ಕರುನಾಡು ಕಂಡ ಅದ್ಭುತ ಕಲಾವಿದ ಡಾ.ವಿಷ್ಣು- ರಾಜಕುಮಾರ
ವಿಷ್ಣುದಾದಾ ಜನ್ಮದಿನ ಆಚರಣೆ
ಶಹಾಪುರಃ ನಾಡಿನಲ್ಲಿ ಹಲವಾರು ನಟರು, ಕಲಾವಿದರು ಬೆಳೆದಿದ್ದಾರೆ. ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಅದರಲ್ಲಿ ಅಪರೂಪದಲ್ಲಿ ಅಪರೂಪವಾಗಿ ಕರುನಾಡು ಕಂಡ ಅದ್ಭುತ ಕಲಾವಿದ ಎಂದರೆ ಡಾ.ವಿಷ್ಣುವರ್ಧನ ಅವರು ಎಂದು ಭೀಮರಾಯನ ಠಾಣೆಯ ಪಿಎಸ್ಐ ರಾಜಕುಮಾರ ಜಾಮಗೊಂಡ ತಿಳಿಸಿದರು.
ನಗರದ ವಿಶ್ವಜ್ಯೋತಿ ಶಾಲಾ ಆವರಣದಲ್ಲಿ ತಾಲೂಕು ವಿಷ್ಣು ಸೇನಾ ಸಮಿತಿ ಡಾ.ವಿಷ್ಣುವರ್ಧನ ಅವರ ಜನ್ಮ ದಿನ ಅಂಗವಾಗಿ ಹಮ್ಮಿಕೊಂಡ ಸರಳ ಕಾರ್ಯಕ್ರಮ ಉದ್ಘಾಟಸಿ ಅವರು ಮಾತನಾಡಿದರು.
ವಿಷ್ಣುವರ್ಧನ ಅವರು ತಮ್ಮ ಉತ್ಕøಷ್ಠ ಕಲೆಯಿಂದ ಚಿರಪರಿಚಿತರಾಗಿದ್ದಾರೆ. ಆದರೆ ಅವರಲ್ಲಿರುವ ಸದ್ಗುಣಗಳಿಂದ ಇಂದಿಗೂ ಅವರು ಪೂಜಿತಗೊಳ್ಳುತ್ತಿದ್ದಾರೆ. ಕಲಾ ಸೇವೆಯಲ್ಲಿ ತಮ್ಮ ಇಡಿ ಜೀವನ ಮುಡಿಪಾಗಿಟ್ಟ ಅವರು, ಕರ್ನಾಟಕದ ಏಳ್ಗೆಗೆ ಕೈಲಾದ ಸೇವೆ ಸಲ್ಲಿಸಿದ್ದಾರೆ. ಅವರ ಪ್ರತಿ ಸಿನಿಮಾದಲ್ಲಿ ಉತ್ತಮ ಸಂದೇಶ ರವಾನಿಸುವ ಮೂಲಕ ಅಭಿಮಾನಿಗಳ ಮನದಲ್ಲಿ ನೆಲೆಸಿದ್ದಾರೆ.
ಸೂರ್ಯವಂಶ, ಯಜಮಾನ ಸಿನೆಮಾದಿಂದ ಒಡೆದುಹೋಗಿದ್ದ ಎಷ್ಟೋ ಕುಟುಂಬಗಳು ಜೋಡಿಸಿದ ಕೀರ್ತಿ ವಿಷ್ಣುವರ್ಧನ ಅವರಿಗೆ ಸಲ್ಲುತ್ತದೆ. ಸಿನಿಮಾದಲ್ಲಿ ನಟನೆ ಮಾತ್ರವಲ್ಲಿ ವಾಸ್ತವವಾಗಿ ಅವರ ಬದುಕು ಕೂಡ ಅಷ್ಟೆ ಉತ್ತಮ ಶ್ರೇಷ್ಠವಾಗಿ ಇತ್ತು ಎಂಬುದಕ್ಕೆ ಇಂದು ನಾಡಿನಾದ್ಯಂತ ಪೂಜಿತಗೊಳ್ಳುತ್ತಿರುವದೇ ಸಾಕ್ಷಿ ಎಂದರೆ ತಪ್ಪಾಗಲಾರದು ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ, ಬಿಜೆಪಿ ಯುವ ಮುಖಂಡ ಗುರು ದೊಡ್ಮನಿ, ವಿಷ್ಣು ಸೇನಾ ಸಮಿತಿ ತಾಲೂಕು ಗೌರವ ಅಧ್ಯಕ್ಷ ಸೋಮನಗೌಡ, ಡಿಸಿಸಿ ಬ್ಯಾಂಕ್ ಕ್ಯಾಷಿಯರ್ ರಮೇಶ ನಗನೂರ, ತಾಲೂಕು ಅಧ್ಯಕ್ಷ ಉದಯ ನಾಗನಟಗಿ, ಉಪಾಧ್ಯಕ್ಷ ಮಹೇಶ ಕಾಳಪ್ಪ, ಶಾಲಾ ಮುಖ್ಯಸ್ಥ ಚಂದ್ರಶೇಖರ ಹೊಸಮನಿ, ಶರಣು ಸೈದಾಪುರ, ಅಭಿಷೇಕ ಶಿವಪುರ, ಯಲ್ಲಪ್ಪ ನಾಗನಟಗಿ ಸೇರಿದಂತೆ ಅಭಿಮಾನಿ ಬಳಗ ಭಾಗವಹಿಸಿತ್ತು.