ಸಂವಿಧಾನ ಪೀಠಿಕೆ ಓದು ಅಭಿಯಾನಕ್ಕೆ ದರ್ಶನಾಪುರ ಚಾಲನೆ
ಪೀಠಿಕೆ ಅರ್ಥೈಸಿಕೊಂಡಲ್ಲಿ ಸಾಮರಸ್ಯ ಮೂಡಲಿದೆ – ದರ್ಶನಾಪುರ

ಸಂವಿಧಾನ ಪೀಠಿಕೆ ಓದು ಅಭಿಯಾನಕ್ಕೆ ದರ್ಶನಾಪುರ ಚಾಲನೆ
ಪೀಠಿಕೆ ಅರ್ಥೈಸಿಕೊಂಡಲ್ಲಿ ಸಾಮರಸ್ಯ ಮೂಡಲಿದೆ – ದರ್ಶನಾಪುರ
yadgiri, ಶಹಾಪುರಃ ಭಾರತೀಯ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆ ಹಾಗೂ ನಾಡಿನಲ್ಲಿ ಪರಸ್ಪರರು ಸಮಾನ ಅವಕಾಶ, ಸಮಾನತೆ ಸಹಬಾಳ್ವೆಯ ನೆಲೆಯಲ್ಲಿ ಎಲ್ಲರನ್ನೂ ಒಂದುಗೂಡಿಸುವ ಭಾಗವಾಗಿ ರಾಜ್ಯ ಸರ್ಕಾರ ಸಂವಿಧಾನದ ಪೂರ್ವ ಪೀಠಿಕೆಯನ್ನು ಓದುವ ಅಭಿಯಾನ ಕೈಗೊಂಡಿದೆ ಎಂದು ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ತಹಶೀಲ್ ಕಚೇರಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕಾ ಆಡಳಿತದಿಂದ ನಡೆದ ಭಾರತೀಯ ಸಂವಿಧಾನ ಪೀಠಿಕೆ ಜಾಗತಿಕ ವಾಚನ ಕಾರ್ಯಕ್ರಮಕ್ಕೆ ಸಂವಿಧಾನ ರತ್ನ ಡಾ.ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸಂವಿಧಾನ ಪೀಠಿಕೆ ಓದಿ ಅರ್ಥೈಸಿಕೊಂಡು ಪ್ರತಿಯೊಬ್ಬರು ಅದರಂತೆ ನಡೆದುಕೊಂಡಲ್ಲಿ ದೇಶದಲ್ಲಿ ಯಾವುದೇ ಸಮಸ್ಯೆ ಉದ್ಭವಿಸುವದಿಲ್ಲ. ನಾವೆಲ್ಲರೂ ಒಂದೇ ಭಾವನೆಯೊಂದಿಗೆ ಪರಸ್ಪರರಲ್ಲಿ ಪ್ರೀತಿ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಘನತೆ ಏಕತೆ ಮತ್ತು ಸಮಗ್ರತೆಯ ನಡೆಗೆ ನಮ್ಮದಾಗಲಿ ಎಂದು ಆಶಿಸಿದರು.
ಸಂವಿಧಾನ ಪೀಠಿಕೆ ಓದು ಅಭಿಯಾನ ಮೂಲಕ ಸರ್ಕಾರಿ, ಖಾಸಗಿ ಶಾಲಾ ಕಾಲೇಜಿಗಳಲ್ಲಿ ವಿದ್ಯಾರ್ಥಿ ಸಮೂಹಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಅಭಿಯಾನದಲ್ಲಿ ಭಾಗಿಯಾಗುವ ಮೂಲಕ ಸಂವಿಧಾನ ಪೀಠಿಕೆ ಕುರಿತು ಎಲ್ಲರಲ್ಲೂ ಜಾಗೃತಿ ಮೂಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ದೇಶದಲ್ಲಿ ಸಮಾನತೆ, ಏಕತೆ ಸಂವಿಧಾನದ ಪೀಠಿಕೆಯ ಶಕ್ತಿ ಅರ್ಥ ಅರಿಯುವ ಕೆಲಸವಾಗಲಿ. ಇದರಿಂದ ದೇಶ ಸುಭೀಕ್ಷೆ, ಶಾಂತಿ ಸಮಧಾನ ನೆಲೆಗೆ ಸಾಕ್ಷಿಯಾಗಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಉಮಾಕಾಂತ ಹಳ್ಳಿ, ತಾಪಂ ಇಓ ಸೋಮಶೇಖರ ಮತ್ತು ಪಿಐ ಎಸ್.ಎಂ.ಪಾಟೀಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಹಶೀಲ್ ಸಿಬ್ಬಂದಿ ವರ್ಗ ಹಾಗೂ ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.