ಒಳ್ಳೆಯದನ್ನೆ ಮಾಡುವ ಸಂಕಲ್ಪ ತೊಡಿ – ರಾಜಗೋಪಾಲ ವಿಭೂತಿ
ಒಳ್ಳೆಯದನ್ನೆ ಮಾಡುವ ಸಂಕಲ್ಪ ತೊಡಿ – ರಾಜಗೋಪಾಲ ವಿಭೂತಿ
ಶಹಾಪುರಃ ಸಮಾಜ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಕ್ಕಿಂತ ಪರಿಹಾರದ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕಿದೆ. ಆ ನಿಟ್ಟಿನಲ್ಲಿ ನಾವು ಮೊದಲು ಒಳ್ಳೆಯವರಾಗಿ ಸಮಾಜಕ್ಕೆ ಒಳ್ಳೆಯದನ್ನೆ ಮಾಡುವ ಸಂಕಲ್ಪ ಮಾಡೋಣ ಎಂದು ಉಪನ್ಯಾಸಕ ರಾಜಗೋಪಾಲ್ ವಿಭೂತಿ ಹೇಳಿದರು.
ನಗರದ ಕರದಳ್ಳಿ ಸಾಹಿತ್ಯ ಅಧ್ಯಯನ ಕೇಂದ್ರದಲ್ಲಿ ಗ್ರಾಮೀಣ ಗೆಳೆಯರ ಬಳಗ ಹಮ್ಮಿಕೊಂಡಿದ್ದ “ಸಾಮಾಜಿಕ ಕಾರ್ಯದಲ್ಲಿ ಯುವಕರ ಪಾತ್ರ” ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಸಣ್ಣ ಪುಟ್ಟ ಕಾರ್ಯ ಮತ್ತು ರಚನಾತ್ಮಕ ಚಟುವಟಿಕೆಗಳಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ.
ಈ ಸಮಾಜಮುಖಿ ಕೆಲಸಗಳನ್ನು ಮಾಡುವಾಗ ಹಲವು ರೀತಿಯ ಕಹಿ ಅನುಭವಗಳು ಉಂಟಾಗುತ್ತದೆ. ಸಾಮಾಜಿಕ ಕಾರ್ಯ ಮಾಡುವಾಗ ಹಲವಾರು ಘಟನೆಗಳನ್ನು ಎದುರಿಸಬೇಕಾಗುವದು. ಅನುಭವ ಜೀವನದ ದೊಡ್ಡ ಸಂತೆ. ಹೀಗಾಗಿ ಕೊಂಕು ಮಾತುಗಳಿಗೆ ನಮ್ಮ ಕೆಲಸವೇ ಉತ್ತರವಾಗಬೇಕು ಸಮಾಜದಿಂದ ನಾವು ಪಡೆದದ್ದನ್ನು ಕೊಂಚವಾದರೂ ಸಮಾಜಕ್ಕೆ ವಾಪಸ್ ನೀಡುವ ಸಂಕಲ್ಪ ಮಾಡಿದರೆ ಏನೆಲ್ಲಾ ಬದಲಾವಣೆಗಳನ್ನು ಸಾಕಾರಗೊಳಿಸಬಹುದು.
ಆ ನಿಟ್ಟಿನಲ್ಲಿ ಯುವಕರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿಕ್ಷಕ ನಿಂಗಣ್ಣ ತೆಕರಾಳ ಮಾತನಾಡಿ, ಬರೀ ಸಮಾಜ ಸರ್ಕಾರವನ್ನು ದೂಷಿಸುವುದರಿಂದ ಸಾಮಾಜಿಕ ಬದಲಾವಣೆ ಅಸಾಧ್ಯ. ಸಮಾಜ, ರಾಷ್ಟ್ರ ನನ್ನದು ಎಂಬ ಭಾವ ಬಲವಾಗಿ ಪಡೆದುಕೊಂಡದ್ದಕ್ಕಿಂತ ಹೆಚ್ಚಿನದನ್ನು ಸಮಾಜಕ್ಕೆ ವಾಪಸ್ ಕೊಡುವ ಇಚ್ಛಾಶಕ್ತಿ ಯುವಕರಲ್ಲಿ ಬರಬೇಕು.
ಅದೆಷ್ಟೋ ಯುವ ಮನಸ್ಸುಗಳಿಗೆ ಸಮಾಜಕ್ಕೆ ತಮ್ಮಿಂದಾದ ಕೊಡುಗೆ ನೀಡಬೇಕು ರಚನಾತ್ಮಕ ಕೆಲಸಗಳನ್ನು ಮಾಡಬೇಕು ಎಂಬ ತುಡಿತವಿದೆ. ಈ ತುಡಿತಕ್ಕೆ ಸೂಕ್ತ ಮಾರ್ಗದರ್ಶನ ಅಗತ್ಯವಿದೆ ಎಂದರು.
ಯುವ ಶಕ್ತಿಯನ್ನು ಬೆಸೆಯುತ್ತ ಅವರಲ್ಲಿ ರಾಷ್ಟ್ರ ಭಕ್ತಿ ಶ್ರಮದಾನ ಸಂಸ್ಕೃತಿಯ ಮೌಲ್ಯಗಳನ್ನು ಬಿತ್ತುವ ಮೂಲಕ ವ್ಯಕ್ತಿಯೊಳಗೆ ಮಲಗಿರುವ ಸಿಂಹ ಶಕ್ತಿಯನ್ನು ಜಾಗೃತಗೊಳಿಸುವಂತಹ ಕೆಲಸ ಆಗಬೇಕು ಎಂದರು.
ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ 13 ವರ್ಷಗಳಿಂದ ದಕ್ಷತೆ ಹಾಗೂ ಪ್ರಾಮಾಣಿಕೆಯಿಂದ ಸೇವೆ ಸಲ್ಲಿಸಿ ತಮ್ಮ ಸತತ ಅಧ್ಯಯನದಿಂದ ಇದೀಗ ಉಪನ್ಯಾಸಕ ಹುದ್ದೆಗೆ ಪದ್ನೋನತಿ ಹೊಂದಿದ್ದ ರಾಜಗೋಪಾಲ್ ವಿಭೂತಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಬಳಗದ ಅಧ್ಯಕ್ಷ ಮಹಾಂತೇಶ್ ಗಿಂಡಿ, ಕಾರ್ಯದರ್ಶಿ ವೀರೇಶ್ ಉಳ್ಳಿ, ಉಪಾಧ್ಯಕ್ಷ ಅಂಬರೇಶ ದೋರನಹಳ್ಳಿ, ಶಿಕ್ಷಕ ಶಿವಪ್ರಸಾದ್ ಕರದಳ್ಳಿ, ಯುವ ಕವಿ ಶಂಕರ್ ಹುಲಕಲ್ (ಕೆ), ಜಗದೀಶ್ ಬೆನಕನಳ್ಳಿ, ಇನ್ನಿತರರು ಉಪಸ್ಥಿತರಿದ್ದರು.