ಶಾಸಕರ ಜೇಬಿಗೆ ಕನ್ನ ಹಾಕಿದ ಖದೀಮರು ಯಾರು?
ಬಿ ಎಸ್ ವೈ ನೇತೃತ್ವದಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಕಳ್ಳರ ‘ಕೈ’ಚಳಕ!
ಚಿಕ್ಕೋಡಿ: ಪಟ್ಟಣದ ಕಿವಡ ಮೈದಾನದಲ್ಲಿ ಇಂದು ಬಿಜೆಪಿಯಿಂದ ಪರಿವರ್ತನಾ ಯಾತ್ರೆ ಆಯೋಜಿಸಲಾಗಿತ್ತು . ಪರಿವರ್ತನಾ ಯಾತ್ರೆಗೆ ಮಾಜಿ ಮುಖ್ಯಮಂತ್ರಿ , ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ರಾಯಭಾಗ ಮತಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಕಾರ್ಯಕ್ರಮದ ವೇದಿಕೆಯಲ್ಲಿದ್ದರು. ಬಿ.ಎಸ್.ಯಡಿಯೂರಪ್ಪ ಅವರ ಭಾಷಣ ಮುಗಿಯುತ್ತಿದ್ದಂತೆ ಅವರೊಂದಿಗೆ ಎಲ್ಲಾ ನಾಯಕರು ವೇದಿಕೆಯಿಂದ ಕೆಳಗಿಳಿದರು. ಆದರೆ, ಅದೇ ಸಮಯವನ್ನು ಕಾದು ಕುಳಿತಿದ್ದ ಖದೀಮರು ಗದ್ದಲದ ಮದ್ಯೆ ಶಾಸಕ ದುರ್ಯೋಧನ ಐಹೊಳೆ ಅವರ ಜೇಬಿಗೆ ಕನ್ನ ಹಾಕಿದ್ದಾರೆ.
ಶಾಸಕ ದುರ್ಯೋಧನ ಐಹೊಳೆ ಅವರ ಜೇಬಿನಲ್ಲಿದ್ದ ಸುಮಾರು 80ಸಾವಿರ ರೂಪಾಯಿ ನಗದು ಕದ್ದು ಎಸ್ಕೇಪ್ ಆಗಿದ್ದಾರೆ. ಆ ಮೂಲಕ ಖತರ್ನಾಕ್ ಕಳ್ಳರು ಬಿಜೆಪಿಯ ಯಾತ್ರೆಯಲ್ಲಿ ತಮ್ಮ ಕೈಚಳಕ ತೋರಿದ್ದಾರೆ. ಶಾಸಕರ ಜೇಬಿಗೆ ಕೈ ಹಾಕಿದ ಖದೀಮರ ಪತ್ತೆಗಾಗಿ ಚಿಕ್ಕೋಡಿ ಠಾಣೆಯ ಪೊಲೀಸರು ಜಾಲ ಬೀಸಿದ್ದಾರೆ.