ಬಾಲ್ಯದಿಂದಲೇ ಹಸಿರು ಕಾಳಜಿವಹಿಸಿಃ ಶಾಸಕ ನಾಗನಗೌಡ ಕಂದಕೂರ
ಅರಕೇರಿಯಲ್ಲಿ ವನಮಹೊತ್ಸವ ಕಾರ್ಯಕ್ರಮ
ಯಾದಗಿರಿಃ ಬಾಲ್ಯದಿಂದಲೇ ಮಕ್ಕಳಲ್ಲಿ ಹಸಿರು ಬೆಳೆಸುವ ಪೋಷಿಸುವ ಜಾಗೃತಿ ಮತ್ತು ಗಿಡ ನೆಡುವ ಹವ್ಯಾಸ ಬೆಳೆಸಬೇಕು. ಕಾರಣ ಬಾಲ್ಯದಿಂದಲೇ ಈ ಬಗ್ಗೆ ಜಾಗೃತಿ ಮೂಡಿದ್ದಲ್ಲಿ ಅರಣ್ಯ ಸಂಪತ್ತು ಬೆಳೆಯಲು ಹಾಗೂ ಉಳಿಸಲು ಸಾಧ್ಯವಿದೆ ಎಂದು ಶಾಸಕ ನಾಗನಗೌಡ ಕಂದಕೂರ ಅಭಿಪ್ರಾಯಪಟ್ಟರು.
ತಾಲೂಕಿನ ಅರಕೇರಾ(ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಕ ವೃಂದ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರು ಹೊಸ ವರ್ಷ ಆಚರಣೆ, ಜನ್ಮ ದಿನಾಚರಣೆ ಜಾತ್ರಾ ಮಹೋತ್ಸವ ಇತರೆ ವಿಶೇಷ ಸಮಾರಂಭಗಳಲ್ಲಿ ಗಿಡ ನೆಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಅಲ್ಲದೆ ಅರಣ್ಯ ರಕ್ಷಿಸುವ ಸಂಕಲ್ಪ ಮಾಡಬೇಕು. ಮನೆ ಮುಂದಿನ ಅಂಗಳ ಶಾಲಾ ಆವರಣ ಸೇರಿದಂತೆ ರಸ್ತೆ ಬದಿ ಸಸಿ, ಗಿಡಗಳನ್ನು ನೆಡುವ ಕೆಲಸ ಮಾಡಬೇಕು ಎಂದರು.
ಅರಣ್ಯ ಅಧಿಕಾರಿ ಸಂತೋಷ ಕುಮಾರ, ಸಹಾಯಕ ಅರಣ್ಯ ಅಧಿಕಾರಿ ಮುಂದಣ್ಣ ಡಾಂಗೆ, ಮಹೆಂದ್ರ ಪಾಟೀಲ ಸೇರಿದಂತೆ ಮುಖ್ಯ ಗುರು ವಿಶ್ವನಾಥರಡ್ಡಿ, ಶಿಕ್ಷಕರಾದ ಪ್ರಭುಗೌಡ ಅರಿಕೇರಾ, ಭೋಜನಗೌಡ ಯಡಳ್ಳಿ, ಸುಭಾಷಚಂದ್ರ ಹೊನಗೆರಿ ಇತರರಿದ್ದರು.