ಪೌಷ್ಟಿಕ ಆಹಾರದಿಂದ ಆರೋಗ್ಯ ಸಾಧ್ಯ : ಡಾ.ಲಕ್ಷ್ಮೀಕಾಂತ
ಯಾದಗಿರಿ : ಎಲ್ಲ ಮನುಷ್ಯರಿಗೆ ಅದರಲ್ಲಿಯೂ ವಿಶೇಷವಾಗಿ ಮಕ್ಕಳಿಗೆ ಪೌಷ್ಟಿಕವಾದ ಆಹಾರವನ್ನು ನೀಡುವುದರಿಂದ ಉತ್ತಮವಾದ ಆರೋಗ್ಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಲಕ್ಷ್ಮೀಕಾಂತ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಘಟಕ ಮತ್ತು ಯುನಿಸೆಫ್ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಒಂದು ದಿನದ ಓರಿಯಂಟೇಷನ್ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಮ್ಮ ಭಾಗದಲ್ಲಿ ಅಪೌಷ್ಟಿಕತೆಯಿಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಕಳೆದ ಕೆಲ ವರ್ಷಗಳಿಂದ ಬಹಳಷ್ಟು ಮಕ್ಕಳು ಸಾವಿಗೀಡಾದ ಪ್ರಕರಣಗಳು ಜರುಗಿವೆ. ಇದನ್ನು ತಡೆಗಟ್ಟಲು ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸುವುದರ ಮೂಲಕ ಅಪೌಷ್ಟಿಕತೆಯನ್ನು ನಿವಾರಿಸಿ ಮಕ್ಕಳಲ್ಲಿ ಉತ್ತಮ ಆರೋಗ್ಯ ಉಂಟಾಗುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು.
ಇಂದಿನ ಮಕ್ಕಳು ನಾಳಿನ ನಾಗರಿಕರು ಎನ್ನುವಂತೆ ದೇಶದ ಭವಿಷ್ಯವನ್ನು ರೂಪಿಸುವ ನಿರ್ಮಾತೃಗಳು ಮಕ್ಕಳು ಆಗಬೇಕಾದರೆ ಅವರು ಸದೃಢವಾದ ಆರೋಗ್ಯವನ್ನು ಹೊಂದಿದಲ್ಲಿ ತಮ್ಮ ಜೀವನದಲ್ಲಿ ಅವರು ಉತ್ತಮವಾದ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಈ ಹಿನ್ನಲೆಯಲ್ಲಿ ಇನ್ನೂ ಸಾಕಷ್ಟು ಜಾಗೃತಿಯನ್ನು ಯುವ ಜನಾಂಗ ಮೂಡಿಸಬೇಕೆಂದು ಕರೆ ನೀಡಿದರು.
ಪ್ರಾಧ್ಯಾಪಕ ಡಾ.ಸರ್ವೋದಯ ಶಿವಪುತ್ರ ಮುಖ್ಯ ಅತಿಥಿಗಳಾಗಿ ಮಾತನಾಡಿ, ಎನ್ಎಸ್ಎಸ್ ಸ್ವಯಂ ಸೇವಕರು ತಮ್ಮ ಅಧ್ಯಯನದ ಜೊತೆಗೆ ಸಾಮಾಜಿಕ ಕಳಕಳಿಯ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ತೊಡಗಿಸಿಕೊಂಡರೆ ಅದುವೇ ದೇಶ ಸೇವೆ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆವಹಿಸಿ ಪ್ರಾಂಶುಪಾಲರಾದ ಡಾ.ಸುಭಾಶ್ಚಂದ್ರ ಕೌಲಗಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಸಕ್ರೀಯವಾಗಿ ಭಾಗವಹಿಸಬೇಕು, ಎನ್ಎಸ್ಎಸ್ ಚಟುವಟಿಕೆಗಳಲ್ಲಿ ಕ್ರೀಯಾಶೀಲವಾಗಿ ತೊಡಗಿಸಿಕೊಂಡು ಎನ್ಎಸ್ಎಸ್ನ ಧ್ಯೇಯೋದ್ದೇಶಗಳನ್ನು ಅರಿತುಕೊಂಡು ನಡೆಯಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಅಶೋಕರೆಡ್ಡಿ ಪಾಟೀಲ, ಶರಣಬಸ್ಸಪ್ಪ ರಾಯಕೋಟಿ, ಡಾ.ಜೆಟ್ಟಪ್ಪ ಡಿ, ಬಿ.ಆರ್.ಕೇತನಕರ್, ಡಾ.ಬಿ.ಎಸ್.ಸಿಂಘೆ ಸೇರಿದಂತೆ ಎನ್ಎಸ್ಎಸ್ ಎರಡು ಘಟಕಗಳ ಸ್ವಯಂ ಸೇವಕರು ಇದ್ದರು. ಡಾ.ಚಂದ್ರಶೇಖರ ಕೊಂಕಲ್ ಸ್ವಾಗತಿಸಿದರು. ರಾಘವೇಂದ್ರ ಬಂಡಿಮನಿ ನಿರೂಪಿಸಿ, ವಂದಿಸಿದರು.