ಕಲಬುರಗಿ: ‘ಕರಿಚಿರತೆ’ ಮೇಲೆ ಗುಂಡಿನ ದಾಳಿ!
ಕಲಬುರಗಿಯಲ್ಲಿ ರೌಡಿಶೀಟರ್ ಎನ್ ಕೌಂಟರ್!
ಕಲಬುರಗಿ: ಕುಖ್ಯಾತ ರೌಡಿ ಮಲ್ಲಿಕಾರ್ಜುನ್ ಅಲಿಯಾಸ್ ಕರಿ ಚಿರತೆ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಕಲಬುರಗಿ ತಾಲೂಕಿನ ನಲ್ಲೂರು ಮೂಲದ ರೌಡಿ ಮಲ್ಲಿಕಾರ್ಜುನ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇತ್ತೀಚೆಗಷ್ಟೇ ಹಣಕ್ಕಾಗಿ ಲಕ್ಷ್ಮೀಕಾಂತ ಎಂಬ ವ್ಯಕ್ತಿಯನ್ನು ಭೀಕರವಾಗಿ ಕೊಂದು ದೇಹವನ್ನು ಬಿಸಾಕಿ ಎಸ್ಕೇಪ್ ಆಗಿದ್ದ. ಪರಿಣಾಮ ಮಲ್ಲಿಕಾರ್ಜುನ್ ಮೇಲೆ ಕೋಕಾ ಕಾಯ್ದೆಯನ್ನೂ ಜಾರಿಗೊಳಿಸಲಾಗಿತ್ತು.
ಕೇವಲ 19ವರ್ಷದ ಮಲ್ಲಿಕಾರ್ಜುನ ಹಲವು ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಜನರಲ್ಲಿ ಭೀತಿ ಸೃಷ್ಟಿಸಿದ್ದ. ಪೊಲೀಸರಿಗೆ ಬೇಕಾಗಿದ್ದ ಮಲ್ಲಿಕಾರ್ಜುನ ತಲೆಮರೆಸಿಕೊಂಡು ತಿರುಗುತ್ತಿದ್ದ. ಇಂದು ಕಲಬುರಗಿ ನಗರದ ಹೊರವಲಯದಲ್ಲಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.
ಈ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಅಲ್ಲದೆ ನಾಡ ಪಿಸ್ತೂಲಿನಿಂದ ಪೊಲೀಸರೊಂದಿಗೆ ಗುಂಡಿನ ಚಕಮಕಿ ನಡೆಸಿದ್ದಾನೆ. ಪರಿಣಾಮ ಕಲಬುರಗಿ ಗ್ರಾಮೀಣ ವಿಭಾಗದ ಡಿವೈಎಸ್ಪಿ ಹುಲ್ಲೂರ್, ಪೇದೆಗಳಾದ ಆನಂದ, ಶ್ರೀಶೈಲ್ ಗಾಯಗೊಂಡಿದ್ದು ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಪೈರಿಂಗ್ ಬುಲೆಟ್ ಪ್ರೂಪ್ ಜಾಕೇಟ್ ಹಾಕಿದ್ದರಿಂದ ಡಿವೈಎಸ್ಪಿ ಎಸ್. ಎಸ್.ಹುಲ್ಲೂರ್ ಬದುಕುಳಿದಿದ್ದಾರೆನ್ನಲಾಗಿದೆ.
ಪರಿಸ್ಥಿತಿ ಕೈಮೀರಿದ್ದರಿಂದ ಆತ್ಮರಕ್ಷಣೆಗಾಗಿ ಪೊಲೀಸರು ರೌಡಿ ಮಲ್ಲಿಕಾರ್ಜುನ ಅಲಿಯಾಸ್ ಕರಿಚಿರತೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ರೌಡಿ ಮಲ್ಲಿಕಾರ್ಜುನ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.