ತೊಗರಿ ಖರೀದಿ ಕೇಂದ್ರ ಸ್ಥಗಿತ ವಿರೋಧಿಸಿ ರೈತರಿಂದ ಬೃಹತ್ ಪ್ರತಿಭಟನೆ
ಯಾದಗಿರಿಃ ತೊಗರಿ ಖರೀದಿ ಕೇಂದ್ರ ಗುರುವಾರದಿಂದ ಖರೀದಿ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿರುವದನ್ನು ಖಂಡಿಸಿ ರೈತಾಪಿ ಜನರು ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ ಗ್ರಾಮದಲ್ಲಿ ಶಹಾಪುರ-ವಿಜಯಪುರ ಮುಖ್ಯ ರಸ್ತೆ ತಡೆದು, ಟೈರ್ಗಳಿಗೆ ಬೆಂಕಿ ಹಚ್ಚಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವವಹಿಸಿದ್ದ ಮಾಜಿ ಗ್ರಾಪಂ ಅಧ್ಯಕ್ಷ ಶರಣಗೌಡ ಮಾತನಾಡಿ, ಏಕಾಏಕಿ ತೊಗರಿ ಖರೀದಿ ಕೇಂದ್ರಗಳನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶ ನೀಡಿದ್ದು, ಇದರಿಂದ ಸಾಕಷ್ಟು ರೈತರಿಗೆ ತೊಂದರೆಯಾಗಿದೆ. ಇನ್ನು ಬಹುತೇಕ ಜನರು ತೊಗರಿ ಕೇಂದ್ರಕ್ಕೆ ನೀಡಲು ಹಗಲು ರಾತ್ರಿ ಕಾಯುತ್ತಿದ್ದಾರೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಲ್ಲಿ ಸಮಸ್ಯೆಯಾಗುತ್ತಿದ್ದು, ಅಧಿಕಾರಿಗಳು ಇನ್ನೂ ಒಂದು ವಾರಗಳ ಕಾಲ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ಸಾಕಷ್ಟು ರೈತರು ಇನ್ನು ತೊಗರಿ ನೀಡುವವರಿದ್ದು, ಇಂತಹ ಸಂದರ್ಭದಲ್ಲಿ ಏಕಾಏಕಿ ಖರೀದಿ ನಿಲ್ಲಿಸಿದರೆ, ತೊಗರಿ ಬೆಳೆದ ರೈತಾಪಿ ಜನರಿಗೆ ಅನ್ಯಾಯವಾಗಲಿದೆ. ಕಾರಣ ಇನ್ನೊಂದು ವಾರಗಳ ಕಾಲ ತೊಗರಿ ಖರೀದಿಗೆ ಅವಕಾಶ ಕಲ್ಪಿಸಿದರೂ ಸಮಸ್ಯೆ ನಿವಾರಣೆಯಾಗುವುದು ಕಷ್ಟ ಸಾಧ್ಯವಿದೆ. ಕಾರಣ ಸರ್ವ ರೈತರ ತೊಗರಿ ತೆಗೆದುಕೊಳ್ಳವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಈಗಾಗಲೇ ಆನ್ ಲೈನ್ನಲ್ಲಿ ಎಂಟ್ರಿಯಾದ ರೈತರಿಗೆ ರಸೀದಿ ನೀಡಿರುವದಿಲ್ಲ. ಕೂಡಲೇ ರಸೀದಿ ನೀಡುವ ಮೂಲಕ ರೈತರಿಗೆ ಖಾತ್ರಿ ಪಡಿಸಬೇಕು ಎಂದರು.
ರೈತಾಪಿ ಜನರು ರಸ್ತೆಗಿಳಿದು ನೂರಾರು ಟ್ರಾಕ್ಟರ್, ಎತ್ತಿನ ಬಂಡಿಗಳನ್ನು ರಸ್ತೆಗೆ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಸೋಮಶೇಖರ ಅರಳಗುಂಡಿಗಿ ಮಾತನಾಡಿ, ಇನ್ನೆರಡು ದಿನಗಳಲ್ಲಿ ರೈತರ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಆಗ ರೈತರು ಪ್ರತಿಭಟನೆ ವಾಪಸ್ ಪಡೆದರು.
ಇದೇ ಸಂದರ್ಭದಲ್ಲಿ ಪ್ರತಿಭಟನೆಗಾರರು ಇನ್ನೆರಡು ದಿನದಲ್ಲಿ ಸಮರ್ಪಕ ವ್ಯವಸ್ಥೆಗೊಳಿಸದಿದ್ದಲ್ಲಿ ತಹಸೀಲ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಗೌತಮ ಕುಲಕರ್ಣಿ, ಶಿವಪ್ಪಗೌಡ ಪೋ.ಪಾಟೀಲ್, ಅಡಿವೆಪ್ಪ ದೊಡ್ಮನಿ ಸೇರಿದಂತೆ ಇತರರು ಭಾಗವಹಿಸಿದ್ದರು.