ಪ್ರಮುಖ ಸುದ್ದಿ

ಕನಕದಾಸರ ಕೀರ್ತನೆ ಸಮಾಜ ಪರಿವರ್ತನೆಗೆ ಪೂರಕಃ ಚಿಂಚನಸೂರ

ಯಾದಗಿರಿಯಲ್ಲಿ ಜಿಲ್ಲಾಡಳಿತದಿಂದ ಭಕ್ತ ಕನಕದಾಸರ ಜಯಂತ್ಯುತ್ಸವ

ಯಾದಗಿರಿ: ನಿಷ್ಠೆ-ಭಕ್ತಿಯೊಂದಿಗೆ ಕೃಷ್ಣನ ದರ್ಶನ ಪಡೆದ ಭಕ್ತ ಕನಕದಾಸರು ಶ್ರೇಷ್ಠ ಭಕ್ತರಾಗಿದ್ದರು ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಗುರುಮಠಕಲ್ ಶಾಸಕ ಬಾಬುರಾವ ಚಿಂಚನಸೂರ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ನಗರಸಭೆ ಹಾಗೂ ಶ್ರೀ ಭಕ್ತ ಕನಕದಾಸರ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಸೋಮವಾರ ನಡೆದ ಭಕ್ತ ಕನಕದಾಸರ 130 ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಲವು ದಾರ್ಶನಿಕರಲ್ಲಿ ಭಕ್ತ ಕನಕದಾಸರೂ ಒಬ್ಬರಾಗಿದ್ದಾರೆ, ದಾಸ ಸಾಹಿತ್ಯದ ಕೀರ್ತನೆಗಳ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದರು.
ಕುಲ ಕುಲವೆಂದು ಹೊಡೆದಾಡದಿರಿ, ಕುಲದ ನೆಲೆ ಏನಾದರೂ ಬಲ್ಲಿರಾ.? ಎಂಬ ತತ್ವ ಸಂದೇಶ ನೀಡಿ ಸಮಾಜ ಏಕತೆಗೆ ಶ್ರಮಿಸಿದ ಮಹನ್ ಸಂತರು. ಅಲ್ಲದೆ ನಾನೆಂಬ ಅಹಂಕಾರ ಬಿಟ್ಟಾಗ ಮನುಷ್ಯನಿಗೆ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬುದು ಭಕ್ತ ಕನಕದಾಸರ ನಂಬಿಕೆ, ಆದ್ದರಿಂದ ಅಹಂಕಾರ ತೊರೆದಾಗ ಮನುಷ್ಯನು ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.

ಹಿಂದುಳಿದ ಧೀಮಂತ ನಾಯಕ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಐದು ವರ್ಷಗಳ ಕಾಲ ಸುಭದ್ರ ಆಡಳಿತ ನಡೆಸಿಕೊಂಡು ಬರುತ್ತಿರುವುದು ನಮ್ಮ ನಿಮ್ಮೆಲ್ಲರ ಸುದೈವ. ಹೀಗಾಗಿ ಹಿಂದುಳಿದ, ಶೋಷಿತರ ಉಕ್ಕಿನ ನಾಯಕ ಎಂದರೆ ಅದು ಸಿಎಂ ಸಿದ್ಧರಾಮಯ್ಯ ಎಂದು ಕೊಂಡಾಡಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ದೇವಿಂದ್ರಪ್ಪ ಹಳ್ಳಿಮನಿ ಉಪನ್ಯಾಸ ನೀಡುತ್ತಾ, ಹಾವೇರಿ ಜಿಲ್ಲೆಯ ಬಾಡ ಎಂಬ ಗ್ರಾಮದಲ್ಲಿ ಕನಕದಾಸರು ಜನಿಸಿ 98 ವರ್ಷಗಳ ಕಾಲ ಬದುಕಿ, ಜನರಲ್ಲಿ ಭಕ್ತಿ ವೈರಾಗ್ಯ ಜ್ಞಾನ ಬೀಜವನ್ನು ಬಿತ್ತಿ ಕೊನೆಯಲ್ಲಿ ಕೇಶವ ನಾಮಾವಳಿಯನ್ನು ಹಾಡುತ್ತಾ ಆರಾಧ್ಯ ದೈವ ಕೇಶವನಲ್ಲಿ ಲೀನರಾಗುತ್ತಾರೆ ಎಂದು ವಿವರಿಸಿದರು.

ಬೀದಿ ಬೀದಿಗಳಲ್ಲಿ ಕೀರ್ತನೆಗಳ ಹಾಡುತ್ತಾ ಜನರನ್ನು ಜಾಗೃತಿಗೊಳಿಸಿದ ಕನಕದಾಸರು ಶ್ರೇಷ್ಠ ಭಕ್ತರು, ಅವರ ತತ್ವಗಳಲ್ಲಿ ನೀತಿಯುತ ಪದಗಳು ಅಡಗಿವೆ. ಅವುಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡಾಗ ಮಾತ್ರ ಜೀವನ ಪಾವನವಾಗುತ್ತದೆ ಎಂದರು.

ಇದೆ ವೇಳೆ ಕನಕದಾಸರ ಸಾಹಿತ್ಯ ಪ್ರಬಂಧ ಸ್ಪರ್ಧೆಯಲ್ಲಿ ಆಯ್ಕೆಯಾದ ಕುಮಾರಿ ಪೂಜಾ (ಪ್ರಥಮ), ರವಿಚಂದ್ರ (ದ್ವಿತೀಯ) ಹಾಗೂ ಜೋತಿ (ತೃತೀಯ) ಪಡೆದ ವಿದ್ಯಾರ್ಥಿಗಳನ್ನು ನಗದು ಬಹುಮಾನ ವಿತರಿಸಿ ಗೌರವಿಸಲಾಯಿತು.

ಇದಕ್ಕೂ ಮುಂಚೆ ನಗರದ ಕನಕ ವೃತ್ತದಿಂದ ಕಕ್ಕೇರಾ ಗವೀರಂಗ ಕ್ಯಾಂಪ್‍ನ ಜಟ್ಟೆಪ್ಪ ಯಲಗಟ್ಟಿ ಡೊಳ್ಳಿ ಕಲಾ ತಂಡದಿಂದ ಡೊಳ್ಳು ಪ್ರದರ್ಶನದೊಂದಿಗೆ ಭಕ್ತ ಕನಕದಾಸರ ಭಾವಚಿತ್ರ ಮೆರವಣಿಗೆ ಜರುಗಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಕುಮಾರಿ ಲಲಿತ ಅನಪೂರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿಗೌಡ ಮಾಲಿಪಾಟೀಲ ಅನಪೂರ, ಕುರುಬ ಸಮಾಜ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಚಂದ್ರಶೇಖರ ವಾರದ, ಬುದ್ಧನ್, ಮಲಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಅಪರ ಜಿಲ್ಲಾಧಿಕಾರಿ ಜಗದೀಶ ನಾಯ್ಕ ಸೇರಿದಂತೆ ಇತರರಿದ್ದರು.

ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಅವರು ಗಣ್ಯರನ್ನು ಸ್ವಾಗತಿಸಿದರು. ಮಲ್ಲಿಕಾರ್ಜುನ ಅವರು ವಂದಿಸಿದರು. ಯುವ ಸಾಹಿತಿ ಅಮರಯ್ಯಸ್ವಾಮಿ ಜಾಲಿಬೆಂಚಿ ಅವರು ನಿರೂಪಿಸಿದರು. ಆಕಾಶವಾಣಿ ಕಲಾವಿದ ಶ್ರೀ ಚಂದ್ರಶೇಖರ್ ಗೋಗಿ ಮತ್ತು ತಂಡದವರು ಪ್ರಾರ್ಥನ ಗೀತೆ ಹಾಗೂ ನಾಡಗೀತೆ ಹಾಡಿದರು.

Related Articles

Leave a Reply

Your email address will not be published. Required fields are marked *

Back to top button