ಕಾವ್ಯ

#ಸಗರನಾಡು ಸಂಕ್ರಾಂತಿ : ‘ಊರ ಉತ್ಸವ’ ನೆನೆದ ಬಸು ಮುದನೂರ್

 

ಸಂಕ್ರಾಂತಿ ಆಚರಣೆ
ಸಗರನಾಡಲಿ
ಬಲು ವಿಜೃಂಭಣೆ
ಬಲಭೀಮ-ಸಂಗಮರ ಪಲ್ಲಕ್ಯೋತ್ಸವ
ಅತಿ ಆಕರ್ಷಣೆ

ಶುಭ ದಿನದಿ ಭಕ್ತರು
ನಸುಕೀಲೆ ಎದ್ದು ರಸ್ತೆ ಉದ್ದಕೂ
ನೀಡುವರು ನೀರು
ಬಣ್ಣ-ಬಣ್ಣದ ತೋರಣವ ಕಟ್ಟಿ
ಹೂವು ಹಾಸಿಗೆಯ ಹಾಸುವರು

ಶುಭ್ರ ಬಟ್ಟೆಯ ಧರಿಸಿ
ದೇವರ ನಮಿಸುತ್ತ
ಸ್ವಾಗತ ಕೋರುತ್ತ
ಭಕ್ತಿ-ಭಾವದಿ ಜೊತೆಸಾಗುತ್ತ
ಸಂಭ್ರಮಿಸುವರು

ಸುತ್ತೂರು ಭಕ್ತರು ಹತ್ತಾರು ಸಾವಿರ
ಜನ ಜಾತ್ರೆಯ ಮದ್ಯೆ ನಾಡ ಆರಾಧ್ಯ ದೇವರ
ಶೃಂಗಾರ ಪಲ್ಲಕ್ಯೋತ್ಸವ
ಕಾಣಲದು ಸ್ವರ್ಗವೇ ಧರೆಗಿಳಿದ
ಸುಮಧುರ ಅನುಭವ

ಜೈಕಾರ ಹಾಕುತ್ತ
ಹೊತ್ತು ನಡೆಯುವರು ಪಲ್ಲಕಿ
ಹತ್ತಾರು ಮೈಲಿ
ಮೇಲು-ಕೀಳೆಂಬ ಬೇಧ
ಮರೆಯುವರು ಅಲ್ಲಿ

ಸನ್ನತಿ  ತಲಪಿ
ಅರಿತು ಅರಿಯದೇ ಗೈದ
ಪಾಪವ ಕಳೆಯೆಂದು
ಭೀಮೆಯ ಮೈಗೆರೆದು
ಪುನೀತರಾಗುವರಲ್ಲಿ
ದೇವರ ಸಾನಿಧ್ಯದಲ್ಲಿ

ಹಿಂದಿರುಗುವ
ಬ್ರಾಹ್ಮೀಸಮಯದಲ್ಲಿ
ಕಂದಿಲು ದಿವಟಿಗೆಗಳ
ಹಿಡಿದ ಭಕ್ತರ ಸಾಲು ಸಾವಿರ
ಜಗಮಗಿಸುವ ಪಲ್ಲಕಿಗಳ
ಮೇಲೆ ರಾಶಿ-ರಾಶಿ ಹೂವುಗಳ ಚಾದಾರ

ಮುಂದೆ ಹೊರಡುವರು
ತೊಗಲ ಚೀಲದಲ್ಲಿ ಶುುದ್ಧಜಲ ಹೊತ್ತು
ತಿತಿ ಆಡುವವರು
ಸರ್ವರಿಗೂ ನೀರ ಚಿಮ್ಮಿಸಿ
ಶುಭ ಸಂಕ್ರಾಂತಿಯಂದು
ಶುಭ್ರಗೊಳಿಸಿ ಶುಭ ಹಾರೈಸುವರು

ಸೇಂಗಾದ ಹೋಳಿಗೆ ಸಜ್ಜೆರೊಟ್ಟಿಯ
ಜೊತೆ ಕಾಳುಪಲ್ಯವ ಸವಿದು
ಬೆಳ್ಳಿ ತಟ್ಟೆಯಲಿ ಎಳ್ಳು-ಬೆಲ್ಲವ ಹಂಚಿ
ಒಳ್ಳೆಯ ಮಾತಾಡಿ ಸ್ನೇಹದಿ ಜತೆಗೂಡಿ
ಆಚರಿಸುವರು ಸಗರನಾಡಲಿ ಸಂಕ್ರಾಂತಿ

ಬಸವರಾಜ ಮುದನೂರ್, ಶಹಾಪೂರ

Related Articles

Leave a Reply

Your email address will not be published. Required fields are marked *

Back to top button