JDS ಕಾಂಗ್ರೆಸ್ಸಿಗೆ ಸ್ಪೀಡ್ ಬ್ರೇಕರ್ : ಬಿಜೆಪಿ ಚಾಣಕ್ಯ ಅಮಿತ್ ಶಾ ಮಾತಿನ ಮರ್ಮವೇನು?
– ವಿನಯ ಮುದನೂರ್
ಕಾಂಗ್ರೆಸ್ಸಿಗೆ ಜೆಡಿಎಸ್ ಸ್ಪೀಡ್ ಬ್ರೇಕರ್ ಆಗಿದೆ. ಬಿಜೆಪಿ ಕಾಂಗ್ರೆಸ್ಸನ್ನು ಕಟ್ಟಿಹಾಕಲಿದೆ ಎಂದು ಬಿಜೆಪಿಯ ಚಾಣಕ್ಯ ಅಮಿತ್ ಶಾ ಹೇಳಿದ್ದಾರೆ. ಚಾಮರಾಜನಗರದ ಕೊಳ್ಳೇಗಾಲದಲ್ಲಿ ನಡೆದ ಬಿಜೆಪಿ ಬೂತ್ ಮಟ್ಟದ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅದ್ಯಕ್ಷರ ಅಮಿತ್ ಶಾ ಬಿಟ್ಟ ಬಾಣದ ಹಿಂದಿನ ಮರ್ಮವೇನು ಎಂಬುದೇ ಈಗ ರಾಜಕೀಯ ಚಿಂತಕರ ಚಾವಡಿಯ ಚರ್ಚಾ ವಿಷಯವಾಗಿದೆ.
ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಕಳೆದ ರಾಜ್ಯ ಪ್ರವಾಸದ ವೇಳೆ ಜೆಡಿಎಸ್ ಪಕ್ಷವನ್ನೇ ಟಾರ್ಗೆಟ್ ಮಾಡಿ ಮಾತನಾಡಿದ್ದರು. ಜೆಡಿಎಸ್ ಬಿಜೆಪಿಯ ಬಿಟೀಮ್, ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಇನ್ ಡೈರೆಕ್ಟಾಗಿ ಬಿಜೆಪಿಗೆ ಮತ ಹಾಕಿದಂತಾಗುತ್ತದೆ. ಕಮಲ ಪಡೆಯ ಗೆಲುವಿಗೆ ನೆರವಾಗುವ ರೀತಿಯಲ್ಲಿ ಜೆಡಿಎಸ್ ಕೆಲಸ ಮಾಡುತ್ತಿದೆ ಎಂದು ಹಾಸನದಲ್ಲಿ ಹೇಳಿದ್ದರು. ಮರುದಿನ ಮೈಸೂರಿನಲ್ಲಿ ಮಾತನಾಡುತ್ತ ಮತ್ತೆ ಒಂದು ಹೆಜ್ಜೆ ಮುಂದೆ ಹೋಗಿ ಜೆಡಿಎಸ್ ಅಂದರೆ ಜನತಾದಳ ಸಂಘ ಪರಿವಾರ ಎಂದು ಹೇಳಿದ್ದರು.
ರಾಹುಲ್ ಗಾಂಧಿ ಮಾತಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದರು. ಯಾರೋ ಬರೆದುಕೊಟ್ಟ ಚೀಟಿಯನ್ನು ಪಾಪ ರಾಹುಲ್ ಓದುತ್ತಾರೆ ಎಂದು ವ್ಯಂಗವಾಡಿದ್ದರು. ಅಲ್ಲದೆ ಬಿಜೆಪಿಯವರ ಪಕ್ಕ ನಿಂತು ನಾನು ಕೆಮ್ಮಿದರೆ ಕಾಂಗ್ರೆಸ್ ಉಳಿಯುವುದಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಗುಡುಗಿದ್ದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಕೆಸರೆರಚಾಟದಲ್ಲಿ ತೊಡಗಿರುವ ಸಂದರ್ಭದಲ್ಲಿ ರಾಜಕೀಯ ಚಾಣಕ್ಯ ಅಮಿತ್ ಶಾ ಜೆಡಿಎಸ್ ಪರ ಮೃದು ಧೋರಣೆ ವ್ಯಕ್ತಪಡಿಸಿದ್ದಾರೆ. ಮೈಸೂರು ಭಾಗದಲ್ಲಿ ಪ್ರಚಾರ ವೇಳೆಯೇ ಕಾಂಗ್ರೆಸ್ಸಿಗೆ ಜೆಡಿಎಸ್ ಸ್ಪೀಡ್ ಬ್ರೇಕರ್ ಆಗಿದೆ ಅಂದಿದ್ದು ಭಾರೀ ಕುತೂಹಲವನ್ನು ಮೂಡಿಸಿದೆ. ಕಳೆದ ಬಾರಿ ಅಮಿತ್ ಶಾ ದಾವಣಗೆರೆ-ಚಿತ್ರದುರ್ಗ ಪ್ರವಾಸದಲ್ಲಿದ್ದಾಗ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಕಾಂಗ್ರೆಸ್ ಜೊತೆ ಮೈತ್ರಿಗೆ ಸಿದ್ಧ ಎಂದು ಹೇಳಿದ್ದರು. ಬಳಿಕ ನನ್ನ ಮಾತಿನ ಅರ್ಥವೇ ಬೇರೆ ಎಂದು ಹೇಳಿದ್ದರು.
ಇದೇ ವೇಳೆ ಮರಳಿ ಮೈಸೂರು ಪ್ರವಾಸಕ್ಕೆ ಆಗಮಿಸಿರುವ ಅಮಿತ್ ಶಾ ಜೆಡಿಎಸ್ ಪಕ್ಷ ಕಾಂಗ್ರೆಸ್ಸಿಗೆ ಸ್ಪೀಡ್ ಬ್ರೇಕರ್ ಎಂದಿದ್ದಾರೆ. ಹೀಗಾಗಿ, ಒಂದು ಕಡೆ ಮಾಂತ್ರಿಕ ರಾಜಕಾರಣಿ ಹೆಚ್.ಡಿ.ದೇವೇಗೌಡರ ಮಾತು ಮತ್ತೊಂದು ಕಡೆ ರಾಜಕೀಯ ಚಾಣಕ್ಯ ಅಮಿತ್ ಶಾ ಮಾತುಗಳನ್ನು ಆಲಿಸುತ್ತಿದ್ದರೆ ಇಬ್ಬರ ಮಾತುಗಳ ಹಿಂದೆ ರಾಜಕೀಯ ಲೆಕ್ಕಾಚಾರಗಳಿರುವುದು ಸ್ಪಷ್ಟವಾಗುತ್ತಿದೆ. ಸದ್ಯ ರಾಜಕೀಯ ಪಂಡಿತರ ತಲೆಗೆ ಈ ಇಬ್ಬರೂ ರಾಜಕೀಯ ನಾಯಕರು ಹುಳು ಬಿಟ್ಟಿದ್ದಾರೆ. ಪ್ಲಸ್ಸೋ ಮೈನಸ್ಸೋ ಎಂದು ರಾಜಕೀಯ ಪಂಡಿತರೂ ಲೆಕ್ಕ ಹಾಕುವುದರಲ್ಲಿ ತಲ್ಲೀನರಾಗಿದ್ದಾರೆ. ಆದರೆ, ದೇವೇಗೌಡರು ಮತ್ತು ಅಮಿತ್ ಶಾ ತಲೆಯಲ್ಲಿರುವ ಲೆಕ್ಕವೇನು ಎಂಬುದು ಮಾತ್ರ ಮೇ 15ಕ್ಕೆ ತಿಳಿಯಲಿದೆ.