪು ಮಾಡಲಾಗಿದೆ. ಕಂದಾಯ ಸಿಬ್ಬಂದಿ ಮಾಡಿದ ತಪ್ಪಿಗೆ ರೈತ ಕುಟುಂಬ ರೋದನೆ ಪಡುವಂತಾಗಿದೆ.
ಅಂದು ಘಟನಾ ದಿನ ಸ್ಥಳಕ್ಕೆ ಆಗಮಿಸಿ ತಯಾರಿಸಿಕೊಂಡಿದ್ದ ಪಂಚನಾಮೆ ವರದಿ ಸಲ್ಲಿಸುವ ಬದಲು ಹೊಸ ಪಂಚನಾಮೆ ವರದಿಯನ್ನು ತಮ್ಮ ಆಫೀಸ್ನಲ್ಲಿ ಕುಳಿತು ತಯಾರಿಸಿರುವ ಹೊಸ ವರದಿಯನ್ನು ಕಂದಾಯ ನಿರೀಕ್ಷರು ಸಲ್ಲಿಸಿದ್ದು, ಹೊಸ ವರದಯಲ್ಲಿ ಸಾಕ್ಷಿಗಳ ಹೆಸರು ಮತ್ತು ಮೃತಪಟ್ಟ ದಿನಾಂಕ ಬದಲು ಮಾಡಿದ್ದಾರೆ. ಹೀಗಾಗಿ ಪರಿಹಾರಕ್ಕೆ ವಿಳಂಬವಾಗುತ್ತಿದೆ ಎಂದು ಜಿಲ್ಲಾಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೃತ ರೈತನ ಮಗ ಬಸವರಾಜ ತನ್ನ ಅಳಲು ತೋಡಿಕೊಂಡಿದ್ದಾರೆ.
ಕಂದಾಯ ಸಿಬ್ಬಂದಿ ಪ್ರಥಮವಾಗಿ ತಯಾರಿಸಿದ ಪಂಚೆನಾಮೆ ವರದಿ ಕಳೆದುಕೊಂಡಿದ್ದು, ಅವರ ನಿಷ್ಕಾಳಜಿಯಿಂದ ಹೊಸ ವರದಿ ಸಲ್ಲಿಸಿರುವದಲ್ಲಿ ತಪ್ಪು ಮಾಹಿತಿ ನೀಡಿರುವ ಕಾರಣ ರೈತ ಕುಟುಂಬ ಕಣ್ಣೀರನಲ್ಲಿ ಕೈತೊಳೆಯುವಂತಾಗಿದೆ.
ಮೃತ ರೈತನ ಪತ್ನಿ ಬಸಮ್ಮ ಭಂಟನೂರ ಈ ಕುರಿತು ಮರಣೋತ್ತರ ಪರೀಕ್ಷೆಯ ವೈದ್ಯರ ವರದಿ ಪ್ರತಿ ಮತ್ತು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಪ್ರತಿ ಪ್ರಕರಣದ ಯುಡಿಆರ್ ಪ್ರತಿ ಸಮೇತ ಈಗಾಗಲೇ ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸುರಪುರ ತಾಲೂಕಾ ಆಡಳಿತದ ಕಂದಾಯ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಿಗರು ಸಲ್ಲಿಸಿದ ತಪ್ಪು ವರದಿಯಿಂದ ನಮಗೆ ಅನ್ಯಾಯವಾಗಿದ್ದು, ಕೂಡಲೇ ನಮಗೆ ನ್ಯಾಯ ದೊರಕಿಸಿಕೊಡಬೇಕು ಮತ್ತು ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಜನಪ್ರತಿನಿಧಿಗಳ ನಿರ್ಲಕ್ಷ ಅಧಿಕಾರಿಗಳ ಮನಬಂದಂತೆ ಸಲ್ಲಿಸಿದ ವರದಿಯಿಂದ ಮೃತ ರೈತನ ಕುಟುಂಬ ಬೀದಿಗೆ ಬಂದಿದೆ. ಸಾಲಬಾಧೆ ಹೊರೆ ಹೊತ್ತ ಕುಟುಂಬಸ್ಥರು ಮನೆಯ ಯಜಮಾನನ್ನು ಕಳೆದುಕೊಂಡ ನೋವಿನೊಡನೆ ನಿತ್ಯ ಯಾದಗಿರಿ ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರ ಕಚೇರಿಗೆ ಅಲೆದಾಡುವಂತಾಗಿದೆ.
ನಿತ್ಯ ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಕಳೆದ ಹತ್ತು ತಿಂಗಳಿಂದ ಪರಿಹಾರಕ್ಕಾಗಿ ಕುಟುಂಬಸ್ಥರು ಪರದಾಡುವಂತಾಗಿದೆ. ಮುಗ್ಧ ರೈತಾಪಿ ಜನರು ನಿತ್ಯ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಕಾರಣ ಕೂಡಲೇ ಜಿಲ್ಲಾಧಿಕಾರಿಗಳು ಸಮಗ್ರ ದಾಖಲಾತಿಗಳನ್ನು ಪರಿಶೀಲಿಸಿ ನೊಂದ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿದ್ದ ಕುಟುಂಬದ ರೋದನೆ ಕೇಳೋರಾರು.?
ಒಂದು ವರ್ಷ ಆಯ್ತೀರಿ..ನಮ್ಮ ಮನೆಯವ್ರು ಸತ್ತು. ಸುರಪುರ ತಹಸೀಲ್ಗೆ ಹೋದ್ರೂ ಯಾರು ಕಿವ್ಯಾಗ ಹಾಕಂಗಿಲ್ರಿ. ನಾನು ನನ್ನ ಮಗ ತಿರುಗಿ ತಿರುಗಿ ಸಾಕಾಗ್ಯಾದ್ರಿ. ಯಾದಗಿರಿಗಿ ಎರಡು ಮೂರು ಸಲ ಆಯ್ತ್ರಿ ಹೋಗಕತ್ತು. ಸಾಲ ಹಂಗೆ ಕುಂತದ್ರಿ. ನಿತ್ಯ ದುಡದ್ರ ಹೊಟ್ಟಿಗೆ ಒಂದಿಷ್ಟು ಊಟ ಕಾಣ್ತೀವಿ. ಅಕಡೆ ಕೆಲ್ಸ್ ಬಿಟ್ರ್ ನಡೆಯಲ್ಲ ಈಕಡೆ ಗೌರ್ಮೆಟ್ ರೊಕ್ಕ ಬರಲಿಲ್ಲಾಂದ್ರ ನಾವೂ ಸಾಯಿಬೇಕ್ಗಾತದ್ರಿ.
–ಬಸ್ಸಮ್ಮ ಭಂಟನೂರ. ಮೃತ ರೈತನ ಪತ್ನಿ.
——————————————————–
ನಮ್ಮ ತಂದೆಯವರು ಮೃತಪಟ್ಟು ಹತ್ತು ತಿಂಗಳಾಯಿತು. ಕಂದಾಯ ಇಲಾಖೆ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಿಗರು ತಪ್ಪು ವರದಿ ಸಲ್ಲಿಕೆಯಿಂದ ನಮಗ ಪರಿಹಾರ ವಿಳಂಬ ಆಗ್ಯಾದ್ರಿ. ಇದಕ್ಕೆಲ್ಲ ಅವರೇ ಕಾರಣ. ಠಾಣೆ ಮತ್ತು ಆಸ್ಪತ್ರೆಯಲ್ಲಿ ವರದಿ ದಿನಾಂಕ ಸಾಕ್ಷಿ ಎಲ್ಲಾ ಸರಿ ಇದೆ. ಕಂದಾಯ ವರದಿ ಮಾತ್ರ ಮನಬಂದಂತೆ ಮಾಡಿದ್ದು, ಅಲ್ಲದೆ 6 ತಿಂಗಳು ವಿಳಂಬ ಮಾಡಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದು, ಯಾವ ಕಾರಣಕ್ಕೆ ವಿಳಂಬ ಮಾಡಿದ್ದೀರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಯಾರೋ ಮಾಡಿದ ತಪ್ಪಿಗೆ ನಮಗ ಅನ್ಯಾಯ ಆಗಿದೆ. ಇದನ್ನು ಜಿಲ್ಲಾಧಿಕಾರಿಗಳು ಸರಿಪಡಿಸಿ ಪರಿಹಾರ ನೀಡಬೇಕು.
–ಬಸವರಾಜ ಭಂಟನೂರ. ಮೃತ ರೈತನ ಮಗ.
————————————————————