ತಾಯಿಯ ಶ್ರೇಷ್ಠ ವಿಚಾರ ಮಗುವಿನ ವ್ಯಕ್ತಿತ್ವಕ್ಕೆ ಸಹಕಾರ
ದಿನಕ್ಕೊಂದು ಕಥೆ
ಅದು ತಮಿಳುನಾಡಿನ ತಿರುನಲ್ವೇಲಿಯ ಒಂದು ಸಭ್ಯಸ್ಥ ಕುಟುಂಬ. ಆ ಕುಟುಂಬದಲ್ಲಿ ಜನಿಸಿದವನೇ ಕಲ್ಯಾಣ ಸುಂದರಂ. ಹುಟ್ಟಿ ಒಂದು ವರ್ಷವಾಗುವಷ್ಟರಲ್ಲೇ ತಂದೆ ದೈವಾಧೀನರಾದರು. ಹಾಗಾಗಿ ಕಲ್ಯಾಣನ ಲಾಲನೆ – ಪೋಷಣೆ – ಕುಟುಂಬದ ನಿರ್ವಹಣೆ ಎಲ್ಲವೂ ತಾಯಿಯ ಹೆಗಲೇರಿತು. ನೆಂಟರಿಷ್ಟರು ಮಗು ಹುಟ್ಟಿದ ಗಳಿಗೆ ಸರಿಯಿಲ್ಲವೆಂದು ಜರಿದರು.. ಆದರೆ ಮುಂದೆ ಈ ಮಗುವಿನಿಂದ ಅದೆಷ್ಟು ಜನ ನೆಮ್ಮದಿಯಿಂದ ಬದುಕುತ್ತಾರೆ ಎಂದು ಅವರೇನು ಬಲ್ಲರು?
ತಾಯಿಯ ಆರೈಕೆಯಲ್ಲಿ ಬೆಳೆದ ಕಲ್ಯಾಣ ಸುಂದರಂ ಚೆನ್ನಾಗಿಯೇ ಓದುತ್ತಿದ್ದ.. ಆದರೆ ಅವನಿಗೊಂದು ಬೃಹತ್ ಸಮಸ್ಯೆ ಬಂಡೆಕಲ್ಲಿನಂತೆ ಬಂದೆರಗಿತು.
ಅದೇ ಕೀಳರಿಮೆ!
ಬೇರೆಯವರಂತೆ ತನ್ನ ಧ್ವನಿ ಇಲ್ಲ ಎಂಬುದೇ ಹಗಲು ರಾತ್ರಿ ಕಾಡುತ್ತಿದ್ದ ಸಮಸ್ಯೆ. ಪ್ರಾಪ್ತ ವಯಸ್ಕನಾದಾಗಲೂ ಸಮಸ್ಯೆ ಬಗೆಹರಿಯಲಿಲ್ಲ. ಸಾಮಾನ್ಯವಾಗಿ 13 ಅಥವಾ 14ನೇ ವಯಸ್ಸಿಗೆ ಧ್ವನಿ ತಂತುಗಳು ವಿಕಸಿತವಾಗಲು ಪ್ರಾರಂಭಿಸುತ್ತವೆ… ಆದರೆ ಕಲ್ಯಾಣನ ಧ್ವನಿ ಇನ್ನೂ ತೆಳುವಾಗುತ್ತಾ ಸಾಗಿತು! ಆತ್ಮಹತ್ಯೆಯೇ ದಾರಿ ಎಂದು ಜೀವನ ಮುಗಿಸಲಿಕ್ಕೆ ಹೊರಟ ಈತನಿಗೆ ಅದೇಕೋ ತಕ್ಷಣ ತಾಯಿಯ ನೆನಪಾಗಿ ಅವಳ ಬಳಿ ಬಂದು ಸಮಾಧಾನವಾಗುವ ತನಕ ಕಣ್ಣೀರಿನ ಧಾರೆಯೆರೆದ.
ಸಮಸ್ಯೆಯ ಅರಿವಿದ್ದ ತಾಯಿ, ಮಗನಿಗೆ ಹೇಳಿದ್ದು ಮೂರೇ ಮಾತು! ಆ ಮಹಾತಾಯಿ ಅದ್ಯಾವಾಗ ಬುದ್ಧನನ್ನು ಓದಿಕೊಂಡಿದ್ದಳೋ ಗೊತ್ತಿಲ್ಲ.. ಆದರೆ ಆಕೆ ಹೇಳಿದ್ದು ಇಷ್ಟೇ!
ಆಸೆ ಪಡಬೇಡ – ದುಡಿದಿದ್ದರಲ್ಲಿ ಶೇ.10% ಸಮಾಜಕ್ಕೆ ಕೊಡು – ಪ್ರತಿ ದಿನವೂ ಯಾರಾದರೊಬ್ಬರಿಗೆ ಸಹಾಯ ಮಾಡು!
ತಾಯಿಯ ಶ್ರೇಷ್ಠ ವಿಚಾರ ಮಗನ ಧ್ಯೇಯವಾಕ್ಯವಾಯಿತು. ತನಗೆ ಸಿಗುತ್ತಿದ್ದ ಅಲ್ಪ ಸ್ವಲ್ಪ ಹಣದಲ್ಲೇ ವಯಸ್ಸಾದವವರಿಗೆ, ಭಿಕ್ಷುಕರಿಗೆ ಸಹಾಯಹಸ್ತ ಚಾಚಿದ.. ಕೀಳರಿಮೆ ದೂರವಾಗತೊಡಗಿತು.. ಸಮಾಜ ಸೇವೆಯ ಹುಚ್ಚು ಮೆಲ್ಲನೆ ಏರಲು ಶುರುವಿಟ್ಟಿತು..
ಅಂದಿನ ಪ್ರಧಾನಿ ನೆಹರು ಚೈನಾದ ಜೊತೆ ಯುದ್ಧ ಶುರುವಾದಾಗ ಡಿಫೆನ್ಸ್ ಫಂಡಿಗೆ ಹಣ ಕೊಡಿ ಅಂತ ದೇಶಬಾಂಧವರಲ್ಲಿ ವಿನಂತಿಸಿದ್ದರು. ಅದನ್ನು ಕೇಳಿದ ಕೂಡಲೇ ದಾನ ಪ್ರವೃತ್ತಿ ಚಿಗುರೊಡೆದು ತನ್ನಲ್ಲಿದ್ದ ಚಿನ್ನದ ಸರವನ್ನು ಅಂದಿನ ತಮಿಳುನಾಡಿನ ಮುಖ್ಯಮಂತ್ರಿ ಕಾಮರಾಜ್ ಅವರನ್ನು ಭೇಟಿ ಮಾಡಿ ಹಸ್ತಾಂತರಿಸಿದ ಕಲ್ಯಾಣ ಸುಂದರಂ.. ಅಂದಿಗೆ ಆತ ಕೇವಲ ೧೦ನೇ ತರಗತಿ ಓದುತ್ತಿದ್ದ ಚಿಗುರು ಮೀಸೆಯ ಹುಡುಗ ಮಾತ್ರ.
ಮೆಟ್ರಿಕುಲೇಷನ್ ಮುಗಿಯುತ್ತಲೇ ಡಿಗ್ರಿಯಲ್ಲಿ ಆರ್ಟ್ಸ್ ತೆಗೆದುಕೊಂಡು ನಂತರ ಲೈಬ್ರರಿ ಸೈನ್ಸ್ ನಲ್ಲಿ ಚಿನ್ನದ ಪದಕ ಪಡೆದುಕೊಂಡ! ಅದರೊಂದಿಗೆ ಸರಕಾರದ ಲೈಬ್ರರಿಯ ಕೆಲಸವೂ ಸಿಕ್ಕಿತು. ಆತ ತನ್ನ ದುಡಿಮೆಯ ಅಷ್ಟೂ ಹಣ ಸಮಾಜಕ್ಕೆ ಕೊಡುವುದು ಎಂದು ದೃಢ ನಿಶ್ಚಯವನ್ನೂ ಮಾಡಿದ.. ತಿಂಗಳ ಸಂಬಳ ಬಂದ ಕೂಡಲೇ ಅವಶ್ಯಕತೆ ಇರುವವರನ್ನು ಹುಡುಕಿ ದಾನ ಮಾಡಿಬಿಡುತ್ತಿದ್ದ. ತನ್ನ ಈ ವ್ರತಕ್ಕೆ ಅಡ್ಡಿಯಾಗದಿರಲೆಂದು ವಧು ಪ್ರಸ್ತಾಪಗಳು ಬಂದರೂ ಕಲ್ಯಾಣವನ್ನೇ ಮಾಡಿಕೊಳ್ಳಲಿಲ್ಲ ನಮ್ಮ ಕಲ್ಯಾಣ ಸುಂದರಂ!
ಸರ್ಕಾರಿ ಸಂಬಳದಿಂದ ಬಂದ ಅಷ್ಟೂ ಹಣ ಸಮಾಜಕ್ಕೆ.. ತನ್ನ ಊಟ – ತಿಂಡಿ ಖರ್ಚಿಗಾದರೂ ಹಣ ಬೇಡವೇ? ಸರಿ ಅದಕ್ಕೇನಂತೆ? ಲೈಬ್ರರಿಯ ಕೆಲಸ ಮುಗಿದ ಮೇಲೆ ಒಂದು ಹೋಟೇಲಿನಲ್ಲಿ ಪಾರ್ಟ್ ಟೈಂ ಕೆಲಸಕ್ಕೂ ಸೇರಿಕೊಂಡು ಬಿಟ್ಟ! ಜನ ಈತನಿಗೆ ಹುಚ್ಚು ಹಿಡಿದಿದೆ ಎಂದು ಖಾತ್ರಿ ಮಾಡಿಕೊಂಡರು. ಎಮ್ಮೆಸ್ಸಿ ಗೋಲ್ಡ್ ಮೆಡಲಿಸ್ಟ್ ಒಬ್ಬ ಹೋಟೆಲ್ನಲ್ಲಿ ಪ್ಲೇಟ್ ತೊಳೆಯುವುದು ಹೇಗೆ ಸ್ವಾಮಿ ಎಂಬುದು ಜನರಿಗೆ ಅರ್ಥವಾಗದ ಸಂಗತಿ!
ಹೌದು! ಆತನಿಗೆ ಹುಚ್ಚು ಹಿಡಿದಿತ್ತು! ಅದು ಸಾಮಾಜ ಸೇವೆಯ ಹುಚ್ಚು! ತ್ಯಾಗದ ಹುಚ್ಚು! ಇನ್ನೊಬ್ಬರ ಸಂತೋಷದಲ್ಲಿ ತನ್ನ ಆತ್ಮದ ಉನ್ನತಿಯನ್ನು ಬಯಸುವ ಹುಚ್ಚು! ಅರಿಸ್ಟಾಟಲ್ ಹೇಳಿದ ಹಾಗೆ “No great genius has ever existed without sometouch of madness”.
ಹುಚ್ಚು ಹೆಚ್ಚುತ್ತಾ ಹೋದಂತೆ.. ಕಲ್ಯಾಣ ಸುಂದರಂ ಕೂಡ ದಾನ ಮಾಡುತ್ತಾಹೋದರು. ದಾನಿಗಳು ಮತ್ತು ನಿರ್ಗತಿಕರ ಮಧ್ಯೆ ಕೆಲಸ ಮಾಡುವುದಕ್ಕೆ “ಪಾಲಂ”(ಸೇತುವೆ) ಎನ್ನುವ ಒಂದು ಸಂಸ್ಥೆಯನ್ನೂ ಸ್ಥಾಪಿಸಿದರು!
ಎಲ್ಲಿಯವರೆಗೆ ಅಂತೀರಾ? ಈ ಲೇಖನ ಬರೆಯುವ ಹೊತ್ತಿಗೂ ಅದು ನಡೆಯುತ್ತಿದೆ. ಮದುವೆಯಾಗದ ಅವರು ಇಂದಿಗೂ ತಮ್ಮ ಪೆನ್ಶನ್ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ.
ಇಂಥಾ ವ್ಯಕ್ತಿ ಇದ್ದಾರೆಂಬುದು ಅವರು ನಿವೃತ್ತಿಯಾಗುವವರೆಗೂ ತಮ್ಮದೇ ಜಿಲ್ಲೆಯ ಜನರಿಗೂ ಅಷ್ಟಾಗಿ ಗೊತ್ತಿರಲಿಲ್ಲ.. ಅವರ ನಿವೃತ್ತಿಯ ನಂತರ ಬಂದ ಗ್ರಾಚ್ಯುಟಿ ಹತ್ತು ಲಕ್ಷ ರೂಪಾಯಿಗಳನ್ನು ಅವರು ಶಾಲಾ ನಿರ್ಮಾಣಕ್ಕೆಂದು ಜಿಲ್ಲಾಧಿಕಾರಿಗಳಿಗೆ ಚೆಕ್ ಕೊಟ್ಟಾಗಲೇ ಅವರು ಮಾಧ್ಯಮಕ್ಕೆ ಪರಿಚಯವಾಗಿದ್ದು!
ಅವರ ಕಾರ್ಯದ ಕುರಿತು ಹಲವಾರು ಪತ್ರಿಕೆಗಳು, ಟಿವಿ ಚಾನೆಲ್ ಗಳು ಕಾರ್ಯಕ್ರಮ ಪ್ರಸಾರ ಮಾಡಿದವು! ಇವರ ಕಾರ್ಯವನ್ನು ಗಮನಿಸಿ ಬಂದ ಪ್ರಶಸ್ತಿಗಳು ಒಂದೇ? ಎರಡೇ ? ಭಾರತ ಸರ್ಕಾರ ಇವರನ್ನು Best Librarian of India ಎಂದು ಗೌರವಿಸಿತು. ಯುನೈಟೆಡ್ ನೇಷನ್ಸ್ ಇವರನ್ನು ‘Noblest Man of 20th Century’ ಎಂದಿತು. ರೋಟರಿ ಸಂಸ್ಥೆ ಇವರನ್ನು ‘ Man of the Millennium’ ಎಂದು ಕರೆಯಿತು. ಒಟ್ಟಾರೆ ಇವರಿಗೆ ಬಂದ ಪ್ರಶಸ್ತಿಯ ಮೊತ್ತ ಎಷ್ಟು ಗೊತ್ತೇ?
ಬರೋಬ್ಬರಿ ಮೂವತ್ತು ಕೋಟಿ ರೂಪಾಯಿಗಳು! ಇವೆಲ್ಲವೂ ‘ ಪಾಲಂ ‘ ಮೂಲಕ ದೀನ ದಲಿತರಿಗೆ ತಲುಪಿತು. ಇದನ್ನೆಲ್ಲಾ ನೋಡಿದ ನಮ್ಮ ನೆಚ್ಚಿನ ತಲೈವಾ ರಜನೀಕಾಂತ್ ಅವರು ಕಲ್ಯಾಣ ಸುಂದರಂ ಅವರನ್ನು ತನ್ನ ತಂದೆಯ ರೂಪದಿಂದ ದತ್ತು ತೆಗೆದುಕೊಂಡಿದ್ದಾರೆ!
ಸಮಾಜಕ್ಕೆ ಕೊಡಬೇಕಾದರೆ ಸ್ವಂತಕ್ಕೆ ಸ್ವಲ್ಪವಾದರೂ ನೋವಾಗಬೇಕಂತೆ! ದಾನ ಮಾಡುವಾಗ ಸ್ವಲ್ಪವೂ ನೋವಾಗದೇ ಇದ್ದರೆ, ಅದು ದಾನವೇ ಅಲ್ಲವಂತೆ! ತನ್ನ ಜೀವನವನ್ನೇ ಆಹುತಿಯಾಗಿಸಿ ಸಮಾಜವನ್ನು ಬೆಳಗಿದ ದೀಪ ಪಾಲಂ ಕಲ್ಯಾಣ ಸುಂದರಂ! ಸಣ್ಣ ಪುಟ್ಟ ದಾನಗಳನ್ನು ಮಾಡಿ ಫೋಟೋಗೆ ಪೋಸು ಕೊಡುವ ಹುಲು ಮಾನವರಿರುವ ಈ ಸಮಯದಲ್ಲಿ ಸಮಾಜವೇ ಸರ್ವಸ್ವ ಎಂದು ಬದುಕಿರುವ ಇವರನ್ನು ಏನೆಂದು ಕರೆಯೋಣ?
ನಮ್ಮ ಸಮಾಜದಲ್ಲಿ ದಾನಕ್ಕೆ ಅತ್ಯುಚ್ಛ ಉದಾಹರಣೆ ಮಹರ್ಷಿ ದಧೀಚಿ, ದಾನ ಶೂರ ಕರ್ಣ ಮುಂತಾದವರಿದ್ದಾರೆ. ಈ ಕಾಲದಲ್ಲಿಯೂ ಕಲ್ಯಾಣ ಸುಂದರಂ ರೀತಿಯ ಹಲವಾರು ಎಲೆಮರೆಯ ಹಣ್ಣುಗಳು ಇದ್ದಾರೆ ಎಂಬುದನ್ನು ಹೇಳುವುದಕ್ಕಾಗಿಯೇ ಈ ಲೇಖನ ಬರೆದುದು.
ಇನ್ನು ಮೇಲಾದರೂ ‘ನಾನು ಕೊಟ್ಟೆ’ ಎಂದು ಹೇಳುವುದನ್ನು ಬಿಡೋಣವೇ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882