Homeಜನಮನಪ್ರಮುಖ ಸುದ್ದಿ

ನಮಗೇ ನೀರಿಲ್ಲ, ತಮಿಳುನಾಡಿಗೆ ನಾವು ನೀರು ಬಿಟ್ಟಿಲ್ಲ- ಡಿಕೆ ಶಿವಕುಮಾರ್ ಸ್ಪಷ್ಟನೆ

ಮಂಡ್ಯ: ಕೆಲವರು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಅಂತಾ ಹೇಳ್ತಾರೆ. ನಾವು ಯಾವುದೇ ನೀರು ಬಿಟ್ಟಿಲ್ಲ. ಅವರ ಆದೇಶ ಆದಮೇಲೆ ಅವರಿಗೆ ಡ್ಯಾಂ ತುಂಬಿ 30 ಟಿಎಂಸಿ ನೀರು ಹರಿದು ಹೋಗಿದೆ. ಇನ್ನು 10 ಟಿಎಂಸಿ ನೀರು ಹರಿದರೆ ಈ ವರ್ಷದ ಗಡುವು ತೀರಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಭಾರೀ ಮಳೆಯಿಂದಾಗಿ ಭರ್ತಿಯಾಗಿರುವ ಕೆಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡಿದ ಅವರು, ನೀರಿನ ಮಟ್ಟ, ನೆರೆ ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಡ್ಯಾಂ ವೀಕ್ಷಣೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 40 ಟಿಎಂಸಿ ನೀರು ತಮಿಳುನಾಡಿಗೆ ಬಿಡಬೇಕಿತ್ತು. ಸದ್ಯ 20 ಟಿಎಂಸಿ ಬಿಡಿ ಎಂದು ಆದೇಶ ಆಗಿತ್ತು. ಆದರೆ ನಾವು ನಿರ್ಧಾರ ಮಾಡಿ ನೀರು ಬಿಡಲಿಲ್ಲ ಎಂದು ಹೇಳಿದರು.

ವರುಣನ ಕೃಪೆ, ತಾಯಿ ಚಾಮುಂಡೇಶ್ವರಿ ಅನುಗ್ರಹ. ಕಾವೇರಿ ನದಿಗೆ ನಾವೆಲ್ಲ ಬಾಗಿನ ಅರ್ಪಣೆ ಮಾಡುವ ಸೌಭಾಗ್ಯ ಸಿಕ್ಕಿದೆ. ಕಳೆದ ವರ್ಷ ನಾವು ಕಷ್ಟದಲ್ಲಿದ್ದೆವು. ಆದರೂ ಶಕ್ತಿ ಮೀರಿ ರೈತರನ್ನ ಕಾಪಾಡುವ ಕೆಲಸ ಮಾಡಿದ್ದೇವೆ. ಕಳೆದ ವರ್ಷ ಸಾಕಷ್ಟು ಬರಗಾಲವಿತ್ತು. ಈಗ ಕಾವೇರಿ ತಾಯಿಯ ಕೃಪೆ ನಮಗೆ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸದ್ಯ ಡ್ಯಾಂನಿಂದ 50 ಸಾವಿರ ಕ್ಯುಸೆಕ್ ನೀರು ಹೋಗುತ್ತಿದೆ. ವರುಣನ ಕೃಪೆಯಿಂದ ಆದೇಶ ಪಾಲನೆ ಮಾಡಿದ್ದೇವೆ. 1,455 ಕೆರೆಗಳು ಕಾವೇರಿ ಕೊಳ್ಳದಲ್ಲಿವೆ. ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button