ಜನಪೀಡಿತ ನರಪೀಡಿತ ಸರ್ಕಾರ-ಸಿದ್ರಾಮಯ್ಯ
ಜನಪೀಡಿತ ನರಪೀಡಿತ ಸರ್ಕಾರ-ಸಿದ್ರಾಮಯ್ಯ
ಅಂಕೋಲಾಃ ರಾಜ್ಯದಲ್ಲಿರುವದು ಜನಪರ ಸರ್ಕಾರವಲ್ಲ. ನರಪೀಡಿತ, ಜನಪೀಡಿತ ಸರ್ಕಾರ. ಯಡಿಯೂರಪ್ಪ ತನ್ನ ಎರಡು ವರ್ಷದ ಸಾಧನೆಯನ್ನು ತೋರಿಸುತ್ತಿದ್ದಾರೆ. ಆದರೆ ನಾನು ಈ ಸರ್ಕಾರ ಕುರಿತು ನರಪೀಡಕ ಎಂಬ ಪುಸ್ತಕ ಹೊರ ತಂದಿದ್ದೇನೆ. ಅದರಲ್ಲಿ ಜನ ವಿರೋಧಿ ನೀತಿ ಕುರಿತು ವಿವರಿಸಲಾಗಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ರಾಮಯ್ಯ ಗುಡುಗಿದರು.
ತಾಲೂಕಿನ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ನಂತರ ನಗರದ ನಾಡವರ ಸಭಾಭವನದಲ್ಲಿ ಆಯೋಜಿಸಿದ್ದ ಅಹವಾಲು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆಗೆ ನೆರೆ ಪರಿಶೀಲನೆಗೆ ನೂತನ ಸಿಎಂ ಬಸವರಾಜ ಬೊಮ್ಮಾಯಿ ಕಾಟಾಚಾರಕ್ಕೆ ಬಂದು ಹೋಗಿದ್ದಾರೆ. ಸಮರ್ಪಕ ಮಾಹಿತಿ ಪಡೆಯದೆ, ಸಂತ್ರಸ್ತರ ಅಳಲನ್ನು ಆಲಿಸದೆ, ಕಣ್ಣೀರು ಒರೆಸುವ ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.
2019 ರಲ್ಲಿ ನೆರೆ ಬಂದಿದ್ದಾಗ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ನೀಡುವದಾಗಿ ಸುಮಾರು 200 ಕೋಟಿ ಘೋಷಣೆ ಮಾಡಿದ್ದರು. ಆದರೆ ಯಾವುದೇ ಪರಿಹಾರ ಇದುವರೆಗೂ ನೀಡಿರುವದಿಲ್ಲ. ಈಗಲೂ ಸಿಎಂ ಬೊಮ್ಮಾಯಿ ಭೇಟಿ ನೀಡಿ ಸಂತ್ರಸ್ಥರ ಸ್ಥಿತಿಗತಿ ವಿಚಾರಿಸದೆ ಹಾಗೆ ಹೋಗಿದ್ದಾರೆ. ಸಂತ್ರಸ್ಥರ ಭಾವನೆಗೆ ಧಕ್ಕೆ ತಂದಿರುವದು ಖಂಡನೀಯ.
ಸರ್ಕಾರ ವೈಫಲ್ಯವನ್ನು ಅಧಿವೇಶನದಲ್ಲಿ ಸರ್ಕಾರಕ್ಕೆ ತೀವ್ರ ತರಾಟೆ ತೆಗೆದುಕೊಳ್ಳುವ ಮೂಲಕ ನೆರೆ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.