ಪ್ರಮುಖ ಸುದ್ದಿ
ಭೀಮಾತೀರದ ಜನರೇ ಎಚ್ಚರಿಕೆ ಎಚ್ಚರಿಕೆ…!
‘ಮಹಾ’ಪ್ರವಾಹ ಭೀಮಾತೀರ ಸೇರುತಿದೆ ಹುಷಾರ್!
ಕಲಬುರಗಿ: ಮಹಾರಾಷ್ಟ್ರದಲ್ಲಿ ಈಗಾಗಲೇ ಭಾರೀ ಮಳೆಯಾಗಿದೆ. ಇಡೀ ರಾಜ್ಯ ಮಳೆ ಪ್ರವಾಹದಿಂದ ತಲ್ಲಣಗೊಂಡಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮತ್ತೊಂದು ಕಡೆ ಮಹಾರಾಷ್ಟ್ರದಲ್ಲಿನ ಜಲಾಶಯಗಳು ಭರ್ತಿಯಾಗಿವೆ. ಉಜ್ಜೈನಿ ಜಲಾಶಯ ತುಂಬಿ ತುಳುಕುತ್ತಿದೆ. ಪರಿಣಾಮ ಐವತ್ತೈದು ಸಾವಿರ ಕ್ಯೂಸಕ್ಸ್ ನೀರನ್ನು ಹೊರ ಬಿಡಲಾಗಿದೆ. ಉಜ್ಜೈನಿ ಜಲಾಶಯದಿಂದ ಹೊರಬಿಟ್ಟ ನೀರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ಸೇರಿದೆ. ಸೊನ್ನ ಬ್ಯಾರೇಜ್ ಕೂಡ ಈಗ ಭರ್ತಿಯಾಗಿದೆ. ಪರಿಣಾಮ ಸೊನ್ನ ಬ್ಯಾರೇಜಿನಿಂದ ಭೀಮಾನದಿಗೆ ಐದು ಸಾವಿರ ಕ್ಯೂಸಕ್ಸ್ ನೀರು ಬಿಡುಗಡೆ ಮಾಡಲಾಗಿದೆ.
ಪರಿಣಾಮ ಭೀಮಾನದಿಯಲ್ಲಿ ಸೆಳವು ಹೆಚ್ಚಾಗಲಿದೆ. ಹೀಗಾಗಿ, ಅಫಜಲಪುರ, ಜೇವರ್ಗಿ ತಾಲೂಕಿನ ಭೀಮಾ ನದಿ ತೀರದ ಮಂದಿ ಎಚ್ಚರಿಕೆ ವಹಿಸಬೇಕು. ನದಿಯ ಸಮೀಪಕ್ಕೆ ಯಾರೂ ಹೋಗಬಾರದು. ನದಿ ಸಮೀಪ ವಾಸವಾಗಿರುವವರಂತೂ ಆದಷ್ಟು ಬೇಗ ಜಾಗ ಖಾಲಿ ಮಾಡಿ ದೂರದ ಪ್ರದೇಶದಲ್ಲಿ ನೆಲೆಸಬೇಕು ಎಂದು ಕಲಬುರಗಿ ನೀರಾವರಿ ವಿಭಾಗದ ಮುಖ್ಯ ಅಭಿಯಂತರ ಜಗನ್ನಾಥ ಹಲಂ ಅವರು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ನೀರು ಭೀಮಾ ನದಿ ಸೇರಲಿದ್ದು ನದಿ ತೀರದ ಜನ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.