ಬದುಕಿನ ಬಂಡಿಗೆ ದಂಪತಿಗಳಿಬ್ಬರು ಚಕ್ರಗಳಿದ್ದಂತೆಃವೀರಮಹಾಂತ ಶ್ರೀ
ಉಚಿತ ಸಾಮೂಹಿಕ ವಿವಾಹ-9 ಜೋಡಿಗಳಿಗೆ ಕಂಕಣ ಭಾಗ್ಯ
ಯಾದಗಿರಿಃ ಸಾಮೂಹಿಕ ಮದುವೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿಗಳಿಬ್ಬರು ಜೀವನವೆಂಬ ಪಾಠವನ್ನು ಅರಿತು, ಅನುಭವಿಕರ ಹಿರಿಯರ ಮಾರ್ಗದರ್ಶನದಂತೆ ಕಷ್ಟ ಸುಖದಲ್ಲಿ ಒಂದಾಗಿ ಬದುಕು ಸಾಗಿಸುವ ಮೂಲಕ ಮಾದರಿ ದಂಪತಿಗಳಾಗಿ ಬದುಕಬೇಕೆಂದು ದೋರನಹಳ್ಳಿ ಹಿರೇಮಠದ ವೀರಮಹಾಂತ ಶಿವಾಚಾರ್ಯ ಹೇಳಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಮಾಲಹಳ್ಳಿ ಗ್ರಾಮದಲ್ಲಿ ಶ್ರೀರಂಗಲಿಂಗೇಶ್ವರ ಜಾತ್ರೆ ಅಂಗವಾಗಿ ರಂಗಲಿಂಗೇಶ್ವರ ಟ್ರಸ್ಟ್ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.
ಸಾಮೂಹಿಕ ಸರಳ ಮದುವೆ ಸಮಾರಂಭದಲ್ಲಿ ವಿವಾಹವಾದ ನೂತನ ವಧುವರರಲ್ಲಿ ವಿಶೇಷ ಶಕ್ತಿ ಶ್ರೀಗಳ ಆಶೀರ್ವಾದ ಪ್ರಾಪ್ತಿಯಾಗಲಿದೆ. ಬದುಕಿನ ಬಂಡಿಗೆ ದಂಪತಿಗಳಿಬ್ಬರು ಚಕ್ರಗಳಿದ್ದಂತೆ. ಸಮಾನ ಕಷ್ಟ ಸುಖ ಅನುಭವಿಸಬೇಕು.
ಎರಡು ಚಕ್ರ ಕೂಡಿ ನಡೆದರೆನೇ ಬಂಡಿ ಮುಂದೆ ಸಾಗಲಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಬದುಕಿನ ಸಾರ್ಥಕತೆ ಪಡೆಯಲು ಸರಳ ಜೀವನ ನಡೆಸಲು ಅನುಕೂಲವಾಗಲಿದೆ. ಆಡಂಬರ ಜೀವನಕ್ಕೆ ಅಂತ್ಯವಾಡಬೇಕಿದೆ. ಸುಂದರ ಬದುಕು ಕಟ್ಟಿಕೊಳ್ಳಲು ಚಿಂತನೆ ಅಗತ್ಯ. ಬಡವರು ಮಕ್ಕಳ ಮದುವೆ ಮಾಡುವ ಚಿಂತೆಯಲ್ಲಿ ಮನೆಯಲ್ಲಿದ್ದ ಒಡವೆ ಬಂಗಾರ, ಜಮೀನು ಒತ್ತೆ ಇಟ್ಟು ಆಡಂಬರ ಮದುವೆ ಮಾಡಿ, ತದ ನಂತರ ಮಕ್ಕಳು ಸಾಯುವವರೆಗೂ ಕೂಲಿ ನಾಲಿ ಮಾಡಿ ಪಡುವ ಕಷ್ಟ ದೇವರಿಗೆ ಪ್ರೀತಿ.
ಹೀಗಾಗಿ ಯಾರೊಬ್ಬರು ಇಂತಹ ಸಾಹಸಕ್ಕೆ ಕೈಹಾಕದೆ, ಸಾಮೂಹಿಕ ವಿವಾಹದಡಿ ಮದುವೆಯಾಗಿ ಮುಂದಿನ ಜೀವನಕ್ಕೆ ಸರಳ ಬದುಕಿಗೆ ಅಡಿ ಇಡಬೇಕು. ತಮ್ಮ ಕಾಯಕದಂತೆ ನಿತ್ಯ ಸತಿಪತಿ ದುಡಿಯುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹೋತಪೇಟದ ಶ್ರೀಕೈಲಾಸ ಆಶ್ರಮದ ಶಿವಲಿಂಗ ಶರಣರು ಮಾತನಾಡಿ, ಪಾವಿತ್ರತೆಯ ಸಂಸಾರದಲ್ಲಿ ಜ್ಞಾನದ ಅಗತ್ಯವಿದೆ. ಸತಿಪತಿಗಳು ಒಬ್ಬರನ್ನೊಬ್ಬರು ಪರಸ್ಪರ ಅರ್ಥೈಸಿಕೊಂಡು ಬಾಳಿದಲ್ಲಿ ಭವ ಸಾಗರದಾಟಲು ಸಾಧ್ಯವೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸೂಗುರೇಶ್ವರ ಶಿವಾಚಾರ್ಯರೂ, ಶಿವಮೂರ್ತಿ ಶಿವಾಚಾರ್ಯರು, ದೇವಾಪುರದ ಗುರುದಾಸಶ್ರೀ, ಪರೋಕಾರ ನಿರಾಕಾರ ಆಶ್ರಮ ದಂಗಾಪುರಶ್ರೀ, ಸ್ಥಳೀಯ ಸಿದ್ರಾಮಯ್ಯ ಸ್ವಾಮೀಜೀ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಯಂಕಪ್ಪ ಭೀಮಣ್ಣ ನಗರಗುಂಡ ವಹಿಸಿದ್ದರು. ಒಟ್ಟು ಒಂಭತ್ತು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಡಾ.ಜಗನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಕಾಂತ ಕೊಳ್ಳಿ ನಿರೂಪಿಸಿದರು. ಶೇಖರ ಸ್ವಾಗತಿಸಿದರು. ಮುಖಂಡರಾದ ಭೀಮಣಗೌಡ ಪಾಟೀಲ್, ಈರಣಗೌಡ ಪಾಟೀಲ್, ಚಂದ್ರಕಾಂತ ಕೊಳ್ಳಿ, ಬಿ.ಎ.ಪೂಜಾರಿ ಭಾಗವಹಿಸಿದ್ದರು.