ಪುಂಡಾನೆ ಸೆರೆ ಹಿಡಿದು ಮರಕ್ಕೆ ಕಟ್ಟಿದ್ದಾರಂತೆ ಅರಣ್ಯ ಸಿಬ್ಬಂದಿ!
ನೆಮ್ಮದಿಯ ನಿಟ್ಟುಸಿರು ಬಿಟ್ಟ ದಾವಣಗೆರೆ, ಚಿತ್ರದುರ್ಗದ ಜನ!
ದಾವಣಗೆರೆ: ಕಳೆದ ಒಂದು ವಾರದಿಂದ ಮೈಸೂರಿನ ದಸರಾ ಆನೆ ಅಭಿಮನ್ಯ ನೇತೃತ್ವದಲ್ಲಿ ನಡೆಯುತ್ತಿದ್ದ ಆಪರೇಷನ್ ಕಾಡಾನೆ ಕೊನೆಗೂ ಯಶಸ್ವಿ ಆಗಿದೆ. ಮೊನ್ನೆಯಷ್ಟೆ ಚನ್ನಗಿರಿ ತಾಲೂಕಿನ ಮನಮಟ್ಟಿ ಅರಣ್ಯದಲ್ಲಿ ದಸರಾ ಆನೆ ಅಭಿಮನ್ಯು ಜೊತೆ ಕಾದಾಡಿದ್ದ ಕಾಡಾನೆಯೊಂದನ್ನು ಸೆರೆ ಹಿಡಿಯಲಾಗಿತ್ತು. ಆದರೆ, ಕಳೆದ ಒಂದು ತಿಂಗಳಿಂದ ಚಿತ್ರದುರ್ಗ, ದಾವಣಗೆರೆ, ತುಮಕೂರು ಹಾಗೂ ಆಂಧ್ರದ ಗಡಿ ಭಾಗದಲ್ಲಿ ಕಾಣಿಸಿಕೊಂಡು ಉಪಟಳ ನೀಡಿದ್ದ ಪುಂಡಾನೆ ಮಾತ್ರ ಎಸ್ಕೇಪ್ ಆಗಿತ್ತು.
ಚಿತ್ರದುರ್ಗದಲ್ಲಿ ಓರ್ವ ರೈತ, ದಾವಣಗೆರೆ ಮತ್ತು ಆಂಧ್ರದ ಗಡಿಯಲ್ಲಿ ತಲಾ ಇಬ್ಬರು ರೈತರನ್ನು ಬಲಿ ಪಡೆದಿತ್ತು. ಒಟ್ಟು ಐವರು ರೈತರನ್ನು ಬಲಿ ಪಡೆದಿದ್ದ ಪುಂಡಾನೆ 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಹೀಗಾಗಿ, ಮೈಸೂರಿನ ದಸರಾ ಆನೆ ಅಭಿಮನ್ಯು ನೇತೃತ್ವದ ಐದು ಆನೆ, ಶಿವಮೊಗ್ಗದ ಸಕ್ರಬೈಲ್ ನ ಎರಡು ಹೆಣ್ಣಾನೆ ಬಳಸಿಕೊಂಡು ಸುಮಾರು 70ಜನ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಕಾಡಾನೆ ಕಾರ್ಯಾಚರಣೆಯಲ್ಲಿ ತೊಡಗಿತ್ತು.
ನಿನ್ನೆ ಸಂಜೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮನಮಟ್ಟಿ ಅರಣ್ಯದಲ್ಲಿ ಪುಂಡಾನೆ ಪತ್ತೆಯಾಗಿದೆ. ಈಗಾಗಲೇ ನಿನ್ನೆ ಸಂಜೆ ವೇಳೆಯೇ ಅರಣ್ಯ ಇಲಾಖೆ ಸಿಬ್ಬಂದಿ ಪುಂಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದ್ದು ಮರವೊಂದಕ್ಕೆ ಆನೆಯನ್ನು ಕಟ್ಟಿ ಹಾಕಿದ್ದಾರೆ. ಇಂದು ಬೆಳಗ್ಗೆಯಿಂದಲೇ ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಪುಂಡಾನೆಯನ್ನು ಕಾಡಿನಿಂದ ಹೊರತರುವ ಕಾರ್ಯಾಚರಣೆ ಆರಂಭಿಸಲಾಗಿದೆ.