ಕಥೆ

ಓಶೋ ಅವರನ್ನೆ ದಿಗ್ಭ್ರಮೆಗೊಳಿಸಿದ ಆ ಪ್ರಶ್ನೆ ಯಾವುದು.? ಈ ಅದ್ಭುತ ಸಂದೇಶ ಓದಿ

ಚರಿತ್ರೆ ಪುರಾಣಗಳಲ್ಲಿ ನಾವು ಅನೇಕ ಮಹಾನುಭಾವರ ಹೆಸರುಗಳನ್ನು ಕೇಳುತ್ತೇವೆ. ಅವರ ಜೀವನ ಚರಿತ್ರೆಗಳನ್ನು ಓದುತ್ತೇವೆ. ಅವರಿಗೂ ನಮಗೂ ಸಾವಿರಾರು ವರ್ಷಗಳ ಸಮಯದ ಅಂತರ ಇರುವುದರಿಂದ ಅವರ ಬದುಕಿನ ವಿವರಗಳು ನಮಗೆ ಗೊತ್ತಿಲ್ಲದಿರಬಹುದು. ಅವುಗಳು ವೈವಿಧ್ಯಮಯವಾಗಿರಬಹುದು. ಆದರೆ ವಿರೋಧಾಭಾಸಗಳಿಂದ ತುಂಬಿರಬಹುದು!
ಅವುಗಳ ಬಗ್ಗೆ ಚರ್ಚೆ ನಡೆಸುವುದರಿಂದ ಶಾಖ ಉಂಟಾಗಬಹುದೇ ಹೊರತು ಬೆಳಕಂತೂ ಉಂಟಾಗುವುದಿಲ್ಲ ಅಲ್ಲವೇ? ಅಂತಹದ್ದೊಂದು ಪ್ರಸಂಗವನ್ನು ಓಶೋರವರ ಉಪನ್ಯಾಸದಲ್ಲಿ ಕೇಳಿದ ನೆನಪು.

ಆ ಪ್ರಸಂಗ ಇಲ್ಲಿದೆ. ಪೂಜ್ಯರಾದ ಓಶೋರವರನ್ನು ಒಮ್ಮೆ ಹಿರಿಯ ವಿದ್ವಾಂಸರೊಬ್ಬರು ಭೇಟಿಯಾಗಿದ್ದರಂತೆ. ಅವರು ಬಹಳ ಓದಿಕೊಂಡಿದ್ದವರೂ, ಮೇಧಾವಿಗಳೂ ಆಗಿದ್ದರು. ಅವರು ಮಹತ್ತರವೆಂದು ಭಾವಿಸಿದ್ದ ಸಂಶೋಧನೆಯಲ್ಲಿ ತಮ್ಮ ಬದುಕನ್ನೆಲ್ಲಾ ಸವೆಸಿದ್ದರು.

ಅವರ ಸಂಶೋಧನೆಯ ವಿಷಯವೂ ಕುತೂಹಲಕಾರಿಯಾದದ್ದೇ! ಅದೇನೆಂದರೆ ಭಾಗವತ, ಮಹಾಭಾರತ ಪುರಾಣಗಳಲ್ಲಿ ಕಂಡು ಬರುವ ಶ್ರೀಕೃಷ್ಣ ಪರಮಾತ್ಮ ಎನ್ನುವ ವ್ಯಕ್ತಿ ನಿಜವಾಗಿಯೂ ಇದ್ದನಾ ಅಥವಾ ಕವಿಗಳ ಕಲ್ಪನೆಯ ಮೂಸೆಯಲ್ಲಿ ಮೂಡಿ ಬಂದವನಾ? ವಾಸ್ತವದಲ್ಲಿ ಅಂತಹ ವ್ಯಕ್ತಿ ಇದ್ದನೆಂಬುದಕ್ಕೆ ಸಾಕ್ಷ್ಯಾಧಾರಗಳು, ಪುರಾವೆಗಳೂ ಇವೆಯೇ? ಆತ ಯಾವ ಕಾಲದಲ್ಲಿ ಇದ್ದ? ಎಲ್ಲೆಲ್ಲಿ ಇದ್ದ? ಆತ ಆ ಪವಾಡಗಳನ್ನೆಲ್ಲಾ ಮಾಡಿದ್ದನೇ? ಆತ ಭಗವದ್ಗೀತೆಯನ್ನು ಬೋಧಿಸಿದ್ದು ನಿಜವೇ? ಅಥವಾ ಅದೂ ಕವಿಯ ಕಲ್ಪನೆಯೇ? ಇತ್ಯಾದಿಗಳು ಅವರ ಸಂಶೋಧನೆಯ ವಿಷಯವಾಗಿತ್ತು.

ಅವರು ಸಾವಿರಾರು ಶಾಸನಗಳನ್ನೂ ಪರಿಶೀಲಿಸಿದ್ದರು. ದೊರೆತಿದ್ದ ದಾಖಲೆಗಳನ್ನೆಲ್ಲಾ ಅಧ್ಯಯನ ಮಾಡಿದ್ದರು. ಅವರು ಓಶೋರವರಿಗೆ ತಮ್ಮ ಸಂಶೋಧನೆಯ ಬಗ್ಗೆ ವಿಷದವಾಗಿ ವಿವರಿಸಿದರು. ಆದರೆ ಇವೆಲ್ಲದರ ನಂತರವೂ ಒಂದು ಖಚಿತವಾದ ನಿರ್ಧಾರಕ್ಕೆ ಬರಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ವಿಷಾದಭರಿತ ಧ್ವನಿಯಲ್ಲಿ ಕೊರಗಿದರು. ಓಶೋರವರು ‘ನಿಮಗೀಗ ಅರವತ್ತು ವರ್ಷ ವಯಸ್ಸು! ನಿಮ್ಮ ಆಯಸ್ಸಿನ ಬಹುಪಾಲನ್ನು ಕೃಷ್ಣನ ಬಗೆಗಿನ ಸಂಶೋಧನೆಯಲ್ಲಿ ಕಳೆದಿದ್ದೀರೆಂದು ಹೇಳುತ್ತಿದ್ದೀರಿ. ಕೃಷ್ಣ ನಿಜವಾಗಿಯೂ ಇದ್ದನೆಂಬ ನಿರ್ಧಾರಕ್ಕೆ ಬಂದರೆ ಮುಂದೇನು ಮಾಡುತ್ತೀರಿ? ಅದರಿಂದ ನಿಮ್ಮ ಬದುಕು ಬದಲಾಗುತ್ತದೆಯೇ? ಅಥವಾ ಜಗತ್ತು ಬದಲಾಗುತ್ತದೆಯೇ?’ ಎಂದು ಕೇಳಿದಾಗ ವಿದ್ವಾಂಸರು ದಿಗ್ಭ್ರಮೆಗೊಂಡು ‘ಹೌದಲ್ಲವೇ? ಇಂತಹ ಪ್ರಶ್ನೆ ನನಗೆ ಇದುವರೆಗೂ ಹೊಳೆದಿರಲಿಲ್ಲ. ಯಾರೂ ನನಗೆ ಕೇಳಿರಲಿಲ್ಲ.
ಎಲ್ಲರೂ ನಿಮ್ಮದು ಅದ್ಭುತವಾದ ಸಂಶೋಧನೆ! ನಿಮ್ಮ ಬದುಕು ಸಾರ್ಥಕವಾಗುತ್ತಿದೆ ಎನ್ನುತ್ತಿದ್ದರು’ ಎಂದರು.

ಓಶೋರವರು ‘ಕೃಷ್ಣನ ಬದುಕಿನ ಚರಿತ್ರಾರ್ಹತೆಯ ಬಗ್ಗೆ ನಿರ್ಧಾರ ಮಾಡುವುದರಿಂದ ನಿಮ್ಮ ಬದುಕು ಹೇಗೆ ಸಾರ್ಥಕವಾಗುತ್ತದೆ? ಜಗತ್ತು ಹೇಗೆ ಬದಲಾಗುತ್ತದೆ? ಅದರ ಬದಲು ಆತನ ಬೋಧನೆಗಳು ನಿಮಗೆ ಅರ್ಥಪೂರ್ಣ ಎನಿಸಿದರೆ ಅವನ್ನು ಆಚರಣೆಗೆ ತನ್ನಿ. ಅದರಂತೆ ಬದುಕಲು ಪ್ರಯತ್ನಿಸಿ. ಇತರರೂ ನಿಮ್ಮನ್ನು ಅನುಸರಿಸಬಹುದು! ಅದರ ಬದಲು ಆಗಿಹೋದ ಆತನ ಅಸ್ತಿತ್ವದ ಬಗ್ಗೆ ನಿಮ್ಮ ಈಗಿನ ಬದುಕನ್ನು ಹಾಳು ಮಾಡಿಕೊಳ್ಳಬೇಡಿ. ಯೋಚಿಸಿನೋಡಿ. ಬದುಕನ್ನು ಸಾರ್ಥಕ ಮಾಡಿಕೊಳ್ಳಿ’ ಎಂದು ಹೇಳಿದಾಗ. ವಿದ್ವಾಂಸರು ನಿರುತ್ತರಾದರಂತೆ!

ಇಂದು ಓಶೋ ಮಹಾನುಭಾವರೂ ಇಲ್ಲ! ಆ ವಿದ್ವಾಂಸರೂ ಇರಲಿಕ್ಕಿಲ್ಲ! ಆದರೆ ಅವರ ಅರ್ಥಪೂರ್ಣ ಮಾತುಗಳು ಇವೆ. ಅವರ ದಿವ್ಯಸ್ಮರಣೆಗೆ ಪ್ರಣಾಮಗಳು. ಆದರೆ ಇಂದೂ ಅಂಥ ಸಂಶೋಧಕ ವಿದ್ವಾಂಸರು ಇದ್ದಾರಲ್ಲವೇ? ಇಂದೂ ಬುದ್ಧ, ಮಹಾವೀರ, ಶಂಕರರಿಂದ ಹಿಡಿದು ಬಹುಮಾನ್ಯರಾದ ಶರಣರ, ದಾಸರ ಬದುಕಿನ, ಜಾತಿಯ, ಅವರು ಮಾಡಿರಬಹುದಾದ ಪವಾಡಸದೃಶ ಘಟನೆಗಳ ಬಗ್ಗೆ ಸಿದ್ಧಾಂತಗಳನ್ನು ಮಂಡಿಸುವವರು ನೂರಾರು ಜನರಿರಬಹುದು! ವಿರೋಧಿಸುವವರೂ ನೂರಾರು ಜನರಿರಬಹುದು! ಅವರ ಬದುಕಿನ ವಿವರಗಳ ಬಗ್ಗೆ ಚರ್ಚಿಸುವ ಬದಲು ಅವರ ಬೋಧನೆಗಳನ್ನು ತಿಳಿದುಕೊಳ್ಳಬೇಕು. ಅವುಗಳು ಅರ್ಥಪೂರ್ಣ ಅನಿಸುವುದಾದರೆ, ಅವುಗಳನ್ನು ಅರ್ಥ ಮಾಡಿಕೊಂಡು ಆಚರಣೆಗೆ ತರಬಹುದು! ಅವುಗಳ ಬಗ್ಗೆ ಚರ್ಚೆ ಅನಗತ್ಯ! ಆಚರಣೆ ಅಗತ್ಯ! ನೀವೇನೆನ್ನುತ್ತೀರಿ?

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button