ಯೂತ್ ಐಕಾನ್

ಶಹಾಪೂರದಲ್ಲೊಂದು ಮಾದರಿ ಸುಸಂಸ್ಕೃತ ಬ್ರಾಹ್ಮಣ ಕುಟುಂಬ.!

ಶಹಾಪೂರದಲ್ಲೊಂದು ಮಾದರಿ ಪ್ರಗತಿಪರ ಬ್ರಾಹ್ಮಣ ಕುಟುಂಬ

– ರಾಘವೇಂದ್ರ ಹಾರಣಗೇರಾ.

ಶಹಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2008 ರಿಂದ ಅತಿಥಿ ಉಪನ್ಯಾಸಕನಾಗಿ ವೃತ್ತಿ ಜೀವನ ಪ್ರಾರಂಭಿಸಿದ ನಂತರ ನಗರದಲ್ಲಿ ನಡೆಯುವ ಅನೇಕ ಸಾಹಿತ್ಯ, ಸಂಗೀತ, ನಾಟಕ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಸ್ನಾತಕೋತ್ತರ ಪದವಿ ಅದ್ಯಯನ ಸಂದರ್ಭದಲ್ಲಿ ನನ್ನ ಅನೇಕ ಲೇಖನಗಳು, ವಿವಿಧ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು ಇದರಿಂದ ಶಹಾಪುರದ ಹಿರಿಯ ಪತ್ರಕರ್ತರಾದ ನಾರಾಯಣಾಚಾರ್ಯ ಸಗರ, ಟಿ. ನಾಗೇಂದ್ರ, ದೇವು ಪತ್ತಾರ, ಮಲ್ಲಿಕಾರ್ಜುನ ಮುದ್ನೂರ್, ರವಿ ಹಿರೇಮಠ, ಪ್ರಲ್ಹಾದ ತಿಳಗೊಳ, ಶಿವರಂಜನ್ ಸತ್ಯಂಪೇಟ, ಈರಣ್ಣ ಹಾದಿಮನಿ ಮುಂತಾದವರು ನನ್ನ ಬರಹಗಳಿಗೆ ಕಾರ್ಯಚಟುವಟಿಕೆಗಳಿಗೆ ಪ್ರೊತ್ಸಾಹ ನೀಡಿ ಸಗರನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಸರದಲ್ಲಿ ಪ್ರೀತಿಯ ಅಂತಃಕರಣದಿಂದ ನನ್ನನ್ನು ಬೆಳೆಸಿದರು.

ಶಹಾಪುರ ನಗರ ಅನೇಕ ಹಿರಿಯ ಸಾಹಿತಿಗಳ, ಸಾಂಸ್ಕೃತಿಕ ಮನಸ್ಸುಗಳ ಒಡನಾಟವಾಗಲು ಗುರುಗಳಾದ ಶಿವರಂಜನ್ ಸತ್ಯಂಪೇಟ, ಆನಂದಕುಮಾರ ಸಾಸನೂರ ಹಾಗೂ ವೈದ್ಯರಾದ ಡಾ. ಬಸವರಾಜ ಇಜೇರಿ, ಬಸವರಾಜ ಕಡಗಂಚಿ ಮುಂತಾದವರೆಲ್ಲರೂ ಕಾರಣರಾಗಿದ್ದಾರೆ.

ಭೀ. ಗುಡಿಯ ಸಿದ್ದಾರೂಡ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮಿಗಳ ಪ್ರವಚನ ಕಾರ್ಯಕ್ರಮದಲ್ಲಿ ಪರಿಚಿತರಾದವರು ಸರಳ ಸಜ್ಜನಿಕೆಯ ಸೌಜನ್ಯಮೂರ್ತಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಪತ್ರಕರ್ತರಾದ ನಾರಾಯಣಾಚಾರ್ಯ ಸಗರ ಅವರು. ಮನೆಯ ಕುಟುಂಬದ ಸದಸ್ಯನಂತೆ ನನ್ನನ್ನು ಪ್ರೀತಿ ವಿಶ್ವಾಸ, ಕಾಳಜಿಯಿಂದ ಕಾಣುವ ನಾರಾಯಣಾಚಾರ್ಯರು ಯಾವುದೇ ಜಾತಿ, ಪಂಥ , ಪಂಗಡ, ಧರ್ಮಗಳನ್ನದೆ ಎಲ್ಲರನ್ನೂ ತಮ್ಮ ಮನೆಯ ಸದಸ್ಯರಂತೆ ಪ್ರೀತ್ಯಾದಾರಗಳಿಂದ ಕಾಣುತ್ತಾರೆ.

ಹೈದ್ರಾಬಾದ್ ಕರ್ನಾಟಕದ ಮಾಸ್ತಿ ಎಂದೇ ಹೆಸರುವಾಸಿಯಾಗಿದ್ದ ಸಾಹಿತ್ಯ ಚೇತನ ಅವರ ದೊಡ್ಡಪ್ಪ ಸಗರ ಕೃಷ್ಣಚಾರ್ಯರ ಹಾಗೂ ತಂದೆ ಜಯತೀರ್ಥಚಾರ್ಯರು ಹಾಗೂ ವಿದ್ವಾನ್ ಸಗರ ಪದ್ಯುಮ್ನಚಾರ್ಯ ಅವರ ಸಮನ್ವಯ ಸಂಸ್ಕಾರದಲ್ಲಿ ಬೆಳೆದ ನಾರಾಯಣಚಾರ್ಯರು ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಅವರ ತಂದೆಯವರು ಎರಡನೇ ಮಹಾಯುದ್ಧ ಸಂದರ್ಭದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದವರು ಬಹಳ ಕಟ್ಟುನಿಟ್ಟಿನ ಶಿಸ್ತಿನ ಸಿಪಾಯಿಯಾಗಿ ಅಂದಿನ ಪರಿಸ್ಥಿತಿಯಲ್ಲಿ ಸರ್ವರಿಗೂ ಉತ್ತಮ ಸಲಹೆಗಳನ್ನು ನೀಡುತ್ತಾ ಜೀವನ ನಡೆಸಿಕೊಂಡು ಬಂದವರು.

ಶಿಕ್ಷಣದ ಬಗ್ಗೆ ಅಪಾರ ಕಾಳಜಿವುಳ್ಳ ನಾರಾಯಣಾಚಾರ್ಯ ಸಗರ ಅವರು ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅದರಡಿಯಲ್ಲಿ ಜ್ಞಾನಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭಿಸಿ ಹಿಂದುಳಿದ, ದಲಿತ, ತಳಸಮುದಾಗಳ, ಅಲ್ಪಸಂಖ್ಯಾತರ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಿ ಬೆಳೆಸುತ್ತಾ ಸಂಸ್ಥೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡಿದ್ದಾರೆ. ಈ ಸಂಸ್ಥೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಂಡಿದ್ದಾರೆ.

ಬ್ರಾಹ್ಮಣ ಸಮಾಜದವರಾದ ಅವರು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಬದುಕು ಸುಧಾರಿಸಬೇಕು, ಆ ಸಮುದಾಗಳ ಜೀವನಮಟ್ಟ ಎತ್ತರಿಸಿಕೊಳ್ಳಬೇಕೆಂಬ ಮಾನವೀಯ ಕಾಳಜಿಯನ್ನು ಹೊಂದಿದವರು. ಈ ಹಿನ್ನಲೆಯಲ್ಲಿ ಅವರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿಕೊಡಲು ಶ್ರಮಿಸಿದ್ದಾರೆ.

ಹಿಂದೆ ಅವರ ತಂದೆಯವರು ತಮ್ಮ ಬ್ರಾಹ್ಮಣ ಸಮಾಜದಲ್ಲಿನ ಹಲವು ತಾರತಮ್ಯಗಳನ್ನು, ಮಡಿವಂತಿಕೆಗಳನ್ನು ಹೊಗಲಾಡಿಸಲು ಪ್ರಯತ್ನಿಸಿ ಸಮಾಜದಿಂದ ಹಲವು ವಿರೋಧಗಳನ್ನು ಎದುರಿಸಿದರು. ನಾರಾಯಣಾಚಾರ್ಯ ಸಗರ ಅವರ ಕುಟುಂಬ ಯಾವುದೇ ಮಡಿವಂತಿಕೆ, ಶ್ರೇಷ್ಠ- ಕನಿಷ್ಠ, ಪವಿತ್ರ – ಅಪವಿತ್ರ ಇತ್ಯಾದಿ ಯಾವುದೇ ತಾರತಮ್ಯಗಳಿಗೆ ಅವಕಾಶ ನೀಡಿಲ್ಲ.

ಮನೆಗೆ ಬರುವ ಯಾವುದೇ ಸಮುದಾಯದ ಸದಸ್ಯರನ್ನು ತಮ್ಮ ಮನೆಯ ಸದಸ್ಯರಂತೆ ಪ್ರೀತಿಯಿಂದ ಕಂಡು ಊಟ, ಉಪಹಾರ ನೀಡಿ ಉಪಚರಿಸಿ ಕಳಿಸುತ್ತಾರೆ. ಮನೆಯಲ್ಲಿನ ಮಕ್ಕಳಿಗೂ ಆ ಸಂಸ್ಕಾರವನ್ನು ನೀಡಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಡಾ.ರಂಗರಾಜ ವನದುರ್ಗ ಅವರು ಶಹಾಪುರಕ್ಕೆ ಬಂದಾಗಲೊಮ್ಮೆ ನಾರಾಯಣಾಚಾರ್ಯ ಅವರ ಮನೆಗೆ ಭೇಟಿ ನೀಡಿ ಅವರ ಮಕ್ಕಳಿಂದ ಸಂಗೀತ ಆಲಿಸಿ ಊಟ ಮಾಡಿ ಬರುತ್ತಾರೆ. ಇದು ನನ್ನ ಮನೆ, ನನ್ನ ಮಕ್ಕಳು ಹಾಡುವ ಹಾಡುವ ಹಾಡುಗಳು ಮತ್ತು ಪ್ರೀತಿಯ ಆತಿಥ್ಯ, ಕುಟಬದವರ ಸದುವಿನಯದ ಸೌಜನ್ಯತೆ ನನ್ನ ಮನಸ್ಸಿಗೆ ತುಂಬಾ ಖುಷಿ ನೀಡಿದೆ.

ಇಂತಹ ಮಾನವೀಯ ಅಂತಃಕರಣ ಕಾಳಜಿವುಳ್ಳ ಕುಟುಂಬಗಳು ಇವತ್ತಿನ ಸಂದಿಗ್ಧ ಸಂಕೀರ್ಣ ವ್ಯವಸ್ಥೆಯಲ್ಲಿ ತುಂಬಾ ವಿರಳ ಎಂದು ನುಡಿಯುತ್ತಾರೆ.

ನಾನು ಅವರ ಮನೆಗೆ ಹೋದಗಲೆಲ್ಲಾ ಊಟ ಮಾಡದೆ ಬರುವುದಿಲ್ಲ. ತಿಂಗಳದಲ್ಲಿ ಒಂದೆರಡು ಬಾರಿಯಾದರೂ ನನಗೆ ಪೋನ ಮಾಡಿ ಪ್ರೀತಿಯಿಂದ ರಾಘಣ್ಣಾ ಮನೆಗೆ ಬಂದು ಊಟ ಮಾಡಿಕೊಂಡು ಹೋಗು ಎಂದು ಕರೆಯುತ್ತಾರೆ. ನನ್ನ ಕೌಟುಂಬಿಕ ಸಂಬಂಧಕ್ಕಿಂತ ಹೆಚ್ಚು ಪ್ರೀತಿ, ವಾತ್ಸಲ್ಯ, ಕಾಳಜಿ, ಆತ್ಮೀಯತೆ, ಅವರಲ್ಲಿ ಕಂಡಿದ್ದೇನೆ.

ಮನೆಗೆ ಬಂದ ಅತಿಥಿಗಳಿಗೆ ಗೌರವ ನೀಡುವುದು ನಿಜವಾದ ಸೇವೆ ಮೊದಲಿನಿಂದಲೂ ಇದೊಂದು ಪದ್ದತಿ ರೂಢಿಯಾಗಿದೆ. ಯಾರೇ ಮನೆಗೆ ಬಂದರೂ ಅವರಿಗೆ ಉಪಚಾರ ಮಾಡಿದರೆ ಅದರಿಂದ ಸಿಗುವ ತೃಪ್ತಿ ಬೇರೆ ಯಾವುದರಲ್ಲಿ ನಾನು ಕಂಡಿಲ್ಲ. ಇದು ನನ್ನ ಎಲ್ಲಾ ಪರಿವಾರದವರಿಗೂ ಸದಾ ತಿಳಿಸುತ್ತಿರುತ್ತೇನೆ.

ಮಾನವೀಯ ಸಂಬಂಧಕ್ಕೆ ತುಂಬಾ ಮಹತ್ವವಿದೆ ಎಂಬುದನ್ನು ಅರಿತಿರುವೆ. ಪ್ರೀತಿ, ವಿಶ್ವಾಸ, ಸಹಕಾರ, ಮಾನವೀಯ ಅನುಕಂಪ ಮುಂತಾದವುಗಳನ್ನು ಜೀವನಪರ್ಯಂತ ಅನುಸರಿಸಿಕೊಂಡು ಹೋಗುವುದೇ ನಿಜವಾದ ಮನುಷ್ಯ ಧರ್ಮ ಎಂದು ನಾರಾಯಣಾಚಾರ್ಯ ಅವರು ನುಡಿಯುತ್ತಾರೆ.

ಪ್ರಗತಿಪರ ಚಿಂತನೆವುಳ್ಳ, ಸರಳ, ಸಹೃದಯಿ, ಸೂಕ್ಷ್ಮ ಸಂವೇದನೆಯ ಸ್ಪಂದನಾಶೀಲ ಮನೋಭಾವದ ನಾರಾಯಣಾಚಾರ್ಯ ಸಗರ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಜಿಲ್ಲಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಮ್ಮ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸಾಹಿತ್ಯ, ಸಂಗೀತ, ನಾಟಕ ಹಾಗೂ ಹಲವಾರು ರಾಷ್ಟ್ರಪ್ರೇಮ, ಭಾವೈಕ್ಯತೆ, ಧಾರ್ಮಿಕ ಸಹಿಷ್ಣುತೆ ಮುಂತಾದ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಿ ಉತ್ತಮ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ.

ನಾರಾಯಣಾಚಾರ್ಯ ಅವರ ಬದುಕು, ಕಾರ್ಯಚಟುವಟಿಕೆಗಳು ನೋಡಿದಾಗ ಕುದ್ಮುಲ್ ರಂಗರಾವ್ ಅವರು ನೆನಪಿಗೆ ಬರುತ್ತಾರೆ. ರಂಗರಾವ್ ಅವರ ಅನೇಕ ಮಾನವೀಯ ಆಶಯಗಳನ್ನು ನಾರಾಯಣಾಚಾರ್ಯ ಅವರ ವ್ಯಕ್ತಿತ್ವದಲ್ಲಿ ಕಾಣಬಹುದಾಗಿದೆ.

ನಾರಾಯಣಾಚಾರ್ಯ ಸಗರ ಅವರ ಮಾನವೀಯತೆ, ಸೇವಾಪರತೆ, ಸಾಮಾಜಿಕ ಕಾಳಜಿ, ಪ್ರಗತಿಪರ ಆಲೋಚನೆಗಳು ಇತರ ಎಲ್ಲಾ ಸಮುದಾಯಗಳಿಗೂ ಅನಸರಣಯೋಗ್ಯವಾಗಿದೆ. ಪ್ರತಿಯೊಂದನ್ನು ಜಾತಿ, ಜನಾಂಗ, ಧರ್ಮದ ನೆಲೆಯಲ್ಲಿ ಕಾಣುವ ಹಾಗೂ ಲಾಭ- ನಷ್ಟದ ಹಿನ್ನೆಲೆಯಲ್ಲಿ ಆರ್ಥಿಕ ದೃಷ್ಟಿಕೋನದಲ್ಲಿ ನೋಡುವ ಇವತ್ತಿನ ಯಾಂತ್ರಿಕ ಸಾಮಾಜಿಕ ಜೀವನದಲ್ಲಿ ಎಲ್ಲರೂ ನಮ್ಮವರೆಂದು ಸಾಮೂದಾಯಿಕ ಭಾವನೆಯಿಂದ ಕಾಣುವ, ಎಲ್ಲಾ ಸಮದಾಯದ ಸದಸ್ಯರೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುವ, ಕಷ್ಟ- ಸುಖಗಳಲ್ಲಿ ಭಾಗಿಯಾಗುವ, ಸಹಾಯ – ಸಹಕಾರ ನೀಡುವ, ಎಲ್ಲರೊಂದಿಗೆ ಬೆರೆಯುವ, ಮನುಷ್ಯ ಸಂಬಂಧಗಳನ್ನು ಬೆಸೆಯುವ ನಾರಾಯಣಾಚಾರ್ಯ ಸಗರ ಅವರ ಕುಟುಂಬ ಸಮಾಜಕ್ಕೆ ಮಾದರಿ.

ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಶಹಾಪುರ.

Related Articles

One Comment

  1. ಶ್ರೀ ರಾಘವೇಂದ್ರ ಹಾರಣಗೇರಾ ( ಸ ಶಾ ಉ) ಶಹಾಪೂರ ಸರ್, ತಮಗೆ ನನ್ನ ಮೊಟ್ಟಮೊದಲ ನಮಸ್ಕಾರ ಹಾಗು ಈ ಲೇಖನ ತುಂಬಾ ಅದ್ಬುತ ವ್ಯಕ್ತಿ ಯನ್ನು ಆಯ್ಕೆ ಮಾಡಿ ಬರೆದು ಎಲೆ ಮರೆಯ ಕಾಯಯಾಗಿರುವ ನಿಮ್ಮ ಲೇಖನದ ಮೂಲಕ ಹಾಗು ಇದಕ್ಕೂ ಮೊದಲು ಶ್ರೀ ದಕ್ಷಣ ಕಾಷಿ ಛಾಯಾ ಭಗವತಿ ನಾರಾಯಣಪುರ ದಲ್ಲಿ ಕಳೆದೆರಡು ವರ್ಷಗಳ ಹಿಂದೆ ಜರುಗಿದ ಕಾರ್ಯಮದಲ್ಲಿ ಅವರ ಹಾವ ಭಾವ ಕಾರ್ಯಚಟುವಟಿಕೆಗಳನ್ನು ಯುವಕರನ್ನು ಸಹ ನಾಚಿಸುವಂತೆ ಎಲ್ಲರೋಡನೆಯ ಒಡನಾಟ ನಾ ಕಂಡು, ಇದ್ದರೆ ಅವರಂತೆ ಇರಬೇಕು, ಬಾಳಿದರೆ ಅವರಂತೆ ಬಾಳಬೇಕು, ಭಾವನೆಗಳು ಸಹ ಅವರಂತೆ ನನಗೆ ಮುಂದಿನ ಜನ್ಮದಲ್ಲಾದರೂ ಆ ದೇವಿ ಛಾಯಾ ಭಗವತಿ ನನ್ನನ್ನೂ ಕರುಣಿಸಲಿ ಎಂದು ನನ್ನ ಮನಸ್ಸಿನಲ್ಲಿ ಮುದ್ರಿಸಿಕೊಂಡಿರುವೆ ಸರ್.. ಮಹಾನ್ಬಾವ , ಪಕ್ಷಾತೀತ ದೇವರೆಂದೆ ನಾ ನಾಮಕರಣ ಮಾಡಿದ ಶ್ರೀ ನಾರಾಯಣರ್ಚಾಯ ಸಗರ ಶ್ರೀ ಗಳಿಗೆ ನನ್ನ ಅನಂತ ಅನಂತ ನಮಸ್ಕರಿಸಿ, ಅವರ ಲೇಖನ ಮಾಡಿರುವದಕ್ಕೆ ತಮಗೂ ನನ್ನ ಧನ್ಯವಾದಗಳು ಸರ್.

Leave a Reply

Your email address will not be published. Required fields are marked *

Back to top button