ಕೊಂಗಂಡಿ ಏತ ನೀರಾವರಿ-28 ಕೋಟಿ ವ್ಯರ್ಥಃ BSY ಹೇಳಿಕೆ
ಶಹಾಪುರಃ ಡಿ.9 ಕಾಲುವೆಗೆ ಮಾಜಿ ಸಿಎಂ ಭೇಟಿ
ಕೊಂಗಂಡಿ ಏತ ನೀರಾವರಿ ಕಾಮಗಾರಿ ವ್ಯರ್ಥ ಬಿಎಸ್ವೈ ಆರೋಪ
ಯಾದಗಿರಿ, ಶಹಾಪುರಃ ಕೊಂಗಂಡಿ ಎಸ್.ಆರ್. ಏತ ನೀರಾವರಿ ಯೋಜನೆಗೆ 28 ಕೋಟಿ ರೂ.ಖರ್ಚು ಮಾಡಿದರೂ ತಾಲೂಕಿನ ಕೊನೆಯ ಭಾಗದ ರೈತರಿಗೆ ನೀರಿಲ್ಲ. ಹೀಗಾಗಿ ಕೋಟ್ಯಂತರ ರೂಪಾಯಿ ವ್ಯರ್ಥವಾಗಿದೆ. ಚುನಾವಣೆ ಘೋಷಣೆ ಹಿನ್ನೆಲೆ ತರಾತುರಿಯಲ್ಲಿ ಕಾಮಗಾರಿ ಮುಗಿಸಿ ಉದ್ಘಾಟಿಸಿದ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ತಾಲೂಕಿನ ಕೊನೆ ಭಾಗದ ಗ್ರಾಮಗಳಾದ ಯಕ್ಷಿಂತಿ, ಬೀರನೂರ ಮತ್ತು ಮರಕಲ್ ಗ್ರಾಮಗಳ ರೈತರನ್ನು ಭೇಟಿಯಾಗಿ ಡಿಸ್ಟಿಬ್ಯೂಟರ್ 9 ರ ಉಪಕಾಲುವೆ ಮೂಲಕ ನೀರು ಬಾರದಿರುವ ಕುರಿತು ರೈತರಿಂದ ಸಮಗ್ರ ಮಾಹಿತಿ ಪಡೆದುಕೊಂಡು ಅವರು ಮಾತನಾಡಿದರು.
ಕೊಂಗಂಡಿ ಏತ ನೀರಾವರಿ ಯೋಜನೆ ಅನುಷ್ಠಾನದಿಂದ ಕೊನೆ ಭಾಗದ ರೈತರಿಗೆ ಅನುಕೂಲವಾಗಲಿದೆ. ಈ ಭಾಗದ ರೈತರ ಜಮೀನಿಗೆ ನೀರು ಹರಿಸಲಾಗುವುದು ಎಂದು ನಂಬಿದ್ದ ರೈತರಿಗೆ ಹಿಂದಿನ ಸರ್ಕಾರ ವಂಚನೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು,
ಏತ ನೀರಾವರಿ ಯೋಜನೆ ಕಾಮಗಾರಿ ತರಾತುರಿಯಲ್ಲಿ ಬೇಕಾಬಿಟ್ಟಿಯಾಗಿ ನಿರ್ಮಿಸಿದ್ದು, ಕೋಟ್ಯಂತರ ರೂ. ವ್ಯರ್ಥವಾಗಿದೆ. ಈ ಕುರಿತು ಕೃಷ್ಣ ಜಲ ನಿಗಮ ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಸದನದಲ್ಲಿ ಮಾತನಾಡುವೆ ಎಂದು ರೈತರಿಗೆ ಭರವಸೆ ನೀಡಿದರು.
ಕೊನೆ ಭಾಗದ ಹತ್ತಾರು ಹಳ್ಳಿಗಳ ರೈತರ ಜಮೀನಿಗೆ ನೀರಿಲ್ಲ ಪ್ರತಿ ವರ್ಷ ಪರದಾಡುವಂತಾಗಿದೆ.
ಮೇಳ್ಭಾಗದ ರೈತರು ಸಮರ್ಪಕವಾಗಿ ನೀರು ಪಡೆದುಕೊಂಡು ಬೆಳೆ ಬೆಳೆಯುತ್ತಾರೆ. ಆದರೆ ಕೊನೆ ಭಾಗದ ರೈತರು ಗೋಳೂ ಕೇಳುವವರಿಲ್ಲದಂತಾಗಿದೆ. ಹೀಗಾಗಿ ರೈತರು ಕಂಗಾಲಾಗಿದ್ದು, ಕೂಡಲೇ ಕೆಳ ಭಾಗದ ರೈತರ ಜಮೀನಿಗೆ ನೀರು ಹರಿಸುವ ಕೆಲಸ ಮಾಡಬೇಕಿದೆ. ಈ ಕುರಿತು ಸದನದಲ್ಲಿ ಪ್ರಶ್ನಿಸಿ ಸಮರ್ಪಕ ಕಾಮಗಾರಿ ಕೈಗೊಂಡು ನೀರು ತಲುಪವಂತೆ ಮಾಡಲು ಶ್ರಮಿಸುತ್ತೇನೆ.
ಅಲ್ಲದೆ ಕೃಷ್ಣಾ ಕಾಡಾ ವ್ಯಾಪ್ತಿಯ ಕಾಲುವೆಗಳು ದುರಸ್ಥಿ ನೆಪದಲ್ಲಿ ಕೋಟ್ಯಂತರ ರೂ. ದುಡ್ಡು ಖರ್ಚಾಗಿದ್ದು, ಕಾಲುವೆ ಮಾತ್ರ ದುರಸ್ಥಿಗೊಂಡಿಲ್ಲ ಎಂದು ರೈತರು ಬಿಎಸ್ವೈಗೆ ತಿಳಿಸಿದರು.
ಈ ಬಗ್ಗೆ ಅಧಿಕಾರಿಗಳ ಚರ್ಚಿಸಿ ಕ್ರಮಕೈಗೊಳ್ಳಲು ಸೂಚಿಸುವೆ. ಅನುದಾನ ಮಾತ್ರ ಖರ್ಚು ಆಗಿದ್ದು, ಕಾಲುವೆ ದುರಸ್ತಿ ಮಾಡದೇ, ಹಾಗೇ ಬಿಟ್ಟಿರುವುದು, ಕಾಲುವೆಗಳು ಹೊಡೆದಿರುವುದು, ಜಾಲಿ, ಮುಳ್ಳು ಕಂಟಿಗಳು ಸೇರಿದಂತೆ ಹುಲ್ಲುಗಾವಲು ಬೆಳೆದು ನಿಂತಿರುವುದೆ ಅದುರಸ್ತಿ ನೆಪದಲ್ಲಿ ಹಣ ಪೋಲಾಗಿರುವುದಕ್ಕೆ ಸಾಕ್ಷಿ ಒದಗಿಸುತ್ತದೆ ಎಂದ ಬಿಎಸ್ವೈ ಈ ಕುರಿತು ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಗೋವಿಂದ ಕಾರಜೊಳ, ಎಂಎಲ್ಸಿ ಎನ್.ರವಿಕುಮಾರ, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ, ಶಾಸಕ, ಮಾಜಿ ಸಚಿವ ರಾಜುಗೌಡ, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಪಾಟೀಲ್, ಶಾಸಕ ವೆಂಕಟರಡ್ಡಿ ಮುದ್ನಾಳ, ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ನಾಗರತ್ನ ಕುಪ್ಪಿ ಸೇರಿದಂತೆ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಡಾ.ಶರಣಭೂಪಾಲರಡ್ಡಿ ಪಾಟೀಲ್, ದೇವಿಂದ್ರ ನಾದ, ಸಿದ್ದಣಗೌಡ ಕಾಡಂನೋರ್, ಜಿಪಂ ಮಾಜಿ ಸದಸ್ಯ ದೇವರಾಜ ನಾಯ್ಕ, ತಾಪಂ ಸದಸ್ಯ ಪರಶುರಾಮ ಕುರಕುಂದಿ, ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಶೇಖರ ಮರಕಲ್ ಸೇರಿದಂತೆ ಇತರರಿದ್ದರು.