ಟ್ರ್ಯಾಕ್ಟರ್-ಟಿಪ್ಪರ್ ಮುಖಾಮುಖಿ ಡಿಕ್ಕಿ ನಾಲ್ವರಿಗೆ ಗಂಭೀರ ಗಾಯ
ಯಾದಗಿರಿಃ ಟ್ರ್ಯಾಕ್ಟರ್ ಮತ್ತು ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ರಸ್ತಾಪುರ ಕ್ರಾಸ್ ಬೀದರ-ಬೆಂಗಳೂರ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಮರಳು ತುಂಬಿದ್ದ ಟಿಪ್ಪರ್ ಶಹಾಪುರದ ಕಡೆ ಹೊರಟಿತ್ತು ಎನ್ನಲಾಗಿದ್ದು ಅದೇ ವೇಳೆಗೆ ಆಲೋ ಬ್ಲಾಕ್ (ದೊಡ್ಡ ಗಾತ್ರದ ಸಿಮೆಂಟ್ ಇಟ್ಟಂಗೆ) ತುಂಬಿಕೊಂಡು ಹತ್ತಿಗೂಡೂರ ಕಡೆ ಹೊರಟಿದ್ದ ಟ್ರ್ತಾಕ್ಟರ್ ನಡುವೆ ಅಪಘಾತ ಸಂಭವಿಸಿದೆ.
ಟ್ರ್ಯಾಕ್ಟರ್ ಚಾಲಕ ಮಲ್ಲಪ್ಪ ಮತ್ತು ಮಹಾಲಿಂಗಪ್ಪ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ನವೋದಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನುಳಿದ ಇಬ್ಬರು ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ನಡೆದ ಪರಿಣಾಮ ಟ್ರ್ಯಾಕ್ಟರ್ ನಲ್ಲಿರುವ ಹಾಲೋ ಬ್ಲಾಕ್ಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಹರಡಿದ್ದು, ರಸ್ತೆ ಸಂಚಾರಕ್ಕೆ 1 ತಾಸು ತೊಂದರೆಯುಂಟಾಯಿತು.
ಪೊಲೀಸರ ವಿರುದ್ಧ ಜನರ ಆಕ್ರೋಶ
ಇದೆ ಸಂದರ್ಭದಲ್ಲಿ ಅಪಘಾತ ವೀಕ್ಷಣೆಗೆ ಸೇರಿ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ ಇದು ಸರಿಯಲ್ಲ ಅಧಿಕಾರ ದರ್ಪ ತೋರಿದಂತೆ, ದುರ್ಬಳಕೆ ಮಾಡಿಕೊಂಡಂತೆ ಎಂದು ದಲಿತ ಸೇನೆ ತಾಲೂಕು ಅಧ್ಯಕ್ಷ ಶರಣರಡ್ಡಿ ಹತ್ತಿಗೂಡೂರ ಆರೋಪಿಸಿದ್ದಾರೆ
ಅಲ್ಲದೆ ಅಕ್ರಮ ಮರಳು ವಾಹನಗಳ ಅತಿ ವೇಗ ಸಂಚಾಲನೆಯಿಂದ ಅಪಘಾತಗಳು ಹೆಚ್ಚಾಗುತ್ತಿದ್ದು, ಪೊಲೀಸರು ಮೊದಲು ಇದನ್ನೆಲ್ಲ ಕಡಿವಾಣ ಹಾಕಬೇಕಿದೆ ಎಂದು ಆಗ್ರಹಿಸಿದ್ದಾರೆ.