ಪ್ರಮುಖ ಸುದ್ದಿ

ನಗರ ಆಶ್ರಯ ಸಮಿತಿ ಅಧ್ಯಕ್ಷರಾಗಿ ವಸಂತಕುಮಾರ ಪದಗ್ರಹಣ

ಅರ್ಹರಿಗೆ ಆಶ್ರಯ ನಿವೇಶನ, ಮನೆಗಳು ದೊರೆಯಲಿ-ದರ್ಶನಾಪುರ

ಶಹಾಪುರಃ ನಗರ ಆಶ್ರಯ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ವಸಂತಕುಮಾರ ಸುರಪುರಕರ್ ಶನಿವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರಿಂದ ಆಶ್ರಯ ಕಮಿಟಿ ನೂತನ ಅಧ್ಯಕ್ಷರಾಗಿ ಅಧಿಕಾರ ಪದಗ್ರಹಣ ಮಾಡಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಶಾಸಕ ದರ್ಶನಾಪುರ, ಆಶ್ರಯ ಕಮಿಟಿ ಅಧ್ಯಕ್ಷ ಸ್ಥಾನವನ್ನು ನಾನು ಪ್ರತಿ ಬಾರಿ ಶಾಸಕನಾಗಿ ಚುನಾಯಿತನಾದಾಗಿನಿಂದಲೂ ಬೇರೊಬ್ಬರಿಗೆ ಜವಬ್ದಾರಿಯನ್ನು ನೀಡುತ್ತಾ ಬಂದಿದ್ದೇನೆ. ಆಶ್ರಯ ಕಮಿಟಿ ಅಧ್ಯಕ್ಷ ಸ್ಥಾನದ ಜವಬ್ದಾರಿಯಿಂದ ಮನುಷ್ಯನ ಹೆಸರು ಬರುವದಕ್ಕಿಂತ ಕೆಡುವಂತಹದ್ದೆ ಜಾಸ್ತಿ ಇದೆ. ಹೀಗಾಗಿ ಅಧ್ಯಕ್ಷರಾದವರು ಈ ಹಿಂದಿನ ಹಿರಿಯರ ಸಲಹೆ ಪ್ರಮುಖರ ಸಲಹೆ ಸೂಚನೆ ಮೇರೆಗೆ ಕೆಲಸ ಮಾಡಬೇಕೆಂದು ಕಿವಿ ಮಾತು ಹೇಳಿದರು.

ಅಲ್ಲದೆ ನಗರ ಪ್ರದೇಶದಲ್ಲಿರುವ ಅರ್ಹ ನಿರಾಶ್ರಿತರಿಗೆ ನಿವೇಶನ, ಮನೆ ವಿತರಿಸುವ ಕೆಲಸವಾಗಬೇಕು. ಮೊದಲಿನಿಂದಲೂ ಯಾವೊಬ್ಬ ಶ್ರೀಮಂತರಿಗೆ ಮನೆ ಅಥವಾ ನಿವೇಶನ ಹಂಚುವ ಕೆಲಸವಾಗಿಲ್ಲ. ಶೇ.90 ರಷ್ಟು ನಿವೇಶನ, ಮನೆಗಳನ್ನು ನಿರಾಶ್ರಿತ ಬಡವರಿಗೆ ನೀಡಲಾಗಿದೆ. ಎಲ್ಲೋ ಒಂದೋ ಎರಡು ಲೋಪಗಳು ಕಂಡು ಬಂದರೂ ಅವುಗಳನ್ನು ತೆಗೆದು ಅರ್ಹರಿಗೆ ಮತ್ತೆ ಸೌಲಭ್ಯ ಕಲ್ಪಿಸುವ ಕೆಲಸ ಮಾಡಲಾಗಿದೆ.

ಅದರಂತೆ ಈಗಲೂ ಮತ್ತೆ 800 ಮನೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕೆ ಬೇಕಾದ ನಗರದ ಹೊರವಲಯದಲ್ಲಿ ಪ್ರಸ್ತುತ 20 ಎಕರೆ ಭೂಮಿ ಇದೆ. ಅದನ್ನು ಅಭಿವೃದ್ಧಿ ಪಡಿಸುವ ಕೆಲಸವಾಗಬೇಕಿದೆ. ಸರ್ಕಾರ ಅನುದಾನ ನೀಡಲಿ ಬಿಡಲಿ ನಾನು ಅನುದಾನ ಕಲ್ಪಿಸಲಿದ್ದೇನೆ ಅವುಗಳನ್ನು ಅಭಿವೃದ್ಧಿ ಪಡಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಕೆಲಸ ಮಾಡಬೇಕು ಎಂದು ತಿಳಿಸಿದರು.

ನೂತನ ಅಧ್ಯಕ್ಷ ವಸಂತಕುಮಾರ ಅವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು, ಇದೇ ಸಂದರ್ಭದಲ್ಲಿ ವಸಂತಕುಮಾರ ಸುರಪುರಕರ್ ಶಾಸಕ ದರ್ಶನಾಪುರ ಅವರನ್ನು ದೊಡ್ಡ ಹೂಮಾಲೆ ಹಾಕಿ ಸನ್ಮಾನಿಸಿ ಕೃತಜ್ಞತೆ ವ್ಯಕ್ತಪಡಿಸಿದರು. ಸ್ಥಳೀಯ ಬಿಲ್ವಂಕೊಂಡಿ ಮಠದ ಶ್ರೀಗಳು ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ಮುಖಂಡರಾದ ಶರಣಪ್ಪ ಸಲಾದಪುರ, ನಗರಸಭೆ ಪೌರಾಯುಕ್ತ ಉಸ್ತುವಾರಿ ಅಧಿಕಾರಿ ದೇವಿಂದ್ರ ಹೆಗಡೆ, ಬಸವರಾಜ ಹಿರೇಮಠ, ಕೆಂಚಪ್ಪ ನಗನೂರ, ಶಾಂತಪ್ಪ ಕಟ್ಟಿಮನಿ, ಶರಣಗೌಡ ಕಟ್ಟಿಮನಿ, ಮುಸ್ತಫಾ ದರ್ಬಾನ್ ಸೇರಿದಂತೆ ಇತರರಿದ್ದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ಕಾಂಗ್ರೆಸ್ ಪಕ್ಷದ ಮುಖಂಡರು, ನಗರಸಭೆ ಸದಸ್ಯರು ಸನ್ಮಾನಿಸಿ ಗೌರವಿಸಿದರು.

ಶಹಾಪುರ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರ ಅನುದಾನ ಕಲ್ಪಿಸಿಲ್ಲ- ದರ್ಶನಾಪುರ ಮತ್ತೊಮ್ಮೆ ಉಚ್ಛಾರ

ಶಹಾಪುರಃ ಮೊನ್ನೆ ನಗರಕ್ಕೆ ಅವರ ಪಕ್ಷದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಸತಿ ಸಚಿವ ವಿ.ಸೋಮಣ್ಣ ಶಹಾಪುರ ಮತಕ್ಷೇತ್ರಕ್ಕೆ ಯಾವುದೇ ಅನ್ಯಾಯ ಮಾಡಿಲ್ಲ. ಮಲತಾಯಿ ಧೋರಣೆ ತೋರಿಲ್ಲ. ಎಲ್ಲಾ ಕ್ಷೇತ್ರಗಳಿಗೂ ಸಮಾನವಾಗಿ ಅನುದಾನ ಕಲ್ಪಿಸಲಾಗಿದೆ. ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ ಅದೆಲ್ಲ ಸುಳ್ಳು, ಸೋಮಣ್ಣ ಸುಳ್ಳು ಹೇಳಿದ್ದಾರೆ ಎಂದು ಶಾಸಕ ದರ್ಶನಾಪುರ ಪತ್ರಕರ್ತರೇ ಕೇಳಿ ಎಂದು ಹೇಳುತ್ತಾ ಈ ವಿಷಯ ತಿಳಿಸಿದರು.

ಮೊನ್ನೆ ನೀವೆಲ್ಲ ಬರೆದಿದ್ದೀರಿ, ವಿ.ಸೋಮಣ್ಣ ಮಾತನಾಡಿರುವದನ್ನು, ಆದರೆ ಅವರು ಸುಳ್ಳು ಹೇಳಿದ್ದಾರೆ, ಪಕ್ಕದ ಬಿಜೆಪಿ ಶಾಸಕರಿರುವ ಯಾದಗಿರಿ, ಸುರಪುರ, ದೇವದುರ್ಗ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ಕಲ್ಪಿಸಿದ್ದಾರೆ ಶಹಾಪುರಕ್ಕೆ ಯಾವುದೇ ಅನುದಾನ ನೀಡಿಲ್ಲ. ವಸತಿ ಖಾತೆಯ ಅವರೇ ಯಾವುದೇ ನಿವೇಶನ, ಮನೆಗಳು ನೀಡಿಲ್ಲ. ಸ್ವತಃ ನಾವೇ ಹೋಗಿ ಜಗಳವಾಡಿ ಬಂದಿದ್ದೇನೆ. ನಗರಕ್ಕೆ 800 ಮನೆಗಳ ಅಗತ್ಯತೆ ಕುರಿತು ಮನವಿ ಮಾಡಿದ್ದೇನೆ. ನೀಡುವ ಭರವಸೆ ನೀಡಿದ್ದಾರೆ ಆದರೆ ಇಲ್ಲಿವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.
ಬೇರೆ ಕ್ಷೇತ್ರಗಳಿಗೆ ಸಾಕಷ್ಟು ಕೆಲಸಗಳು ನಡೆಯುತ್ತಿವೆ ಎಂದು ಆರೋಪಿಸಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಅನುದಾನ ಅಭಿವೃದ್ಧಿ ಕಾರ್ಯಕೈಗೊಂಡಿದ್ದು, ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

Related Articles

Leave a Reply

Your email address will not be published. Required fields are marked *

Back to top button