#ಸಗರನಾಡು ಸಂಕ್ರಾಂತಿ : ‘ಊರ ಉತ್ಸವ’ ನೆನೆದ ಬಸು ಮುದನೂರ್
ಸಂಕ್ರಾಂತಿ ಆಚರಣೆ
ಸಗರನಾಡಲಿ
ಬಲು ವಿಜೃಂಭಣೆ
ಬಲಭೀಮ-ಸಂಗಮರ ಪಲ್ಲಕ್ಯೋತ್ಸವ
ಅತಿ ಆಕರ್ಷಣೆ
ಶುಭ ದಿನದಿ ಭಕ್ತರು
ನಸುಕೀಲೆ ಎದ್ದು ರಸ್ತೆ ಉದ್ದಕೂ
ನೀಡುವರು ನೀರು
ಬಣ್ಣ-ಬಣ್ಣದ ತೋರಣವ ಕಟ್ಟಿ
ಹೂವು ಹಾಸಿಗೆಯ ಹಾಸುವರು
ಶುಭ್ರ ಬಟ್ಟೆಯ ಧರಿಸಿ
ದೇವರ ನಮಿಸುತ್ತ
ಸ್ವಾಗತ ಕೋರುತ್ತ
ಭಕ್ತಿ-ಭಾವದಿ ಜೊತೆಸಾಗುತ್ತ
ಸಂಭ್ರಮಿಸುವರು
ಸುತ್ತೂರು ಭಕ್ತರು ಹತ್ತಾರು ಸಾವಿರ
ಜನ ಜಾತ್ರೆಯ ಮದ್ಯೆ ನಾಡ ಆರಾಧ್ಯ ದೇವರ
ಶೃಂಗಾರ ಪಲ್ಲಕ್ಯೋತ್ಸವ
ಕಾಣಲದು ಸ್ವರ್ಗವೇ ಧರೆಗಿಳಿದ
ಸುಮಧುರ ಅನುಭವ
ಜೈಕಾರ ಹಾಕುತ್ತ
ಹೊತ್ತು ನಡೆಯುವರು ಪಲ್ಲಕಿ
ಹತ್ತಾರು ಮೈಲಿ
ಮೇಲು-ಕೀಳೆಂಬ ಬೇಧ
ಮರೆಯುವರು ಅಲ್ಲಿ
ಸನ್ನತಿ ತಲಪಿ
ಅರಿತು ಅರಿಯದೇ ಗೈದ
ಪಾಪವ ಕಳೆಯೆಂದು
ಭೀಮೆಯ ಮೈಗೆರೆದು
ಪುನೀತರಾಗುವರಲ್ಲಿ
ದೇವರ ಸಾನಿಧ್ಯದಲ್ಲಿ
ಹಿಂದಿರುಗುವ
ಬ್ರಾಹ್ಮೀಸಮಯದಲ್ಲಿ
ಕಂದಿಲು ದಿವಟಿಗೆಗಳ
ಹಿಡಿದ ಭಕ್ತರ ಸಾಲು ಸಾವಿರ
ಜಗಮಗಿಸುವ ಪಲ್ಲಕಿಗಳ
ಮೇಲೆ ರಾಶಿ-ರಾಶಿ ಹೂವುಗಳ ಚಾದಾರ
ಮುಂದೆ ಹೊರಡುವರು
ತೊಗಲ ಚೀಲದಲ್ಲಿ ಶುುದ್ಧಜಲ ಹೊತ್ತು
ತಿತಿ ಆಡುವವರು
ಸರ್ವರಿಗೂ ನೀರ ಚಿಮ್ಮಿಸಿ
ಶುಭ ಸಂಕ್ರಾಂತಿಯಂದು
ಶುಭ್ರಗೊಳಿಸಿ ಶುಭ ಹಾರೈಸುವರು
ಸೇಂಗಾದ ಹೋಳಿಗೆ ಸಜ್ಜೆರೊಟ್ಟಿಯ
ಜೊತೆ ಕಾಳುಪಲ್ಯವ ಸವಿದು
ಬೆಳ್ಳಿ ತಟ್ಟೆಯಲಿ ಎಳ್ಳು-ಬೆಲ್ಲವ ಹಂಚಿ
ಒಳ್ಳೆಯ ಮಾತಾಡಿ ಸ್ನೇಹದಿ ಜತೆಗೂಡಿ
ಆಚರಿಸುವರು ಸಗರನಾಡಲಿ ಸಂಕ್ರಾಂತಿ
– ಬಸವರಾಜ ಮುದನೂರ್, ಶಹಾಪೂರ