7 ಪಲ್ಲಕ್ಕಿ ಉತ್ಸವಗಳ ಸಂಗಮ ಸೈದಾಪುರ
ಸೈದಾಪುರ ಮಾಳಿಂಗರಾಯ ಜಾತ್ರಾ ಮಹೋತ್ಸವ
ಶಹಾಪುರಃ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸೈದಾಪುರ ಗ್ರಾಮದ ಮಾಳಿಂಗರಾಯ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ, ಸೈದಾಪುರ ಗ್ರಾಮ ಸಮೀಪದ ಮಾಳಿಂಗರಾಯನ ಕಟ್ಟೆಯಲ್ಲಿ ಏಳು ಗ್ರಾಮಗಳ ವಿವಿಧ ಪಲ್ಲಕ್ಕಿಗಳು ಸಂಗಮ ಕಂಡು ಭಕ್ತಾಧಿಗಳು ದರ್ಶನ ಪಡೆದರು.
ಪ್ರತಿ ವರ್ಷದಂತೆ ಸೈದಾಪುರ ಮಾಳಿಂಗರಾಯ ದೇವರ ಜಾತ್ರೆ ಅಂಗವಾಗಿ ಇಲ್ಲಿನ ಕಟ್ಟೆಯಲ್ಲಿ ವಿವಿಧ 7 ಗ್ರಾಮಗಳ ಬೇರೆ ಬೇರೆ ದೇವರ ಪಲ್ಲಕ್ಕಿಗಳು ಸೇರಿದ್ದವು. ಇವುಗಳ ದರ್ಶನ ಪಡೆಯಲು ಜನ ಜಾತ್ರೆಯೇ ನೆರದಿತ್ತು.
ಅಲ್ಲದೆ ಮುಖ್ಯವಾಗಿ ಬೀರಪ್ಪ ದೇವರ, ಹಣಮಂತ ದೇವರು ಮತ್ತು ಮಾಳಿಂಗರಾಯ ಸೇರಿದಂತೆ ಕುರುಬ ಸಮುದಾಯದ ದೇವರುಗಳು ಇಲ್ಲಿ ಸೇರುತ್ತವೆ. ಇದು ಕಳೆದ ಐದಾರು ವರ್ಷದಿಂದ ನಡೆದುಕೊಂಡು ಬರುವ ಜಾತ್ರೆಯಾಗಿದ್ದು, ತಾಲೂಕಿನ ದೊಡ್ಡ ಸಗರ, ಶಟಿಕೇರಿ, ನಗನೂರ, ಹಳಿಸಗರ, ಮಹಲ್ ರೋಜಾ, ಕಕ್ಕಸಗೇರಾ ಮತ್ತು ಸೈದಾಪುರ ಗ್ರಾಮಗಳ ಒಟ್ಟು 7 ಪಲ್ಲಕ್ಕಿಗಳು ವಿವಿಧಡೆ ಗಂಗಾ ಸ್ನಾನ ಮುಗಿಸಿಕೊಂಡು ಈ ಕ್ಷೇತ್ರದಲ್ಲಿ ಒಂದಡೆ ಸೇರುತ್ತವೆ.
ಭಕ್ತಾಧಿಗಳು ಸಾಲು ಪಲ್ಲಕ್ಕಿಗಳ ದರ್ಶನ ಪಡೆಯುತ್ತಾರೆ. ಇದೇ ಸಂದರ್ಭದಲ್ಲಿ ನೂರಾರು ಭಕ್ತರು ದೀಡ ನಮಸ್ಕಾರ ಹಾಕುವ ಮೂಲಕ ತಮ್ಮ ಹರಕೆಯನ್ನು ತೀರಿಸುತ್ತಾರೆ. ಅದರಂತೆ ಮಂಗಳವಾರ ನೂರಾರು ಮಕ್ಕಳು ಹಿರಿಯರು ಹರಕೆ ತೀರಿಸಿದರು.
ಮಾಳಿಂಗರಾಯನ ಜಾತ್ರೆ ವಿಶೇಷತೆ ಪಡೆದುಕೊಳ್ಳುತ್ತಿದೆ. ಕುರುಬ ಸಮುದಾಯ ಇಂದು ಒಂದಡೆ ಸೇರುವ ಮೂಲಕ ತಮ್ಮ ಇಷ್ಟದ ದೇವರ ಪೂಜೆ ದರ್ಶನ ಭಾಗ್ಯ ಪಡೆಯುತ್ತಾರೆ. ಅಲ್ಲದೆ ತಮ್ಮ ಹರಕೆಗಳನ್ನು ತೀರಿಸುತ್ತಾರೆ. ಇದೇ ಸಂದರ್ಭದಲ್ಲಿ ಧರ್ಮಸಭೆಯು ಜರುಗಿತು.
ಸಮಾಜದ ಮುಖಂಡರು, ಸ್ಥಳೀಯ ಶಾಸಕರು ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ಮತ್ತು ಜಾತ್ರ ಮಹೋತ್ಸವ ಅಂಗವಾಗಿ ಕುಸ್ತಿ ಪಂದ್ಯಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಳಿಂಗರಾಯ ದೇವಸ್ಥಾನದ ಪ್ರಮುಖರು ತಿಳಿಸಿದ್ದಾರೆ. ಜಾತ್ರೆಗೆ ಆಗಮಿಸಿದ ಭಕ್ತರೆಲ್ಲರಿಗೂ ಪ್ರಸಾದ ವ್ಯವಸ್ಥೆಯೂ ಕಲ್ಪಿಸಲಾಗಿತ್ತು.