ಔರಾದಕರ್ ವರದಿ ಜಾರಿಗೆ ಸರ್ಕಾರ ಬದ್ಧ-ಎಂ.ಬಿ.ಪಾಟೀಲ್
ಕಲಬುರಗಿಃ ವ್ಯಕ್ತಿಗಳು ಯಾವ ರೀತಿ ನಡೆದುಕೊಂಡು ಅಪರಾಧಗಳಿಂದ ದೂರವಿರಬೇಕು ಎನ್ನುವುದನ್ನು ೧೨ ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿದ್ದಾರೆ. ಅಂತಹ ವಚನಗಳ ಪಾಲನೆಯಿಂದ ಅಪರಾಧ ಕಡಿಮೆಯಾಗಲಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ನಗರದಲ್ಲಿ ನೂತನವಾಗಿ ಸ್ಥಾಪಿಸಲಾದ ಕಮೀಷನರೇಟ್ ಕಚೇರಿ ಉದ್ಘಾಟಿಸಿದ ನಂತರ ಎಸ್ ಎಂ. ಪಂಡಿತ್ ರಂಗಮಂದಿರದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
” ಕಳಬೇಡ ಕೊಲಬೇಡ..” ವಚನವನ್ನು ಪ್ರಸ್ತಾಪಿಸಿದ ಸಚಿವರು ವಚನಗಳ ಹಿನ್ನೆಲೆ ಅಪರಾಧ ತಡೆಯಲು ಸಹಕಾರಿಯಾಗಿವೆ ಎಂದರು.
ಕಲಬುರಗಿ ನಗರದಲ್ಲಿ ಕಮೀಷನರೇಟ್ ಕಚೇರಿ ಸ್ಥಾಪನೆಯಲ್ಲಿ ಉಂಟಾದ ಅಡೆತಡೆಗಳನ್ನು ಹೇಳಿದ ಪಾಟೀಲ್ ಅವರು ಈ ಭಾಗದ ಹಿರಿಯ ನಾಯಕರಾದ ದಿವಂಗತ ವೀರೇಂದ್ರ ಪಾಟೀಲ್, ಧರಂಸಿಂಗ್ ಹಾಗೂ ಕೇಂದ್ರದ ಮಾಜಿ ಸಚಿವರಾದ ಎಂ.ಮಲ್ಲಿಕಾರ್ಜುನ ಖರ್ಗೆ ಅವರ ಸಹಕಾರವನ್ನು ಸ್ಮರಿಸಿದರು.
ನಗರದ ಜನರ ಬಹುದಿನಗಳ ಕನಸು ಈಗ ನನಸಾಗಿದೆ. ಪೊಲೀಸರು ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಸಾರ್ವಜನಿಕರ ಕೆಲಸ ಮಾಡುತ್ತಿದ್ದಾರೆ. ಅವರ ಸಮಗ್ರ ಅಭಿವೃದ್ದಿಗಾಗಿ ಔರಾಧಕರ್ ವರದಿಯನ್ನು ಜಾರಿಗೆ ತರಲು ಸರಕಾರ ಬದ್ಧವಾಗಿದ್ದು ಈಗಾಗಲೇ ತಾತ್ವಿಕ ಒಪ್ಪಿಗೆಯೂ ನೀಡಲಾಗಿದ್ದು ಮುಖ್ಯಮಂತ್ರಿಗಳೊಂದಿಗೆ ಒಂದೆರಡು ಸಭೆ ನಡೆಸಿ ವರದಿಯನ್ನು ಜಾರಿಗೊಳಿಸಲಾಗುವುದು ಎಂದರು.
ಸಬ್ ಇನ್ಸ್ಪೆಕ್ಟರ್ ಹಾಗೂ ಇನಸ್ಪೆಕ್ಟರ್ ಅವರ ಒಂದು ಸ್ಥಾನದ ಸೇವಾ ಅವಧಿಯನ್ನು ಒಂದು ವರ್ಷದ ಬದಲು ಎರಡು ವರ್ಷಕ್ಕೆ ವಿಸ್ತರಿಸಲು ಚಿಂತನೆ ನಡೆದಿದೆ ಎಂದ ಅವರು,
ಪೊಲೀಸ್ ಇನ್ಸ್ಟಿಟೂಟ್ ಬಲವರ್ಧನೆಗೆ ಈಗಾಗಲೇ ಉದ್ದೇಶಿಸಿದ್ದು ಡಿಜಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ತೆಗೆದುಕೊಳ್ಳಬಹುದಾದ ಅಗತ್ಯ ಸುಧಾರಣೆಯನ್ನು ತೆಗೆದುಕೊಳ್ಳಲಾಗುವುದು.
ಜೊತೆಗೆ ನೆರೆಹೊರೆ ರಾಜ್ಯಗಳಲ್ಲಿ ನ ಪೊಲೀಸ್ ಇಲಾಖೆಯ ಸುಧಾರಣೆಯನ್ನು ಅಧ್ಯಯನ ಮಾಡಿ ನಮ್ಮ ರಾಜ್ಯದಲ್ಲಿಯೂ ಅಂತಹ ಸುಧಾರಣೆಗಳನ್ನು ಜಾರಿಗೆ ತರಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಬೇಡಿಕೆಯನ್ನು ಪ್ರಸ್ತಾಪಿಸಿದ ಸಚಿವರು, ಕಲಬುರಗಿ ನಗರದಲ್ಲಿ ಸೈಬರ್ ಸ್ಪೆಷಲ್ ಸೆಲ್ ಸ್ಥಾಪಿಸಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದರು.
ಸಮಾರಂಭದಲ್ಲಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರು, ಎಂವೈ ಪಾಟೀಲ್, ರಾಜಕುಮಾರ ಪಾಟೀಲ್ ತೇಲ್ಕೂರು, ಬಸವರಾಜ ಮತ್ತಿಮೂಡ, ಕನೀಜ್ ಫಾತೀಮಾ, ಮಲ್ಲಮ್ಮ ವಳಕೇರಿ, ಐಜಿ ಮನೀಷ್ ಕರ್ಬೇಕರ್, ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಸೇರಿದಂತೆ ಮತ್ತಿತರು ಹಾಜಿರಿದ್ದರು.