ಸಣ್ಣ ಪಕ್ಷಿಗಳ ಪ್ರೀತಿ, ಕರುಣೆಯ ಕಲರವಕ್ಕೆ ಕಣ್ಣೀರು ಹಾಕಿದ ದೊಡ್ಡ ಪಕ್ಷಿ.!
ಪ್ರೀತಿ, ಪ್ರಕೃತಿ ಪಾಠ ಮತ್ತು ಪಾಪ ನಿವೇದನೆ!
-ಮಲ್ಲಿಕಾರ್ಜುನ ಮುದನೂರ್
ಕಾಗೆ, ಗುಬ್ಬಿ, ಗಿಳಿ, ಪಾರಿವಾಳ ಹೀಗೆ ವಿವಿಧ ತಳಿಗಳ ವಿವಿಧ ರೂಪದ ಪಕ್ಷಿಗಳು ಒಂದು ದೊಡ್ಡ ಮರದಲ್ಲಿ ವಾಸವಾಗಿದ್ದವು. ಒಂದು ದಿನ ತುಂತುರು ಮಳೆ, ಉತ್ತಮವಾದ ವಾತಾವರಣ, ಹಸಿರೆಲೆ ಚಿಗರೊಡೆದು, ಹೂ ಹಣ್ಣು ಕಾಯಿ ಬಿಟ್ಟ ಕ್ಷಣ. ಎಲ್ಲಾ ಹಕ್ಕಿಗಳು ಖುಷಿಯಿಂದ ತಮ್ಮ ಗೂಡಿನಿಂದ ಹೊರ ಬಂದು ಹಾರಾಡುತ್ತಾ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಹೊರಟವು. ತಮಗೆ ದೊರೆತ ಹಣ್ಣು, ಹೂ ಕಾಯಿಗಳನ್ನು ತಿನ್ನುತ್ತಾ ಸ್ವಚ್ಛಂದವಾಗಿ ಹಾರಾಡುತ್ತಿದ್ದವು. ಅವುಗಳ ಸಂತಸಕ್ಕೆ ಪಾರವೇ ಇರಲಿಲ್ಲ.
ಯಾವತ್ತಿಗೂ ಬೇಧಭಾವ ಕಾಣದ ಪಕ್ಷಿಗಳು ನಡುವೆ ಅಂದು ಬೇರಡೆಯಿಂದ ಒಂದು ದೊಡ್ಡ ಪಕ್ಷಿ ಬಂದಿತು. ಅದು ಸಹ ತನ್ನ ಆಹಾರ ಸೇವಿಸುತ್ತಾ ಎಲ್ಲಾ ಪಕ್ಷಿಗಳನ್ನು ನೋಡಾತ್ತಾ ಕುಳಿತಿತ್ತು. ಪ್ರತಿದಿನ ಹೊತ್ತು ಮುಳುಗುವ ಸಮಯಕ್ಕೆ ಸರಿಯಾಗಿ ಆಯಾ ಪಕ್ಷಿಗಳು ಚಿಲಿಪಿಲಿ ಗಾನದೊಂದಿಗೆ ತಮ್ಮ ತಮ್ಮ ಗೂಡು ಸೇರುತ್ತಿದ್ದವು.
ಅದೇ ಸಂದರ್ಭದಲ್ಲಿ ಹೊರಗಡೆಯಿಂದ ಬಂದ ಪಕ್ಷಿ ಕೆಲವು ಪಕ್ಷಿಗಳನ್ನು ಮಾತಾಡಿಸಿತು. ಪರಸ್ಪರ ಪರಿಚಯ ಮಾಡಿಕೊಂಡಿತು. ಅವುಗಳ ಪೈಕಿ ಕೆಲವು ಪಕ್ಷಿಗಳು ನಮ್ಮ ಗೂಡಿನಲ್ಲಿ ನೀವು ಬಂದಿರಲು ಸಾಧ್ಯವಿಲ್ಲ, ನಮ್ಮ ಗೂಡು ಚಿಕ್ಕದು. ನೀವು ಅತಿಥಿಗಳು, ಆದರೆ ಏನು ಮಾಡುವುದು ಗಾತ್ರದಲ್ಲಿ ನಮಗಿಂತ ದೊಡ್ಡವರು. ನಿಮಗೆ ಸೂಕ್ತವಾದ ಗೂಡು ಯಾರ ಬಳಿ ಇದೆಯೋ ಅವರನ್ನು ಕೇಳುತ್ತೇವೆ. ಇವತ್ತು ಇಲ್ಲಿಯೇ ವಾಸವಿದ್ದು ಬೆಳಗ್ಗೆ ಬೇಕಾದರೆ ತೆರಳಬಹುದು ಎಂದು ಓರ್ವ ಗುಬ್ಬಕ್ಕ ಹೇಳಿದಳು.
ಆಗ ಆಯ್ತು ಹಾಗೇ ಆಗಲಿ ಅಂದಿತು ಆ ದೊಡ್ಡ ಪಕ್ಷಿ. ದೊಡ್ಡ ಪಕ್ಷಿ ಇರಲು ಸೂಕ್ತ ಗೂಡಿನ ಹುಡುಕಾಟ ನಡೆಯಿತು. ಅದಕ್ಕೆ ತಕ್ಕ ಯಾವ ಗೂಡು ಅಲ್ಲಿರಲಿಲ್ಲ, ಬೇಸರಗೊಂಡ ಗುಬ್ಬಿ ಮತ್ತು ಇತರೆ ಸಣ್ಣ ಪಕ್ಷಿಗಳು ಆ ದೊಡ್ಡಗಾತ್ರದ ಪಕ್ಷಿ ಹತ್ತಿರ ಬಂದು ನಮ್ಮಲ್ಲಿ ನೀವು ಉಳಿದುಕೊಳ್ಳುವಂತ ಯಾವುದೇ ಗೂಡುಗಳಿಲ್ಲ. ಏನ್ಮಾಡೋದು ಎಂದು ಯೋಚಿಸ ತೊಡಗಿದವು.
ದೊಡ್ಡ ಪಕ್ಷಿಗೆ ಚಿಂತೆ ಆವರಿಸಿತ್ತು. ಆ ದೊಡ್ಡ ಪಕ್ಷಿಗಾಗಿ ಎಲ್ಲಾ ಗುಬ್ಬಿ, ಗಿಳಿ, ಪಾರಿವಾಳಗಳು ಕಾಗೆ ಸೇರಿಕೊಂಡು ದೊಡ್ಡ ಗೂಡು ನಿರ್ಮಿಸಲು ಮುಂದಾದವು. ಆಗ ಇವುಗಳ ಕರುಣೆ, ಮಮತೆ ಅತಿಥಿ ವ್ಯವಸ್ಥೆಗೆ ತೋರ್ಪಡಿಸುತ್ತಿರುವ ಪ್ರೀತಿ ಕಂಡು ದೊಡ್ಡ ಪಕ್ಷಿಯ ಕಣ್ಣಲ್ಲಿ ನೀರುಕ್ಕಿತು. ಉಳಿದೆಲ್ಲ ಪಕ್ಷಿಗಳು ಯಾಕೆ ಕಣ್ಣಲ್ಲಿ ನೀರು, ನಾವೆಲ್ಲ ವ್ಯವಸ್ಥೆ ಮಾಡುತ್ತೇವೆ ಎಂದು ಸಮಾಧಾನದ ಮಾತನಾಡಿದವು. ತಾನೇ ಕಟ್ಟಿದ ಗೂಡು ತನ್ನ ಮಕ್ಕಳನ್ನು ಕಳೆದುಕೊಂಡ ದಾರಿ ತೋಚಿದ ಕಡೆ ಹಾರುತ್ತಾ ಬಂದಿದ್ದ ಆ ದೊಡ್ಡ ಪಕ್ಷಿಗೆ ಸಣ್ಣಕ್ಕಿಗಳ ಅಪಾರ ಪ್ರೀತಿ ಕಣ್ಣಾಲೆ ಒದ್ದೆಗೊಳಿಸಿತ್ತು.
ಇರಲಿ ಬಿಡಿ ಕತ್ತಲಲ್ಲಿ ಹೇಗೆ ಮನೆ ಕಟ್ಟಲು ಸಾಧ್ಯ ನೀವುಗಳು ಹೋಗಿ ವಿಶ್ರಾಂತಿ ಮಾಡಿ. ನಾನು ಇವತ್ತೊಂದಿನ ಇಲ್ಲೆ ಎಲ್ಲೋ ಗಿಡದ ಎಲೆಗಳ ಪೊದೆಯಲ್ಲಿ ವಾಸ ಮಾಡುತ್ತೇನೆ. ಅಪರಿಚಿತನಿಗೆ ನೀವು ತೋರಿದ ಪ್ರೀತಿ, ಕಾಳಜಿ ದೊಡ್ಡದು, ತುಂಬ ಧನ್ಯವಾದಗಳು ಎಂದಿತು. ಆಗ ಏಕೆ, ಏನಾಯಿತು ನಿಮ್ಮ ಮನಸ್ಸಲ್ಲಿ ಏನೋ ಆರದ ಗಾಯವಿದ್ದಂತೆ ಕಾಣುತ್ತಿದೆ. ಏನಾಗಿದೆ ಹೇಳಿ ನಮ್ಮ ಕೈಲಾದ ಸಹಾಯ ಮಾಡುತ್ತೇವೆ ಎಂದವು ಎಲ್ಲಾ ಪಕ್ಷಿಗಳು.
ನಿಮ್ಮ ಈ ಪ್ರೀತಿಗೆ ಆಭಾರಿ, ನನ್ನ ಕಥೆ ಬಹು ದೊಡ್ಡದಿದೆ ಬಿಡಿ ಎಂದಿತು ದೊಡ್ಡ ಪಕ್ಷಿ. ಆಗ ತನ್ನ ಕಥೆ ಹೇಳಲಾರಂಭಿಸಿತು. ನಾನು ಎಲ್ಲಾ ಪಕ್ಷಿಗಳಿಂದ ಭಿನ್ನ ಎಂದುಕೊಂಡು ಒಂದೂರಿನ ಸಮುದ್ರದ ದಂಡೆಯ ಮರವೊಂದರಲ್ಲಿ ನನ್ನ ಮಕ್ಕಳು ಮರಿಗಳೊಂದಿಗೆ ವಾಸ ಮಾಡುತ್ತಿದ್ದೆನು. ಒಂದು ದಿನ ಹೀಗೆ ಗುಡುಗು ಮಿಂಚು ಸಹಿತ ಬಿರುಗಾಳಿ ಬೀಸುತ್ತಿದ್ದ ಸಮಯವದು. ಬೇರೆ ಊರಿನಿಂದ ಬಂದ ಒಂದು ಗುಬ್ಬಿ ಮತ್ತು ಅದರ ಎರಡು ಪುಟ್ಟ ಮಕ್ಕಳು ನಾನು ವಾಸವಾಗಿದ್ದ ಮರದಲ್ಲಿ ಆಶ್ರಯ ಕೇಳಿತು. ಆಗ ನಾನು ಈ ಪೂರ್ಣ ಮರ ನಮ್ಮದೆ ಇಲ್ಲಿ ವಾಸಿಸಬೇಡ ಬೇರಡೆ ಹೋಗು ಎಂದು ಹೇಳಿ ಕಳಿಸಿದ ಪಾಪಿ ನಾನು ಎಂದು ಪಶ್ಚಾತಾಪದ ಕಣ್ಣೀರು ಹಾಕಿತು.
ಅಂತಹ ಸಂಕಟ ಸ್ಥಿತಿಯಲ್ಲಿ ಆ ಗುಬ್ಬಿ ತನ್ನ ಎರಡು ಮರಿಗಳನ್ನು ತೆಗೆದುಕೊಂಡು ಹಾರುತ್ತಾ ಮುಂದೆ, ಮತ್ತೊಂದು ಗಿಡದಲ್ಲಿ ಜಾಗ ಕೇಳಿತು. ಆ ಮರದಲ್ಲಿಯೂ ವಾಸವಿದ್ದ ನನ್ನ ಸಂಬಂಧಿಕರು ಸಹ ಅದಕ್ಕೆ ಸ್ಥಳವಕಾಶ ಕಲ್ಪಿಸಲಿಲ್ಲ. ನಂತರ ಸಮುದ್ರ ಬಿಟ್ಟು ದೂರದ ಮರವೊಂದರಲ್ಲಿ ವಾಸವಿದ್ದ ನನ್ನ ಸಹೋದ್ಯೋಗಿಯ ಬಳಿ ಆಶ್ರಯ ಬೇಡಿತು. ಆಗ ಅವರು ತಕ್ಷಣ ಆ ಗುಬ್ಬಿಗೆ ಆಶ್ರಯವೊದಗಿಸಿಕೊಟ್ಟರು. ಈ ಮರದಲ್ಲಿ ಎಲ್ಲಿಯಾದರೂ ವಾಸವಿರು. ಇದು ದೇವ ನಿರ್ಮಿತ ನಿಸರ್ಗ. ಇವತ್ತು ನಮ್ಮ ಗೂಡಲ್ಲಿಯೇ ಇರು, ನಾಳೆ ನಿನಗೂ ಒಂದು ಗೂಡು ಕಟ್ಟಲು ಸಹಾಯ ಮಾಡುವೆವು. ಇಲ್ಲಿಯೇ ನೀನು ನಿನ್ನ ಮರಿಗಳು ವಾಸ ಮಾಡಬಹುದು ಎಂದು ಆ ಗುಬ್ಬಿಗೆ ಆಶ್ರಯ ಒದಗಿಸಿಕೊಟ್ಟರು.
ಅಂದು ರಾತ್ರಿ ಅಗಾಧ ಮಳೆ ಗಾಳಿ ಬೀಸಿದ್ದಲ್ಲದೆ. ಸಮುದ್ರದಲ್ಲಿ ಸುನಾಮಿ ಉಂಟಾಗಿ ಅಲೆಗಳ ರಭಸಕ್ಕೆ ನಾನು ವಾಸವಿದ್ದ ಗಿಡಮರ ನೆಲ್ಲಕ್ಕೆ ಅಪ್ಪಳಿಸಿ ಸಮುದ್ರದಲ್ಲಿ ನೀರಲ್ಲಿ ಹರಿದುಕೊಂಡು ಹೋಯಿತು. ನನ್ನ ಮಕ್ಕಳು ಮರಿಗಳು ನೀರು ಪಾಲಾದವು. ಪಾಪಿ ಚಿರಾಯು ಎಂಬಂತೆ ನಾನೊಬ್ಬ ಮಾತ್ರ ಅದೃಷ್ಟವಶಾತ್ ಹೇಗೋ ಬದುಕುಳಿದಿದ್ದೇನೆ ಎಂದು ಮರುಗಿತು.
ದೊಡ್ಡಪಕ್ಷಿಯ ಕಥೆ ಕೇಳಿದ ಗುಬ್ಬಿಗಳು ಆ ದೊಡ್ಡ ಪಕ್ಷಿಯನ್ನು ಸಂತೈಸಿದವು. ಅದಕ್ಕೂ ತಮ್ಮ ಜತೆಯಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟವು. ಮರುದಿನದಿಂದ ಆ ದೊಡ್ಡ ಪಕ್ಷಿ ವಿವಿಧ ಎಲ್ಲಾ ಪಕ್ಷಿಗಳೊಂದಿಗೆ ಪ್ರೀತಿ, ಮಮತೆಯಿಂದ ವಾಸವಾಗಿತ್ತು. ಹಳೇ ಅಹಂಕಾರದ ದಿನ, ಮಕ್ಕಳನ್ನು ಕಳೆದುಕೊಂಡ ನೋವು ಮರೆತು ಎಲ್ಲರೊಳಗೊಂದಾಗಿ ಬದುಕು ಸಾಗಿಸಿತು. ಪಕ್ಷಿಗಳ ಸ್ವಚ್ಛಂದ ಜೀವನ. ಯಾವುದೇ ಮೋಸ, ವಂಚನೆ, ರಹಸ್ಯ ರಹಿತ ಆನಂದಮಯ ಜೀವನ ಈ ಪಕ್ಷಿಗಳದ್ದಾಗಿದೆ. ಪ್ರಕೃತಿಯ ಪಾಠದಿಂದ ಮನುಜ ಕಲಿಯಬೇಕಾದದ್ದು ಬಹಳಷ್ಟಿದೆ. ಏನಂತೀರಿ.?