ದರ್ಶನಾಪುರರು ಸಚಿವರಾಗುವುದು ಖಚಿತಃ MP ಬಿ.ವಿ.ನಾಯಕ
ನನ್ನ ಕರ್ತವ್ಯ ಸಮರ್ಪಕವಾಗಿ ನಿಭಾಯಿಸುವೇಃ ದರ್ಶನಾಪುರ
ಯಾದಗಿರಿಃ ಶಹಾಪುರ ಕ್ಷೇತ್ರದ ಜನತೆ ಅಧಿಕ ಮತಗಳಿಂದ ಗೆಲ್ಲಿಸಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ. ವಿಶ್ವಾಸವಿಟ್ಟ ಕಾರ್ಯಕರ್ತರ ಋಣ ತೀರಿಸುವುದು ನನ್ನ ಮೊದಲ ಸಂಕಲ್ಪ, ನಗರ, ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಕರ್ಯ ದೊರಕಬೇಕು. ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು ನಿಸ್ಸಂಕೋಚದಿಂದ ಸಮಸ್ಯೆಗಳ ಬಗ್ಗೆ ತಿಳಿಸಿ ಸಾಧ್ಯವಿರುವ ಎಲ್ಲಾಪ್ರಯತ್ನ ಹಾಕಿ ಸ್ವಚ್ಛ, ಸುಂದರ ತಾಲೂಕವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ಜಿಲ್ಲೆಯ ಶಹಾಪುರ ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಸರ್ವರಿಗೂ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಎಲ್ಲಾ ವರ್ಗದವರಿಗೂ ತಲುಪಬೇಕು.
ಸರ್ಕಾರಿ ಆಡಳಿತ ಯಂತ್ರ ಚುರುಕಾಗಲು ಈಗಾಗಲೇ ತಾಲೂಕಿನಲ್ಲಿ ಅಧಿಕಾರಿಗಳ ಸಭೆಗಳನ್ನು ನಡೆಸಿ ಯೋಜನೆಯ ಅನುಷ್ಠಾನಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದೇನೆ. ಬರುವ ದಿನಗಳಲ್ಲಿ ಸರ್ವರಿಗೂ ನೆಮ್ಮದಿ ತರುವಂಥ ಕಾರ್ಯಗಳು ನಡೆಯಲಿವೆ ಎಂದರು.
ಬ್ಲಾಕ್ ಕಾಂಗ್ರೇಸ್ ಜಿಲ್ಲಾ ಅಧ್ಯಕ್ಷ ಮರಿಗೌಡ ಹುಲ್ಕಲ್ ಮಾತನಾಡಿ, ಮಾಜಿ ಸಿಎಂ ಸಿದ್ರಾಮಯ್ಯನವರ ಸರ್ಕಾರ ಉತ್ತಮ ಯೋಜನೆಗಳನ್ನು ನೀಡಿದ್ದನ್ನು ಜನತೆ ಮರೆತಿಲ್ಲ, ಆಯಾ ಸ್ಥಳೀಯ ಸಮಸ್ಯೆಗಳ ಕಾರಣದಿಂದ ರಾಜ್ಯದಲ್ಲಿ ಕೆಲವು ಕಡೆ ಕಾಂಗ್ರೇಸ್ ಪಕ್ಷಕ್ಕೆ ಹಿನ್ನಡೆಯಾಗಿದೆ.
ಪ್ರಸ್ತುತ ಸಮ್ಮಿಶ್ರ ಸರ್ಕಾರದಲ್ಲಿ ಮಹತ್ವದ ಜವಬ್ದಾರಿ ಕಾಂಗ್ರೆಸ್ ಪಕ್ಷ ನಿರ್ವಹಿಸುತ್ತಿದೆ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ರೈತರ ಬಡವರ ಪರವಾಗಿರದೆ, ಬಂಡವಾಳ ಶಾಹಿಗಳ ಪರವಾಗಿದೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ ಮಾತನಾಡಿ, ಶಾಸಕರು ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ನೆರವೇರಿಸಿ ಮೇಲ್ಪಂಕ್ತಿಯಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡುವಲ್ಲಿ ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದರು.
ವೇದಿಕೆ ಮೇಲೆ ರೈತ ಮುಖಂಡ ಶರಣಪ್ಪ ಸಲಾದಪುರ, ಸಿದ್ಲಿಂಗಪ್ಪ ಆನೆಗುಂದಿ, ಸುರೇಂದ್ರ ಪಾಟೀಲ, ಲಿಂಗನಗೌಡ ಪಾಟೀಲ ಕೆಂಭಾವಿ, ಎ.ಐ.ಸಿ.ಸಿ ವಿಕ್ಷಕ ಪ್ರದೀಪ ಶಾ, ಅಮರೇಶ ಗೌಡ ದರ್ಶನಾಪುರ ಉಪಸ್ಥಿತರಿದ್ದರು.
ರುದ್ರಣ್ಣ ಚಟ್ರಿಕಿ ನಿರೂಪಿಸಿದರು. ಶರಣು ರೈತ ಗೀತೆ ಹಾಡಿದರು.
ಕಾರ್ಯಕ್ರಮದಲ್ಲಿ ಬಸವರಾಜಪ್ಪಗೌಡ ದರ್ಶನಾಪುರ, ಬಸವರಾಜ ಹಿರೇಮಠ, ಕೆಂಚಪ್ಪ ನಗನೂರ, ನೀಲಕಂಠ ಬಡಿಗೇರ, ಗುರುನಾಥರಡ್ಡಿ ಪಾಟೀಲ್ ಹಳಿಸಗರ, ಸಲೀಂ ಸಂಗ್ರಾಂ, ಗುಂಡಪ್ಪ ತುಂಬಗಿ, ಹಣಮಂತ್ರಾಯ ಯಕ್ಷಿಂತಿ, ಶರಣಗೌಡ ಗುಂಡಗುರ್ತಿ, ರತ್ನಾಕರ ಶೆಟ್ಟಿ, ಸಣ್ಣನಿಂಗಣ್ಣ ನಾಯ್ಕೋಡಿ, ಶಿವಕುಮಾರ ಬಿಲ್ಲಂಕೊಂಡಿ, ಬಸವರಾಜ ಹೇರುಂಡಿ, ಮಲ್ಲಿಕಾರ್ಜುನ ಗೌಡ, ಚಂದ್ರಾಯ ಗೌಡ, ಯಮನಪ್ಪ ಚಿಗರಿ, ಸಂಗನಗೌಡ ಪಾಟೀಲ ಸೇರಿದಂತೆ ಇತರರು ಭಾಗವಹಿಸದ್ದರು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಅಭಿಮಾನಿಗಳು ಸೇರಿದ್ದರು.
ದರ್ಶನಾಪುರರು ಸಚಿವರಾಗುವುದು ಖಚಿತ
ಪ್ರಸ್ತುತ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೇಸ್ ಪಕ್ಷದಿಂದ ಇನ್ನೂ 6 ಸಚಿವ ಸ್ಥಾನವನ್ನು ಖಾಲಿಯಿದ್ದು, ರಾಯಚೂರ ಲೋಕಸಭಾ ವ್ಯಾಪ್ತಿಗೆ ಸಂಬಂಧಿಸಿದಂತೆ ಅನುಭವಿ ರಾಜಕಾರಣಿ ಶರಣಬಸಪ್ಪಗೌಡ ದರ್ಶನಾಪುರ ಅವರನ್ನು ಸಚಿವರನ್ನಾಗಿ ಮಾಡಲು ನನ್ನ ಸರ್ವ ಪ್ರಯತ್ನ ಮುಂದುವರೆದಿದ್ದು, ಬರುವ ದಿನಗಳಲ್ಲಿ ಸಚಿವರಾಗುವುದು ನಿಶ್ಚಿತ ಎಂದು ಲೋಕಸಭಾ ಸದಸ್ಯ ಬಿ.ವಿ.ನಾಯಕ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಲೋಕ ಸಭಾ ವ್ಯಾಪ್ತಿಯಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಒಂದು ಸಚಿವ ಸ್ಥಾನ ದೊರಕಲೇಬೇಕಿದ್ದು, ಸ್ವತಃ ಕೇಂದ್ರದ ಎ.ಐ.ಸಿ.ಸಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದು, ದರ್ಶನಾಪುರ ಅವರಿಗೆ ಸಚಿವ ಸ್ಥಾನಸಿಗುವುದು ನಿಶ್ಚಿತವಾಗಿದೆ.
ಕಾರ್ಯಕರ್ತರು ಅಭೂತಪೂರ್ವ ಬೆಂಬಲ ನೀಡಿ ದರ್ಶನಾಪುರ ಅವರನ್ನು ಬಹುಮತದಿಂದ ಗೆಲ್ಲಿಸಿರುವುದು, ಅಭಿವೃದ್ಧಿ ಸೇರಿದಂತೆ ಸರ್ವರ ಹಿತಕ್ಕಾಗಿ ಅವರು ಸಾರ್ಥಕ ಕಾರ್ಯ ಮಾಡಲಿದ್ದಾರೆ ಎಂದರು.
ಸಂಸತ್ ಸದಸ್ಯರ ಅನುದಾನದ ಉಪಯೋಗ ಮಾಡುವಲ್ಲಿ ಅವರ ಪರಿಶ್ರಮ ಮೆಚ್ಚುವಂಥದ್ದಾಗಿದೆ. ಕಾರ್ಯಕರ್ತರು, ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸುವ ಪ್ರಸ್ತುತ ದಿನಗಳಲ್ಲಿ ಕಾರ್ಯಕರ್ತರಿಗೆ ಶಾಸಕರು ಅಭಿನಂದನೆ ಸಮಾರಂಭ ಏರ್ಪಡಿಸಿರುವುದು ಅವರ ರಾಜಕೀಯ ಅನುಭವಕ್ಕೆ ಸಾಕ್ಷಿಯಾಗಿದೆ ಎಂದರು.