ಸಂವಿಧಾನದ ಮೂಲಭೂತ ಹಕ್ಕು, ಕರ್ತವ್ಯ ಪಾಲಿಸಿ-ಭಾಸ್ಕರರಾವ್ ಮುಡಬೂಳ
ಸಂವಿಧಾನದ ಮೂಲಭೂತ ಕರ್ತವ್ಯ ಪಾಲಿಸಿ-ಮುಡಬೂಳ
ಶಹಾಪುರಃ ಸಂವಿಧಾನದ ಪರಿಚ್ಛೇದ 14 ಹೇಳಿದಂತೆ ಎಲ್ಲರಿಗೂ ಸಮಾನ ಹಕ್ಕುಗಳಿವೆ. ಸರ್ವರೂ ಮೂಲಭೂತ ಹಕ್ಕುಗಳನ್ನು ಪಡೆಯಲು ಹೇಗೆ ಹೋರಾಟ ನಡೆಸುತ್ತೀರೋ ಹಾಗೇ ಸಂವಿಧಾನದಲ್ಲಿ ತಿಳಿಸಿದ ಕರ್ತವ್ಯಗಳನ್ನು ಸಹ ಎಲ್ಲರೂ ಪಾಲಿಸಬೇಕು ಆಗ ದೇಶದ ಅಭಿವೃದ್ಧಿಗೂ ಒಂದು ಅರ್ಥ ಬರಲಿದೆ ಎಂದು ಹಿರಿಯ ನ್ಯಾಯವಾದಿ ಭಾಸ್ಕರರಾವ್ ತಿಳಿಸಿದರು.
ನಗರದ ಸೇಂಟ್ ಪೀಟರ್ ಶಾಲಾ ಆವರಣದಲ್ಲಿ ರವಿವಾರ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮಕ್ಕಳಲ್ಲಿ ಇತಿಹಾಸದ ಬಗ್ಗೆ ಅರಿವಿರಬೇಕು. ನೀವು ಯಾವ ಊರಲ್ಲಿ ವಾಸವಿದ್ದೀರಿ ಯಾವ ಶಾಲೆಯಲ್ಲಿ ಅಭ್ಯಾಸ ಮಾಡುತ್ತೀರಿ ಎಂಬುದನ್ನು ಅರಿತು ಸ್ಥಳೀಯ ಇತಿಹಾಸವನ್ನು ಕೇಳಿ ನೋಡಿ ಮತ್ತು ಸಂಬಂಧಿಸಿದ ಪುಸ್ತಕಗಳನ್ನು ಓದಿ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಅದರಲ್ಲು ದೇಶಭಕ್ತಿಗೀತೆಗೆ ಮಕ್ಕಳು ಹಾಕಿದ ಲೇಜಿಮ್ ಸರ್ವರ ಶ್ರದ್ಧೆ ಶ್ರೇಷ್ಠ ಮನೋಭಾವದಿಂದ ಆಚರಿಸುತ್ತಿರುವದು ನೋಡಿ ತುಂಬಾ ಸಂತಸ ತಂದಿದೆ. ಇಂಡಿಯಾ ಗೇಟ್ ಪ್ರದೇಶದಲ್ಲಿ ಆಚರಿಸಿದಂತೆ ಇಲ್ಲಿಯೂ ಮಕ್ಕಳು ತುಂಬಾ ಶಿಸ್ತುಬದ್ಧವಾಗಿ, ಶಿಕ್ಷಕರು ಶ್ರದ್ಧೆಯಿಂದ ಗಣರಾಜ್ಯೋತ್ಸವ ಆಚರಿಸುತ್ತಿರುವದು ನಿಜಕ್ಕೂ ಖುಷಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ವಕೀಲ ಮತ್ತು ಪತ್ರಕರ್ತ ಮಲ್ಲಿಕಾರ್ಜುನ ಮುದನೂರ, ಫಾದರ್ ಫೆಡ್ರಿಕ್ ಡಿಸೋಜಾ, ಮುಖ್ಯೋಪಾಧ್ಯಾಯಿನಿ ರೀನಾ ಡಿಸೋಜಾ ಉಪಸ್ಥಿತರಿದ್ದರು.