ಪ್ರಮುಖ ಸುದ್ದಿ
ಭಾರತ – ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಬ್ರೇಕ್!
ನವದೆಹಲಿ : ಭಾರತ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ ವಿಶೇಷ ಅಧಿವೇಶನ ಕರೆದಿತ್ತು. ಅಧಿವೇಶನದಲ್ಲಿ ಜಮ್ಮು-ಕಾಶ್ಮೀರದ ಬಗ್ಗೆ ಭಾರತದ ನಡೆ ಬಗ್ಗೆ ಚರ್ಚಿಸಲಾಗಿದೆ. ಅಂತೆಯೇ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ನ್ಯಾಶನಲ್ ಸೆಕ್ಯುರಿಟಿ ಕಮಿಟಿ ಮೀಟಿಂಗ್ನಲ್ಲಿ ಭಾರತದೊಂದಿಗೆ ಸಂಬಂಧ ಕಡಿತಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ದ್ವಿಪಕ್ಷೀಯ ಸಂಬಂಧವನ್ನು ಕಡಿತಗೊಳಿಸಿರುವ ಪಾಕಿಸ್ತಾನ, ವ್ಯಾಪಾರ ವಹಿವಾಟನ್ನೂ ಬಂದ್ ಮಾಡಿದೆ. ವಾಘಾ ಗಡಿಯನ್ನೂ ಬಂದ್ ಮಾಡಲು ನಿರ್ಧರಿಸಿರುವ ಪಾಕಿಸ್ತಾನ, ಆಗಸ್ಟ್ 14 ರಂದು ಪಾಕಿಸ್ತಾನದಲ್ಲಿ ಬ್ಲ್ಯಾಕ್ ಡೇ ಆಚರಿಸಲು ನಿರ್ಧರಿಸಿದೆ ಎನ್ನಲಾಗಿದೆ. ಅಲ್ಲದೆ ಭಾರತದಲ್ಲಿರುವ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಂಡು ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿಯನ್ನೂ ಉಚ್ಚಾಟಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.