ಭೂಗತ ಪಾತಕಿ ಹಿಡಿಯಲು ಪೊಲೀಸರು ಅನುಭವಿಸಿದರಾ ’14ವರ್ಷ ವನವಾಸ’!
ಭೂಗತ ಪಾತಕಿ ಚೋಟಾ ರಾಜನ್ ಸಹಚರ ವಿನೀಶ್ ಬಂಧನ
ಮಂಗಳೂರು: ಭೂಗತ ಪಾತಕಿ ಚೋಟಾ ರಾಜನ್ ನ ಸಹಚರ ವಿನೀಶ್ ನನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. 2003ರಲ್ಲಿ ಮುಡಿಪು ಗ್ರಾಮದಲ್ಲಿ ನಡೆದ ಡಬಲ್ ಮರ್ಡರ್ ಕೇಸಿನಲ್ಲಿ ಆರೋಪಿಯಾಗಿದ್ದ ವಿನೀಶ್ ತಲೆಮರೆಸಿಕೊಂಡಿದ್ದ. ಕರಿಕಲ್ಲಿನ ಕೋರೆ ವಿಚಾರವಾಗಿ ವೇಣುಗೋಪಾಲ ಮತ್ತು ಸಂತೋಷ ಎಂಬುವರ ಕೊಲೆ ನಡೆದಿತ್ತು.
ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ವಿನೀಶ್ ನಾಪತ್ತೆಯಾಗಿದ್ದ. ಆರೋಪಿಯ ಬೆನ್ನುಹತ್ತಿದ್ದ ಕೋಣಾಜೆ ಠಾಣೆ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ. ವಿವಿಧ ರೀತಿಯಲ್ಲಿ ಆರೋಪಿ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದರು, ಸಾಕಷ್ಟು ಶ್ರಮವಹಿಸಿದ್ದರು. ಆದರೆ, ಪೊಲೀಸರು ಚಾಪೆ ಕೆಳೆಗೆ ತೂರಿದರೆ ಆರೋಪಿ ರಂಗೋಲಿ ಕೆಳಗೆ ತೂರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ.
ಕರ್ನಾಟಕ, ಆಂದ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ವರ್ಷಾನುಗಟ್ಟಲೆ ಹುಡುಕಿದರೂ ವಿನೀಶ್ ಪೊಲೀಸರಿಗೆ ಸೆರೆ ಸಿಕ್ಕಿರಲಿಲ್ಲ. ಕೊನೆಗೂ ಪೊಲೀಸರೀಗ ಮುಂಬೈ ನಗರದಲ್ಲಿ ವಿನೀಶ್ ನನ್ನು ವಶಕ್ಕೆ ಪಡೆದಿದ್ದಾರೆ. ವಿನೀಶ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ, ಬೆದರಿಕೆ, ಕೊಲೆ, ಕೊಲೆ ಯತ್ನ ಕೇಸ್ ಗಳಿವೆ. ಮಂಗಳೂರು, ಹೈದರಾಬಾದ್, ಮುಂಬೈ ಸೇರಿದಂತೆ ವಿವಿದೆಡೆ ವಿನೀಶ್ ವಿರುದ್ಧ ಕೇಸುಗಳಿದ್ದು ಪೊಲೀಸರಿಗೆ ವಾಂಟೆಡ್ ಆಗಿದ್ದ ಉಡುಪಿ ಮೂಲದ ವಿನೀಶ್ ಕೊನೆಗೂ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.
ಡಬಲ್ ಮರ್ಡರ್ ಕೇಸ್ ನಡೆದು 14ವರ್ಷದ ಬಳಿಕ ಪಾತಕಿ ವಿನೀಶ್ ಸೆರೆಸಿಕ್ಕಿದ್ದಾನೆ. ಪರಿಣಾಮ ಪಾತಕಿಯನ್ನು ಸೆರೆ ಹಿಡಿಯಲು ಪೊಲೀಸರೇ 14ವರ್ಷ ವನವಾಸ ಅನುಭವಿಸಿದಂತಾಯಿತಲ್ಲ ಎಂದು ಜನ ಮಾತನಾಡಿಕೊಳ್ಳುವಂತಾಗಿದೆ.