ಯೂತ್ ಐಕಾನ್ವಿನಯ ವಿಶೇಷ

ವೈಜ್ಞಾನಿಕ ಮನೋಭಾವದ ಸೃಜನಶೀಲ ಶಿಕ್ಷಕ ಬಾನರ್

ವೈಜ್ಞಾನಿಕ ಮನೋಭಾವದ ಸೃಜನಶೀಲ ಶಿಕ್ಷಕ – ಬಸವರಾಜ ಬಾನರ

ಯಾವುದೇ ಸೃಜನಶೀಲ ಚಟುವಟಿಕೆಯು ಹೃದಯದಲ್ಲೇ ಇರುವಂಥದ್ದು. ಆ ಶಕ್ತಿ ಬದುಕಿನ ಒಂದು ಮಹತ್ವದ ಅಂಗವಾಗಿದೆ. ನಾವು ಬಹುವಾಗಿ ಬಯಿಸಿದ್ದನ್ನು ನಮ್ಮೆಡೆಗೆ ಆಕರ್ಷಿಸಿಸುವ ಶಕ್ತಿ ಸೃಜನಶೀಲ ಚಟುವಟಿಕೆಗಿದೆ.

ಭಾರತದ ಅಣು ಪಿತಾಮಹ, ಮಹಾನ್ ವಿಜ್ಞಾನಿ, ಸರಳಜೀವಿ ರಾಷ್ಟ್ರಪತಿಯಾಗಿದ್ದ ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ಈ ಚಿಂತನೆ ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯಿಸುತ್ತದೆ.

ಈ ಹಿನ್ನಲೆಯಲ್ಲಿ ಮಾದರಿ ವಿಜ್ಞಾನ ಶಿಕ್ಷಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ವಿಜ್ಞಾನದ ಸಂಸ್ಥೆಗಳೊಂದಿಗೆ ಒಡನಾಡಿಯಾಗಿ, ಕವಿಯಾಗಿ ಸೃಜನಶೀಲ ಮನಸ್ಸಿನಿಂದ ಶಿಕ್ಕಣ ಕ್ಷೇತ್ರದಲ್ಲಿ ತುಂಬಾ ಕ್ರಿಯಾಶೀಲತೆಯಿಂದ ರಚನಾತ್ಮಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಸವರಾಜ ಎಸ್. ಬಾನರ ಕೋಡ್ಲಾ ಅವರು ವೈಜ್ಞಾನಿಕ ಮನೋಭಾವದ ಸೃಜನಶೀಲ ಶಿಕ್ಷಕರಾಗಿದ್ದಾರೆ.

ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಶರಣಪ್ಪ ಮತ್ತು ಶರಣಮ್ಮ ದಂಪತಿಗಳ ಚೊಚ್ಚಲ ಮಗನಾಗಿ 8.7. 1974 ರಲ್ಲಿ ಜನಿಸಿದ ಬಸವರಾಜ ಬಾನರ ಅವರು, ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಸರ್ಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ ಹೈಸ್ಕೂಲ್ ಶಿಕ್ಷಣ, ಬಾಗಲಕೋಟೆಯ ಶ್ರೀ ಬಸವೇಶ್ವರ ವಿಜ್ಞಾನ ಕಾಲೇಜಿನಲ್ಲಿ ಪಿ.ಯು.ಸಿ ಮತ್ತು ಬಿ.ಎಸ್ಸಿ ಪದವಿ ಅದ್ಯಯನ ಪೂರೈಸಿದ ಅವರು ದಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎಡ್ ಪದವಿ ಹಾಗೂ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಿಂದ ಪ್ರಾಣಿಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

31.08.1998 ರಲ್ಲಿ ವಿಜ್ಞಾನ ಸಹ ಶಿಕ್ಷಕರಾಗಿ ಸರ್ಕಾರದಿಂದ ನೇಮಕಗೊಂಡು, ಸೇಡಂ ತಾಲೂಕಿನ ಹಂದರಕಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ ಜೀವನ ಆರಂಭಿಸಿದರು. ನಂತರ ಸೇಡಂ ತಾಲೂಕಿನ ಮುಧೋಳ, ಶಹಾಪುರ ತಾಲೂಕಿನ ನಾಯ್ಕಲ್, ಯಾದಗಿರಿ ತಾಲೂಕಿನ ಹತ್ತಿಕುಣಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸಿದ ಅವರು ಪ್ರಸ್ತುತ ಯಲಸತ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಾಲೆಯಲ್ಲಿ ಮಕ್ಕಳಿಗೆ ವಿಜ್ಞಾನ ವಿಷಯದ ಪಾಠ ಭೋಧನೆಯ ಜೊತೆಗೆ ಪಾಠಕ್ಕೆ ಸಂಬಂಧಿಸಿದ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪ್ರೇರೆಪಿಸಿ ಅವರಲ್ಲಿರುವ ಸೂಪ್ತವಾದ ಪ್ರತಿಭೆಯನ್ನು ಅನಾವರಣಗೊಳಿಸಲು ಶ್ರಮಿಸಿಸುತ್ತಿದ್ದಾರೆ.

ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ರಸಪ್ರಶ್ನೆ, ವಿಜ್ಞಾನ ವಸ್ತು ಪ್ರದರ್ಶನ, ಪರಿಸರ ಜಾಗೃತಿ, ಮೌಡ್ಯತೆಗಳ ಕುರಿತು ಅರಿವು, ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ವಿಜ್ಞಾನ ಮೇಳ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಲು ಪ್ರಯತ್ನಿಸಿದ್ದಾರೆ.

ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟದ ವಿವಿಧ ವಿಜ್ಞಾನ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಿ ಬಹುಮಾನ, ಪ್ರಶಸ್ತಿ, ಪುರಸ್ಕಾರಗಳನ್ನು ಪಡೆಯಲು ಸ್ಪೂರ್ತಿದಾಯಕರಾಗಿದ್ದಾರೆ.

ಶಹಾಪುರದಲ್ಲಿ ಪ್ರೌಢಶಾಲಾ ವಿಭಾಗದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿ ಕ್ಷೇತ್ರದ ವ್ಯಾಪ್ತಿಗೆ ಬರುವ ವಿವಿಧ ಗ್ರಾಮಗಳ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಮೂಲಕ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡಲು ಮಾರ್ಗದರ್ಶನ ಮಾಡಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ.

ಆರೋಗ್ಯಪೂರ್ಣ ಶೈಕ್ಷಣಿಕ, ಸಾಮಾಜಿಕ ಕಾಳಜಿಗಳನ್ನು ಹೊಂದಿರುವ ಬಸವರಾಜ ಬಾನರ ಅವರು ಒಬ್ಬ ಆದರ್ಶ ಮಾದರಿ ಶಿಕ್ಷಕರಾಗಿ ವಿದ್ಯಾರ್ಥಿ ಗಳಲ್ಲಿ ವಿಜ್ಞಾನ ವಿಷಯದಲ್ಲಿ ಕಲಿಕೆಯ ಅಭಿರುಚಿಯನ್ನು ಮೂಡಿಸುತ್ತಾ ಅವರಲ್ಲಿ ಒಳ್ಳೆಯ ಸಂಸ್ಕಾರ, ಸಾಮರ್ಥ್ಯ, ಅಭಿರುಚಿಗಳನ್ನು ಬೆಳೆಸುತ್ತಾ ವಿದ್ಯಾರ್ಥಿಗಳಲ್ಕಿ ತಾಳ್ಮೆ, ದೃಡ ವಿಶ್ವಾಸ, ಸಾಧಿಸುವ ಛಲ, ದೈರ್ಯ ಮುಂತಾದವುಗಳ ಮೂಲಕ ಸಾಧನೆಯ ಹಾದಿಯನ್ನು ಹೇಗೆ ಕಂಡು ಕೊಳ್ಳಬೇಕು ಎಂಬುದನ್ನು ತಿಳಿವಳಿಕೆ ಮತ್ತು ಜ್ಞಾನ ನೀಡಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಗೆ, ಉಜ್ವಲವಾದ ಭವಿಷ್ಯ ಕಂಡುಕೊಳ್ಳಲು ಮತ್ತು ಯಶಸ್ವಿಯಾಗಿ ಗುರಿ ಸಾಧಿಸಲು ಕಾರಣವಾಗುತ್ತಿರುವ ತುಂಬಾ ಕ್ರಿಯಾಶೀಲ ಶಿಕ್ಷಕರಾಗಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಸಮಾಜಕ್ಕೆ ಒಳ್ಳೆಯದನ್ನು ನೀಡಬೇಕು ಎಂಬ ಸಾತ್ವಿಕ ಹಂಬಲವನ್ನು ತುಂಬಿಕೊಂಡಿರುವ ವಿದ್ವತ್ತ – ವಿನಯಗಳ ಸಂಗಮ ಬಸವರಾಜ ಬಾನರ. ಅವರು ಶಿಕ್ಷಣ ಇಲಾಖೆ ನೀಡಿರುವ ಹಲವಾರು ಸ್ಥಾನಮಾನಗಳನ್ನು, ಜವಾಬ್ದಾರಿಗಳನ್ನು ಇಲಾಖೆಯ ನಿಯಮಗಳಿಗೆ ಅನುಗುಣವಾಗಿ ತಮ್ಮ ಪ್ರಾಮಾಣಿಕತೆ, ವೃತ್ತಿ ಬದ್ದತೆಯಿಂದ ಕಾರ್ಯ ನಿರ್ವಹಿಸಿ ಅವುಗಳಿಗೆ ಮಹತ್ವವನ್ನು ತಂದುಕೊಟ್ಟವರು.

ಶಿಕ್ಷಕರಾಗಿ ಸದಾ ವ್ಯವಧಾನ, ಸಾವಧಾನಗಳಿಂದ ತಮ್ಮ ಪಾಲಿನ ಕೆಲಸಗಳನ್ನು ನಿರ್ವಹಿಕೊಂಡು ಹೋಗುವ ಬಾನರ ಅವರ ಪ್ರವೃತ್ತಿ ಎಲ್ಲರಿಗೂ ಅನುಕರಣೀಯ. ಸದಾ ನಗುಮೊಗದ ಸಾತ್ವಿಕ ಕಳೆಯನುಕ್ಕಿಸುವ ಸರಳ ಸಹೃದಯಿ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ ಬಸವರಾಜ ಬಾನಾರ.

ಅವರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ, ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಾಗಿದ್ದಾರೆ. ಮತ್ತು ಯಾದಗಿರಿ ಜಿಲ್ಲಾ ವಿಜ್ಞಾನ ಸಮಿತಿಯ ಸದಸ್ಯರಾಗಿ , ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಯಾದಗಿರಿ ಜಿಲ್ಲಾ ಅಧ್ಯಕ್ಷರಾಗಿ, ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಜಿಲ್ಲಾ ಸಹ ಸಂಚಾಲಕರಾಗಿರುವ ಅವರು ಅನೇಕ ವಿಜ್ಞಾನ ಸಂಸ್ಥೆಗಳು ಮತ್ತು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಸ್ಥೆಗಳೊಂದಿಗೆ ಒಡನಾಟ ಹೊಂದಿ ಅವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕೆಲಸ ಮಾಡುತ್ತಿದ್ದಾರೆ.

ಸಹೃದಯಿ, ಕವಿಯಾಗಿರುವ ಶಿಕ್ಷಕ ಬಸವರಾಜ ಬಾನರ ಅವರು ಹಿರಿಯ, ಯುವ ಸಾಹಿತಿಗಳ ಕೃತಿಗಳನ್ನು, ಬರಹಗಳನ್ನು ಓದಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸುತ್ತಾರೆ. ಅನೇಕ ತಾಲೂಕು, ಜಿಲ್ಲಾ, ರಾಜ್ಯಮಟ್ಟದ ಕವಿಗೊಷ್ಠಿಗಳಲ್ಲಿ ಭಾಗವಹಿಸಿ ಕವನ ವಾಚಿಸಿ ಹಿರಿಯ ಸಾಹಿತಿಗಳ, ವಿದ್ವಾಂಸರ ಗಮನ ಸೆಳೆದಿದ್ದಾರೆ.

ಅಲ್ಲದೆ ಜಿಲ್ಲಾ ಹಾಗೂ ರಾಜ್ಯಮಟ್ಟದ ಅನೇಕ ವಿಜ್ಞಾನ ಶಿಬಿರಗಳಲ್ಲಿ, ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಭಾರತ ರತ್ನ ಡಾ.ಸಿ.ಎನ್ ರಾವ್ ಅವರೊಂದಿಗೆ ಸಂವಾದ ನಡೆಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಶಿಕ್ಷಣ ಹಾಗೂ ವಿಜ್ಞಾನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ವತಿಯಿಂದ ಯಾದಗಿರಿ ಜಿಲ್ಲಾ ಮಟ್ಟದ ಪ್ರೌಢ ಶಾಲಾ ವಿಭಾಗದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಉಪ- ಪ್ರಾದೇಶಿಕ ವಿಜ್ಞಾನ ಕೇಂದ್ರ ರಾಯಚೂರುದಿಂದ ಕಲ್ಬುರ್ಗಿ ವಿಭಾಗ ಮಟ್ಟದ ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ, ಕರುನಾಡು ಭೂಷಣ ಪ್ರಶಸ್ತಿ, ಡಾ. ಸಿದ್ದಯ್ಯ ಪುರಾಣಿಕ ಪ್ರಶಸ್ತಿ, ಶಿಕ್ಷಕ ರತ್ನ ಪ್ರಶಸ್ತಿ, ಮುಂತಾದ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ಸೇವಾ ಮನೋಭಾವದ ವೃತ್ತಿ ಬದ್ದತೆಯ, ಶೈಕ್ಷಣಿಕ ಕಾಳಜಿಯ ಚಿಂತನಾಶೀಲ ಶಿಕ್ಷಕ ಬಸವರಾಜ ಬಾನರ ಅವರು ತಮ್ಮ ವೃತ್ತಿಯ ಜೊತೆಗೆ ಸಾಹಿತ್ಯ, ಸಂಗೀತ, ಸಂಸ್ಕೃತಿಯ ಪರಂಪರೆಯ ಬಗ್ಗೆ ಅಪಾರವಾದ ಪ್ರೀತಿ ಮತ್ತು ಆಸಕ್ತಿ ಇಟ್ಟುಕೊಂಡವರು.

ನಿರ್ಮಲ ಸ್ನೇಹಾಂತಃಕರಣದ ಹೃದಯ ಶ್ರೀಮಂತಿಕೆಯನ್ನು ಹೊಂದಿರುವ ಅವರು ಶಿಕ್ಷಣ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ಅವರು ವಿಶಿಷ್ಟ ಕೊಡುಗೆ ಅವರಿಂದ ನಿರೀಕ್ಷಿಸೋಣ ಮತ್ತು ವಿವಿಧ ಬರಹಗಳನ್ನು ಒಳಗೊಂಡ ಅವರ ಕೃತಿಗಳು ಅನಾವರಣಗೊಳ್ಳಲಿ ರಾಷ್ಟ್ರಮಟ್ಟದಲ್ಲಿ ಬಾನರ ಅವರು ಬೆಳೆಯಲಿ ಎಂದು ಆಶಿಸುತ್ತೇವೆ.

ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಶಹಾಪುರ.

Related Articles

Leave a Reply

Your email address will not be published. Required fields are marked *

Back to top button