ಮಾನವೀಯ ಮೌಲ್ಯದ ಕಿರಣ ಹೇರುಂಡಿ ದೋಸ್ತಿ ಮತ್ತು ಹುಂಬುತನ ನೆನೆದು ಗೆಳೆಯರ ಕಂಬನಿ
ನಾವಿನ್ನು ಚರಬಸವೇಶ್ವರ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಕಾಲವದು. ನನಗೋ ಸೈಕಲ್ ಓಡಿಸುವ ಹುಚ್ಚು. ದಿಗ್ಗಿಬೇಸ್ ರೋಡಿನ ಇಮಾಮ್ ಕಾಶೀಂ ಮಸೀದಿ ಬಳಿಯಿದ್ದ ಅಣ್ಣನ ಸೈಕಲ್ ಅಂಗಡಿಯಲ್ಲೊಂದು ಸೈಕಲ್ ಪಡೆದು ಆ ಕಾಲದ ನಮ್ಮ ದೋಸ್ತಿ ಅಡ್ಡಾ ಆಗಿದ್ದ ಟಂಕಸಾಲೆಗೆ ಹೊರಟಿದ್ದೆ. ಗಾಂಧಿ ಚೌಕಿನ ಮೂಲಕ ಗೆಳೆಯ ಕಿರಣ ಹೇರುಂಡಿ ಮನೆ ದಾಟಿ ರಂಗನಗೌಡನ ಮನೆ ಕಡೆ ಸೈಕಲ್ ತುಳಿಯುತ್ತಿದ್ದೆ. ಚರಂಡಿ ಜಂಪ್ ಮಾಡಲು ಹೋಗಿ ಸೈಕಲ್ ಜೊತೆಗೆ ನಾನೂ ನೆಲಕ್ಕಪ್ಪಳಿಸಿದ್ದೆ. ಮೊಳಕಾಲು, ಮೊಳ ಕೈಗಳಿಗೆಲ್ಲಾ ಗಾಯ ಗಾಯ.
ಮನೆಯಂಗಳದಲ್ಲಿ ಆಟವಾಡುತ್ತಿದ್ದ ಗೆಳೆಯ ಕಿರಣ ಹೇರುಂಡಿ ತಕ್ಷಣಕ್ಕೆ ನನ್ನನ್ನು ನೋಡಿ ಮನೆಯೊಳಕ್ಕೆ ಓಡಿ ಹೋಗಿ ಕೊಬ್ಬರಿ ಎಣ್ಣೆ ಡಬ್ಬಿಯನ್ನು ತಂದು ಗಾಯಕ್ಕೆ ಹಚ್ಚಲು ಮುಂದಾಗಿದ್ದ. ಮನೆಯ ಕಟ್ಟೆಗೆ ಕೂಡಿಸಿ ನೀರು ಬೇಕೇನೋ ಅಂತ ಕೇಳಿದ್ದ. ಅಷ್ಟೊಂದು ಸ್ನೇಹಮಯಿ ಮತ್ತು ಸದಾ ಚಲನಶೀಲ ಗೆಳೆಯ ಕಿರಣ. ಹಾಗಾಗಿಯೇ, ಊರ ತುಂಬ ದೋಸ್ತಿ ಬೆಳೆಸಿಕೊಂಡಿದ್ದ. ತನಗಿಂತ ದೊಡ್ಡ ದೊಡ್ಡವರೊಂದಿಗೂ ಸಲುಗೆಯಿಂದಿರುವಷ್ಟು ಸ್ನೇಹಜೀವಿಯಾಗಿದ್ದ. ಇಡೀ ಶಹಾಪುರ ಎಂಬ ಶಹಾಪುರ ಗುರುತಿಸುವಷ್ಟು ಬೆಳೆದಿದ್ದ ನಮ್ಮ ಕಿರಣ.
ಕೆಲ ದಿನಗಳ ಹಿಂದಷ್ಟೇ ಕಾಲ್ ಮಾಡಿ ನಾನು ಶಹಾಪುರದಿಂದ ಕಿರಣ ಮಾತಾಡ್ತಿದೀನಿ. ನನ್ನ ಸ್ನೇಹಿತರೊಬ್ಬರು ಜಿಲ್ಲಾ ಪಂಚಾಯತಿ ಅದ್ಯಕ್ಷರು. ಚಿತ್ರದುರ್ಗದ ಮೂಲಕ ಬೆಂಗಳೂರಿಗೆ ಹೊರಟಿದ್ದಾರೆ. ಅಲ್ಲಿ ಒಳ್ಳೇ ಹೋಟೆಲ್ ಯಾವುದು ಅಂತ ನೋಡಿ ಊಟಕ್ಕೆ ಹೇಳ್ಬೇಕಲ್ರೀ, ಹೇಳಬೇಕಪ ಅಂತ ಗೊಂದಲದಲ್ಲಿ ಮಾತನಾಡುತ್ತಿದ್ದ. ಕಿರಣ, ನಾನು ಕಣಲೇ ಬಸು ಮುದನೂರ್ ಮಾತಾಡ್ತಿರೋದು. ಅದ್ಯಾಕೆ ಹೇಳ್ಬೇಕಲ್ರೀ, ಹೇಳಪ ಅಂತಿದಿಯಲ್ಲೋ ಅಂದೆ. ಇಲ್ಲಲೇ ಅದು ನೀನೆಲ್ಲಿ ಇರ್ತೀಯೋ ಏನೋ ಅಂತ… ಎಲ್ಲಿದ್ರೂ ಚಡ್ಡಿದೋಸ್ತ್ ಚಡ್ಡಿ ದೋಸ್ತಿಗಳೇ ಅಲ್ವೇನೋ ಅಂದಾಗ ಸರಿದಾರಿಗೆ ಬಂದು ದೋಸ್ತಿ ಭಾಷೆ ಉಪಯೋಗಿಸಿದ್ದ.
ನಿನ್ನೆ ಹೊಸದುರ್ಗದಲ್ಲಿ ಬಿಜೆಪಿ ಸಮಾವೇಶ ನಡೆಯಿತು. 75ರ ಇಳಿವಯಸ್ಸಿನಲ್ಲೂ ಯಡಿಯೂರಪ್ಪನವರು ಉತ್ಸಾಹದಿಂದ ರಾಜ್ಯ ಸುತ್ತುತ್ತಿರುವ ಪರಿ ನನ್ನಲ್ಲಿ ಬೆರಗು ಮೂಡಿಸಿತ್ತು. ಈ ವಯಸ್ಸಿನಲ್ಲೇ ನಾವು ನೂರು ಕಿ.ಮೀಟರ್ ಸುತ್ತಿದರೆ ಸುಸ್ತಾಗ್ತೀವಿ ಅಂತೆಲ್ಲಾ ಗೆಳೆಯರೊಡನೆ ಮಾತನಾಡುತ್ತ ಕುಳಿತಿದ್ದೆ. ದುರ್ಗದ ಮಾಧ್ಯಮ ಗೆಳೆಯರೊಡನೆ ಮಾತನಾಡುತ್ತಲೇ ಫೇಸ್ ಬುಕ್ ರನ್ ಮಾಡುತ್ತಿದ್ದಾಗ ಗೆಳೆಯ ಕಿರಣನ ಫೋಟೋಗಳು ಸೆಳೆದವು. ಆಗಾಗ ಫೇಸ್ ಬುಕ್ , ವಾಟ್ಸಪ್ ಗಳಲ್ಲಿ ಕಿರಣನ ಫೋಟೋ ನೋಡುತ್ತಿದ್ದೆ. ಲೈಕ್ ಮಾಡುತ್ತಿದ್ದೆ. ಹಾಗೆಯೇ ನಿನ್ನೆಯೂ ಅವನ ನಗುಮೊಗದ ಭಾವಚಿತ್ರ ನೋಡಿ ಲೈಕ್ ಮಾಡಲು ಹೋದವನಿಗೆ ಶಾಕ್ ಕಾದಿತ್ತು. ಭಾವಪೂರ್ಣ ಕಣ್ಣೀರು ನೆಲಕ್ಕಪ್ಪಳಿಸಿತ್ತು. bcoz ಕಿರಣ್ ಹೇರುಂಡಿ ಈಸ್ ನೋ ಮೋರ್…
ತಕ್ಷಣಕ್ಕೆ ಗೆಳೆಯ ರಂಗನಗೌಡಗೆ ಕಾಲ್ ಮಾಡಿದರೆ ಗದ್ಗದಿತ ದನಿ. ಇಲ್ಲೇ ಇದೀನಿ ದೋಸ್ತ್, ಕಿರಣ್ ಹೋಗಿಬಿಟ್ಟಿದ್ದಾನೆ ಅಂದ. ಹೇಗೆ ಅಂದೆ, ಎರಡು ಮೂರು ದಿನಗಳ ಹಿಂದಷ್ಟೆ ಎದೆನೋವು ಅಂತ ಹೋದಾಗ ಸೂಕ್ತ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಲು ವೈದ್ಯರು ಸೂಚಿಸಿದ್ದರಂತೆ. ಆದರೆ, ಹುಂಬ ಕಿರಣ ಮಾತ್ರ ವೈದ್ಯರ ಸಲಹೆ ನಿರ್ಲಕ್ಷಿಸಿದ್ದಾನೆ. ಇಂದು ಮತ್ತೆ ಎದೆನೋವು ಕಾಣಿಸಿಕೊಂಡಿದ್ದು ಕಲಬುರಗಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಎಂದು ಹೇಳುವಷ್ಟರಲ್ಲಿ ಇಬ್ಬರ ಕಣ್ಣಲ್ಲೂ ನೀರು…
ನಾವೆಲ್ಲಾ ಕೆಲಸ, ಒತ್ತಡದ ನೆಪದಲ್ಲಿ ಮಾನವೀಯ ಸಂಬಂಧಗಳಿಂದ ವಿಮುಖರಾಗುತ್ತಿರುವುದೇ ಇಂಥ ಅನಾಹುತಗಳಿಗೆ ಕಾರಣವೇನೋ ಎಂದೆನಿಸುತ್ತದೆ. ಗೆಳೆಯರು ಅಂದ ಮೇಲೆ ಮೊದಲು ಕಷ್ಟ ಹಂಚಿಕೊಳ್ಳಬೇಕು. ಅದರಲ್ಲೂ ಈಗಿನ ಕಾಲದಲ್ಲಿ ಮೊದಲು ಪರಸ್ಪರ ಆರೋಗ್ಯದ ಬಗ್ಗೆ ವಿಚಾರಿಸುವುದು, ಹುಂಬುತನ ತೋರಿದವರಿಗೆ ಬೈದು ಚಿಕಿತ್ಸೆಗೆ ಕರೆದೊಯ್ಯುವುದು ನಮ್ಮ ಹೊಣೆ ಆಗಬೇಕು. ಆಗ ಮಾತ್ರ ಸ್ನೇಹ ಜೀವಂತವಾಗಿರಲು ಸಾಧ್ಯ.
ಅಂದು ಸೈಕಲ್ ಮೇಲಿಂದ ಬಿದ್ದವನಿಗೆ ಕೊಬ್ಬರಿ ಎಣ್ಣೆ ಹಚ್ಚಿ ಉಪಚರಿಸಿದ ಗೆಳಯನಿಗೆ ಸಕಾಲಕ್ಕೆ ಆರೋಗ್ಯ ವಿಚಾರಿಸಲು ಆಗಲಿಲ್ಲ. ಅವನನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂಬ ವಿಷಾದ ಕಾಡುತ್ತಲೇ ಇದೆ.
ಅಗಲಿದ ಗೆಳಯನಿಗೆ ಭಾವಪೂರ್ಣ ನಮನ…
-ಬಸವರಾಜ ಮುದನೂರ್
ಬರಹ ಓದಿ ಮನಸ್ಸು ಭಾವುಕತಗೆ ಒಳಗಾಯಿತು
ಬರವಣಿಗೆ ಎದೆಗೆ ತಾಕಿತು…. ಅಗಲಿದ ಹಿರಿಯ ಸಹೋದರನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಬರವಣಿಗೆ ಎದೆಗೆ ತಾಕಿತು…. ಅಗಲಿದ ಹಿರಿಯ ಸಹೋದರನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.