ಪಕ್ಷದ ಆಧಾರ ಸ್ಥಂಭವಾಗಿದ್ದ ಪಟೇಲ್ ಇಲ್ಲದ ಕಾಂಗ್ರೆಸ್ ಗೆ ಅಪಾರ ನಷ್ಟ- ಖರ್ಗೆ
ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ ನಿಧನಕ್ಕೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ಶೋಕ
ಕಲಬುರ್ಗಿಃ ಹಿರಿಯ ನಾಯಕ ಹಾಗೂ ರಾಜ್ಯ ಸಭಾ ಸದಸ್ಯ ಅಹಮದ್ ಪಟೇಲ್ ಅವರ ಅಕಾಲಿಕ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ, ಕಾರ್ಯಕರ್ತರಿಗೆ ತುಂಬಲಾರದ ನಷ್ಟವಾಗಿದೆ ಎಂದು ರಾಜ್ಯಸಭಾ ಸದಸ್ಯ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ತಮ್ಮ ಶೋಕ ಸಂದೇಶದಲ್ಲಿ ಶ್ರೀಯುತ ಅಹಮದ್ ಪಟೇಲ್ ಅವರ ಪಕ್ಷ ನಿಷ್ಠೆ ಕೊಂಡಾಡಿರುವ ಅವರು, ಸಂಕಷ್ಟದ ಸಮಯದಲ್ಲಿ ಗಟ್ಟಿಯಾಗಿ ನಿಂತು ಪಕ್ಷವನ್ನು ಮುನ್ನಡೆಸುತ್ತಿದ್ದ ಒಬ್ಬ ಸಮರ್ಥ ನಾಯಕನನ್ನು ಪಕ್ಷ ಹಾಗೂ ಅಸಂಖ್ಯಾತ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಳೆದುಕೊಂಡಂತಾಗಿದೆ ಎಂದಿದ್ದಾರೆ.
ಅಹಮದ್ ಪಟೇಲ್ ಅವರೊಂದಿಗಿನ ಸುಮಾರು ನಾಲ್ಕು ದಶಕಗಳ ತಮ್ಮ ಒಡನಾಟವನ್ನು ನೆನೆಪಿಸಿಕೊಂಡು ಅವರು, ಕಾಂಗ್ರೆಸ್ ಪಕ್ಷದ ಆಧಾರ ಸ್ಥಂಬಗಳಲ್ಲಿ ಒಬ್ಬರಾಗಿದ್ದ ಪಟೇಲ್ ಅವರ ಅಕಾಲಿಕ ನಿಧನ ಪಕ್ಷಕ್ಕೆ ಭರಿಸಲಾಗದ ನಷ್ಠವಾಗಿದೆ ಎಂದಿದ್ದಾರೆ.
ಪಕ್ಷದ ಕಾರ್ಯಕರ್ತರ ಸಲುವಾಗಿ ದಿನದ ಬಹುತೇಕ ಸಮಯ ಮೀಸಲಿಡುತ್ತಿದ್ದ, ಅವರು ಪಕ್ಷದ ತತ್ವ ಹಾಗೂ ಸಿದ್ಧಾಂತದ ಪರಿಪಾಲಕರಾಗಿದ್ದರು.
ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ಭಗವಂತ ಕರುಣಿಸಲಿ ಎಂದು ತಮ್ಮ ಶೋಕ ಸಂದೇಶದಲ್ಲಿ ಅವರು ತಿಳಿಸಿದ್ದಾರೆ.