ಅಂಕಣಪ್ರಮುಖ ಸುದ್ದಿ

ಒಳ ಪಂಗಡಗಳ ಬೇಗುದಿಯಲ್ಲಿ ಸೊರಗುತಿದೆ ‘ಲಿಂಗಾಯತ ಧರ್ಮ’!

ಒಳ ಪಂಗಡಗಳ ಬೇಗುದಿಯಲ್ಲಿ ಸೊರಗುತಿದೆ ‘ಲಿಂಗಾಯತ ಧರ್ಮ’!
..
‘ಲಿಂಗಾಯತ ಧರ್ಮ’ದ ಒಳ ಪಂಗಡಗಳು ಜಿದ್ದಿಗೆ ಬಿದ್ದಂತೆ ಸಂಘಟಿತರಾಗಲು ಹವಣಿಸುತ್ತಿರುವುದು ತಮ್ಮ ತಮ್ಮಲ್ಲೇ ಗೋಡೆ ಕಟ್ಟಿಕೊಳ್ಳುವಿಕೆಯಲ್ಲದೇ ಮತ್ತೇನಲ್ಲ.
ಬಣಜಿಗ, ಪಂಚಮಸಾಲಿ, ಗಾಣಿಗ, ಸಾದರ, ಹಡಪದ, ಹೂಗಾರ ಅಂತ ಇನ್ನು ನಾವು ನಾವೇ ಏನೇನೊ ‘ಬೇಲಿ’ಗಳನ್ನು ಹಾಕಿಕೊಳ್ಳುವ ಪರಿ ಸಾಗಿದ್ದು; ‘ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ’ ಎನ್ನುವ ಬಸವಣ್ಣರ ಮಾತು ಮರೆತು, ಕಾಯಕದಿಂದ ಬಂದ ಜಾತಿಯನ್ನೇ ಮುಂದೆ ಮಾಡಿ ಲಿಂಗಾಯತ ಎನ್ನುವ ಆಲದ ಮರಕ್ಕೆ ಕೊಡಲಿ ಇಡುತ್ತಿದ್ದೇವೆ.

ಇದರಿಂದ ಆ ಮರದ ಟೊಂಗೆಗಳು ಒಂದಕ್ಕೊಂದು ಶ್ರೇಷ್ಠ ಅಂದುಕೊಳ್ಳುವ ‘ಸುಳ್ಳೇ ಚಟ’ ಹತ್ತುತ್ತಿದೆಯೇ ಹೊರತು ಬೇರೇನಿಲ್ಲ.
ಪಂಗಡಗಳಲ್ಲೇ ಮತ್ತೆ ಪಂಗಡಗಳು! ಪ್ರತ್ಯೇಕ ಪೀಠಗಳು, ಪ್ರತ್ಯೇಕ ಸ್ವಾಮೀಜಿಗಳು, ಪ್ರತ್ಯೇಕ ವಿಚಾರಗಳು, ಪ್ರತ್ಯೇಕ ಲಾಂಛನಗಳು, ಪ್ರತ್ಯೇಕ ಮಠಗಳು ಒಂದೇ ಎರಡೇ.. ಹಿಂದುಳಿದ ವರ್ಗದ ಮಠಗಳು ಕೂಡ ಇದರ ಲೆಕ್ಕಕ್ಕೆ ಸೇರುತ್ತಿವೆ. ನಮಗೆ ಬುದ್ಧನಿದ್ದಾನೆ, ಬಸವಾದಿ ಶರಣರಿದ್ದಾರೆ ಎಂದು ನಾವೆಲ್ಲ ಮರೆತೇ ಇದ್ದೇವೆ.

ಪ್ರತಿಯೊಬ್ಬರಲ್ಲೂ ತಮ್ಮ ಜಾತಿಯ ಸೆಳೆತ ‘ಒಂಜರ’ವಾದರೂ ಒಳಗೆಲ್ಲೋ ಇದ್ದೇ ಇರುತ್ತದೆ. ಅದು ನಾವು ಬೆಳೆದು ಬಂದ ಪರಿಸರ, ವಂಶವಾಹಿನಿಯಿಂದ ಬಂದಿರುತ್ತದೆ. ಅದನ್ನು ಮೀರಿ ನಾವು ಮನುಷ್ಯರಾಗಲು ಹುಟ್ಟಿದ್ದೇ ಲಿಂಗಾಯತ ಮತ್ತು ಬೌದ್ಧ ಧರ್ಮಗಳಂತಹವು. ಬುದ್ಧ, ಬಸವಣ್ಣರು ಧರ್ಮ ಆಗಲಿ ಅಂತ ಯಾವುದೂ ಮಾಡಲಿಲ್ಲ. ಆದರೆ ಅವರು ಮಾಡಿದ್ದು ‘ಒಳಿತಿನ ಧರ್ಮ’ವಾಯಿತು! ಆದರೆ, ಅವರಾಶಯದ ಅರಿವು ನಮ್ಮಲ್ಲಿ ಉಳಿದಿಲ್ಲ.

ಬಣಜಿಗರು ಮಠಗಳನ್ನು ಕಟ್ಟಿದ್ದಾರೆ ಅವರ ವಟುಗಳೇ ಸ್ವಾಮಿಗಳಾಗಬೇಕು ಎನ್ನುವುದು, ಮತ್ತುಳಿದವರು ‘ಕಿತ್ತೂರು ಚನ್ನಮ್ಮ ನಮ್ಮವಳು’ ಎನ್ನೋದು, ಅಕ್ಕ ಮಹಾದೇವಿ ನಮ್ಮ ವಂಶದವಳು ಅನ್ನೋದು, ಸಂಗೊಳ್ಳಿ ರಾಯಣ್ಣ, ಅಂಬಿಗರ ಚೌಡಯ್ಯ ನಮ್ಮಾತ ಅಂತ ಹೇಳಿಕೊಳ್ಳುವುದು ಸರಿಯೇ.?

ಆಯಾ ಸಮುದಾಯದ ಮಹಾತ್ಮ/ತ್ಮೆಯ ಫೋಟೊ ಹಾಕಿಕೊಂಡು ಇವರು ‘ಈ’ ಜಾತಿಯವರು ಅಂತ ಜಗಜ್ಜಾಹೀರು ಗೊಳಿಸಿ ಅಲ್ಲಿಯ ವರೆಗೆ ಪೂಜ್ಯನೀಯರಾಗಿದ್ದವರನ್ನು ಸಂಕುಚಿತವಾಗಿ ನೋಡುವಂತೆ ಮಾಡುತ್ತಿದ್ದೇವೆ ಅಂತ ನಮಗೆ ಅನ್ನಿಸುತ್ತಲೇ ಇಲ್ಲ. ಅಷ್ಟೊಂದು ಅಸೂಕ್ಷ್ಮ ಮನುಷ್ಯರಾಗಿದ್ದೇವೆ ನಾವು!
..
ಬಣಜಿಗರು ಮಠಗಳಿಗೆ ಸಹಾಯ ಮಾಡಿದ್ದು ಎಲ್ಲರಿಗೂ ಅನುಕೂಲವಾಗಲಿ ಎಂದು. ಚನ್ನಮ್ಮ ತಾಯಿ, ರಾಯಣ್ಣ ಹೋರಾಡಿದ್ದು ಸ್ವಾತಂತ್ರ್ಯಕ್ಕಾಗಿ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವರು ಜೀವ ತೇಯ್ದದ್ದು ನಮ್ಮಲ್ಲಿನ ಹೊಲಸು ತೊಳೆಯಲು! ಶರಣರು ತಮ್ಮ ಪೂರ್ವಾಪರ ಮರೆತೇ ಮನುಕುಲದ ಒಳಿತಿಗಾಗಿ ಶರಣ ಧರ್ಮದಲ್ಲಿ ಲೀನರಾದರು. ಕಿತ್ತೂರು ಚನ್ನಮ್ಮ ಅಂತಹ ಧರ್ಮವನ್ನು ಆರಾಧಿಸಿದವರು. ಆದರೆ, ಮತ್ತೆ ಅವರನ್ನು ಅವರವರ ಜಾತಿಗೇ ಕರೆದುಕೊಂಡು ಹೋಗಿ ಬಿಡುತ್ತಿರುವ ನಾವು ನಿಜಕ್ಕೂ ಎಷ್ಟು ಸಣ್ಣವರು ಅಲ್ಲವೇ!?
..
ಎಲ್ಲವನ್ನ, ಎಲ್ಲರನ್ನ ಒಳಗೊಂಡಿದ್ದೇ ಲಿಂಗಾಯತ. ಬಸವಾದಿ ಶರಣರ ಆಶಯವೇ ಅದಾಗಿತ್ತು ಅಂತ ಗೊತ್ತಿಲ್ಲದ್ದೇನಲ್ಲ. ಲಿಂಗಾಯತ ಎನ್ನುವ ಸಮುದ್ರವನ್ನು ನಾವು ಎಲ್ಲ ಒಳ ಪಂಗಡಗಳವರು ‘ಇನ್ನೂ’ ಸೇರುವ ಹಂತದಲ್ಲೇ ಇದ್ದೀವಿ ಅನ್ನೋದು ತಹತಹಿಕೆ ಸೃಷ್ಟಿಸಿದೆ. ಅದರಲ್ಲೇ ಇನ್ನೂ ಗೊಂದಲ ನಮಗೆ.

ಹೀಗೆ ಅವರವರೇ ಅವರದ್ದು ಮಾತ್ರ ಸರಿ ಅಂತ ಸಾಗುತ್ತಿರುವುದರಿಂದ ಹಳ್ಳ, ನದಿಗಳು ನಾನೆಷ್ಟು ಶ್ರೇಷ್ಠ ಅಂತ ಯೋಚಿಸುತ್ತಲೇ ಸಮುದ್ರದ ಹಾದಿ ಮರೆತಂತಾಗುತ್ತಿದೆ. ನಮ್ಮವರೆಲ್ಲರಲ್ಲಿನ ಈ ‘ಶ್ರೇಷ್ಠತೆ ವ್ಯಸನ’ ಬಸವಣ್ಣನವರ ಮೂಲಾಶಯಕ್ಕೆ ಧಕ್ಕೆ ತರುತ್ತಿದೆ ಎನ್ನುವ ಆತಂಕವೂ ನಮ್ಮ ಬಳಿ ಸುಳಿಯುತ್ತಿಲ್ಲದಿರುವುದು ಭಾಳ ಹಳಹಳಿ.
ಆದರೆ, ಇದೆಲ್ಲದಕ್ಕೆ ಮದ್ದು ಲಿಂಗಾಯತ ಧರ್ಮ ಆಗುವುದೊಂದೇ! ಇಲ್ಲದಿದ್ದರೆ ೨ಎ, ೩ಎ ಅನಕೋಂತ ನಾವು ಹಿಂಗೇ ಇರಬೇಕಾಗುತ್ತದೆ.
..
ಬುದ್ಧ ಬೆಳಗಿದ್ದಾನೆ. ಬಸವಣ್ಣರೂ ವಿಶ್ವದೆಲ್ಲೆಡೆ ಹರಡಬೇಕಿದೆ. ಶರಣರ ಕಾಯಕ, ಮನುಷ್ಯತ್ವದ ಧರ್ಮ ಮಾನ್ಯವಾಗಬೇಕಿದೆ. ಮನನವಾಗಬೇಕಿದೆ.
ಅದಾಗುವುದು ಅಷ್ಟು ಸುಲಭವೇ? ಗೊತ್ತಿಲ್ಲ.

ಶಿವಕುಮಾರ್ ಉಪ್ಪಿನ, ಪತ್ರಕರ್ತ-ಬರಹಗಾರ

Related Articles

Leave a Reply

Your email address will not be published. Required fields are marked *

Back to top button