ಟಿಪ್ಪು ಸುಲ್ತಾನ್ ಬಗ್ಗೆ ಹಾಡಿ ಹೊಗಳಿದ ರಾಷ್ಟ್ರಪತಿ!
ವಿಧಾನಸೌಧ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಷಣ
ಬೆಂಗಳೂರು : ವಿಧಾನಸೌಧದ ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು ಟಿಪ್ಪು ಸುಲ್ತಾನ್ ಹೆಸರು ಪ್ರಸ್ತಾಪಿಸಿ ಗುಣಗಾನ ಮಾಡಿದರು. ಟಿಪ್ಪು ಉತ್ತಮ ಆಡಳಿತಗಾರನಾಗಿದ್ದು ಪ್ರಾಣ ಪಣಕ್ಕಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ವೀರ ಮರಣವನ್ನಪ್ಪಿದರು ಎಂದರು.
ಯುದ್ಧಭೂಮಿಯಲ್ಲಿ ಮೊದಲ ಬಾರಿಗೆ ಮೈಸೂರು ರಾಕೆಟ್ ಬಳಸಿದ ಅಪ್ರತಿಮ ನಾಯಕ ಟಿಪ್ಪು ಸುಲ್ತಾನ್. ಬಳಿಕ ಟಿಪ್ಪು ಬಳಸಿದ್ದ ತಂತ್ರಗ್ನಾನವನ್ನೇ ಯುರೋಪಿಯನ್ನರು ಅಳವಡಿಸಿಕೊಂಡರು ಎಂದು ರಾಷ್ಟ್ರಪತಿ ಹೇಳಿದರು. ರಾಷ್ಟ್ರಪತಿಗಳು ಟಿಪ್ಪು ಹೆಸರು ಹೇಳುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಮೇಜುಕುಟ್ಟಿ ಸ್ವಾಗತಿಸಿದರು. ಹರ್ಷೋದ್ಘಾರದೊಂದಿಗೆ ಸಂಭ್ರಮಿಸಿದರು.
ಆದರೆ, ಬಿಜೆಪಿ ಶಾಸಕರು ಮಾತ್ರ ರಾಷ್ಟ್ರಪತಿಗಳ ಭಾಷಣ ಕೇಳಿ ಅವಕ್ಕಾದರು. ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ವಿವಾದ ಭುಗಿಲೆದ್ದಿದ್ದು ಬಿಜೆಪಿ ಟಿಪ್ಪು ಜಯಂತಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಇದೇ ಸಂಧರ್ಭದಲ್ಲಿ ರಾಷ್ಟ್ರಪತಿಗಳು ಟಿಪ್ಪು ಬಗ್ಗೆ ಹೊಗಳಿದ್ದು ಬಿಜೆಪಿ ಶಾಸಕರ ಮುಖ ಕಳೆಗುಂದುವಂತೆ ಮಾಡಿದೆ.
ಇನ್ನು ರಾಜ್ಯ ಸರ್ಕಾರ ಟಿಪ್ಪು ಬಗ್ಗೆ ಹೊಗಳಿಕೆಯ ಸ್ಕ್ರಿಪ್ಟ್ ಬರೆದುಕೊಡುವ ಮೂಲಕ ರಾಷ್ಟ್ರಪತಿಗಳ ಮೂಲಕವೇ ಟಿಪ್ಪು ಬಗ್ಗೆ ಒಳ್ಳೆಯ ಅಭಿಪ್ರಾಯ ಹೊರಮೂಡಿಸುವ ಮೂಲಕ ರಾಜಕಾರಣ ಮಾಡಿದೆಯಾ ಅಥವಾ ರಾಷ್ಟ್ರಪತಿಗಳ ಸಚಿವಾಲಯವೇ ಈ ಭಾಷಣ ಸಿದ್ಧಪಡಿಸಿತ್ತೆ ಎಂಬುದು ಈಗ ಚರ್ಚೆಗೀಡಾಗಿದೆ.