
ಕೆಲಸ ಕಲಿಯಲು ಬದುಕಿನ ಕೊನೆಯವರೆಗೂ ಕಾಯಬೇಕೇ?
ಕೆಲಸಕ್ಕೂ ಬದುಕಿಗೂ ಒಂದು ಬಗೆಯ ಅವಿನಾಭಾವ ಸಂಬಂಧವಿದೆಯಲ್ಲವೇ? ಇದಿಲ್ಲದೆ ಅದಿಲ್ಲ! ಅದಿಲ್ಲದೆ ಇದಿಲ್ಲ. ಹಾಗಾದರೆ ಕೆಲಸ ಕಲಿಯಬೇಕಾದದ್ದು ಯಾವಾಗ? ಅದನ್ನು ತೋರಿಸುವ ಚೀನಾದ ಜನಪದ ಕತೆಯೊಂದು ಇಲ್ಲಿದೆ. (ಭಾರತೀಯರಾದ ನಾವೂ ಓದಬಹುದಾದ ಕತೆ!) ಅಲ್ಲೊಬ್ಬ ಶ್ರೀಮಂತ ಜಮೀನುದಾರರಿದ್ದರು. ಸ್ವಶ್ರಮದಿಂದ ಸಿರಿವಂತರಾಗಿದ್ದವರು. ಐವತ್ತು ವರ್ಷ ವಯಸ್ಸಾಗಿದ್ದ ಅವರಿಗೆ ಮೂವತ್ತು ವರ್ಷ ವಯಸ್ಸಿನ ಮಗನಿದ್ದ. ಒಬ್ಬನೇ ಮಗ, ವಂಶೋದ್ಧಾರಕ ಎಂಬಿತ್ಯಾದಿ ಕಾರಣಗಳಿಂದ ಅವನನ್ನು ಬಹಳ ಮುದ್ದಿನಿಂದ ಬೆಳೆಸಿದ್ದರು.
ಅವನು ತಿಂದುಂಡು, ಆಟವಾಡಿಕೊಂಡು, ಮೋಜು ಮಾಡಿಕೊಂಡು ಕಾಲ ಕಳೆಯುತ್ತಿದ್ದ. ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಏಕೆಂದರೆ ಅಪ್ಪ ಅವನಿಗೆ ಕೆಲಸ ಮಾಡುವುದನ್ನು ಕಲಿಸಿ ಕೊಟ್ಟಿರಲಿಲ್ಲ. ಇನ್ನೂ ಸಮಯವಿದೆ ಎಂದುಕೊಂಡು ಸುಮ್ಮನಿದ್ದರು. ಅವನೂ ಸುಮ್ಮನಿದ್ದ. ಏನೂ ಕಲಿಯಲಿಲ್ಲ.
ಒಮ್ಮೆ ಜ್ಯೋತಿಷಿಯೊಬ್ಬರು ಅವರ ಮನೆಗೆ ಬಂದರು. ತಂದೆ-ಮಕ್ಕಳ ಕೈಗಳನ್ನು ಕೂಲಂಕಷವಾಗಿ ನೋಡಿದರು. ನಂತರ ‘ಜಮೀನುದಾರರೇ, ನಿಮಗೀಗ ಐವತ್ತು ವರ್ಷ ವಯಸ್ಸು. ನೀವು ಇನ್ನೂ ಮೂವತ್ತು ವರ್ಷ ಬದುಕುತ್ತೀರಿ. ನಿಮ್ಮ ಮಗನು ಇನ್ನೂ ಮೂವತ್ತೆರಡು ವರ್ಷಗಳ ಕಾಲ ಬದುಕುತ್ತಾನೆ’ ಎಂದು ಭವಿಷ್ಯ ನುಡಿದರು.
ಜಮೀನುದಾರರು ತಾವು ಇನ್ನೂ ಮೂವತ್ತು ವರ್ಷ ಬದುಕುವ ಭರವಸೆ ಸಿಕ್ಕಿದ್ದರಿಂದ ಸಂತಸಗೊಂಡರು. ಆದರೆ ಅವರ ಮಗ ಗಟ್ಟಿಯಾಗಿ ಅಳಲಾರಂಭಿಸಿದ. ಅಪ್ಪ ಗಾಬರಿಗೊಂಡು ಅವನ ಅಳುವಿಗೆ ಕಾರಣ ಕೇಳಿದಾಗ, ಆತ ‘ನೀವು ಇನ್ನು ಮೂವತ್ತು ವರ್ಷಕ್ಕೆ ಸತ್ತು ಹೋಗುತ್ತೀರಿ. ನಾನು ಮೂವತ್ತೆರಡು ವರ್ಷ ಬದುಕಿರುತ್ತೇನೆ. ಅಂದರೆ ನೀವು ಸತ್ತ ನಂತರದ ಎರಡು ವರ್ಷಗಳು ನನ್ನನ್ನು ನೋಡಿಕೊಳ್ಳುವವರು ಯಾರು?’ ಎಂದು ಬಿಕ್ಕಳಿಸಿ ಅಳತೊಡಗಿದ.
ಜ್ಯೋತಿಷಿಯು ‘ಇನ್ನೂ ಮೂವತ್ತು ವರ್ಷಗಳ ಕಾಲ ನಿಮ್ಮಪ್ಪ ಬದುಕಿರುತ್ತಾರೆ. ಅಲ್ಲಿಯವರೆಗೂ ನೀನು ನಿಶ್ಚಿಂತೆಯಾಗಿರಬಹುದು. ಆನಂತರ ನೋಡಿಕೊಳ್ಳೋಣ’ ಎಂದು ಹೇಳಿದರೂ ಆತ ಅಳು ನಿಲ್ಲಿಸಲಿಲ್ಲ.
ಆಗ ಜಮೀನುದಾರರು ಮಗನ ತಲೆ ನೇವರಿಸುತ್ತಾ ‘ಮಗು, ನಿನಗೆ ಐವತ್ತೊಂಬತ್ತು ವರ್ಷ ವಯಸ್ಸಾದಾಗ ಅಂದರೆ ನಾನು ಸಾಯುವುದಕ್ಕೆ ಒಂದು ವರ್ಷ ಮುಂಚೆ ನಿನಗೆ ವ್ಯವಸಾಯ ಮಾಡುವುದನ್ನೂ, ಜಮೀನುದಾರಿಕೆಯ ಕೆಲಸವನ್ನೂ ಹೇಳಿಕೊಡುತ್ತೇನೆ. ನೀನು ಅದನ್ನು ಕಲಿತರೆ, ನಾನು ಸತ್ತ ಮೇಲೂ ಎರಡು ವರ್ಷಗಳ ಕಾಲ ನಿಶ್ಚಿಂತೆಯಾಗಿ ಬದುಕಬಹುದು. ಚಿಂತಿಸಬೇಡ’ ಎಂದು ಸಮಾಧಾನ ಹೇಳಿದರು. ಆತ ಅಳುವುದನ್ನು ನಿಲ್ಲಿಸಿ ನಿರುಮ್ಮಳನಾಗಿ ಕುಳಿತ.
ಆಗ ಜ್ಯೋತಿಷಿಯು ‘ಸ್ವಾಮಿ, ನೀವು ಅವನಿಗೆ ಕೆಲಸ ಕಲಿಸಲು ಬದುಕಿನ ಕೊನೆಯ ವರ್ಷದವರೆಗೂ ಕಾಯಬೇಕೆ? ಐವತ್ತೊಂಬತ್ತು ವರ್ಷ ವಯಸ್ಸಾದಾಗ ವ್ಯವಸಾಯವನ್ನೂ, ಜಮೀನುದಾರಿಕೆಯನ್ನೂ ಹೇಳಿಕೊಟ್ಟು ಆತನ ಕೊನೆಯ ಎರಡು ವರ್ಷಗಳು ನಿಶ್ಚಿಂತೆಯಿಂದ ಬದುಕುವಂತೆ ಮಾಡುವುದರ ಬದಲು ಅದನ್ನು ಅವನಿಗೆ ಇಂದೇ ಹೇಳಿಕೊಟ್ಟರೆ ಇನ್ನೂ ಮೂವತ್ತೆರಡು ವರ್ಷಗಳ ಕಾಲವೂ ಆತ ನಿಶ್ಚಿಂತೆಯಾಗಿ ಬದುಕುವಂತೆ ಮಾಡಬಹುದಲ್ಲವೇ?’ ಎಂದು ಹೇಳಿದಾಗ, ಅಪ್ಪ-ಮಗ ಇಬ್ಬರಿಗೂ ಮಿಂಚು ಹೊಳೆದಂತಾಯಿತು.
ಅವರಿಬ್ಬರೂ ಒಮ್ಮೆಗೇ ‘ಅಯ್ಯೋ! ಇದರ ಬಗ್ಗೆ ನಾವು ಮೊದಲೇ ಏಕೆ ಚಿಂತಿಸಲಿಲ್ಲ?’ ಎಂದು ಉದ್ಘಾರ ತೆಗೆದರು. ಅಂದಿನಿಂದ ಅಪ್ಪ-ಮಕ್ಕಳ ದೃಷ್ಟಿಕೋನ ಬದಲಾಯಿತು. ಬದುಕೂ ಬದಲಾಯಿತು.
ಬಹುತೇಕ ಅಪ್ಪ-ಅಮ್ಮಂದಿರು ಮಾಡುವುದು ಇದನ್ನೇ ಅಲ್ಲವೇ? ಮಕ್ಕಳನ್ನು ಮುದ್ದು ಮಾಡುವುದೂ, ನಾವು ಬಾಲ್ಯದಲ್ಲಿ ಕಷ್ಟಪಟ್ಟೆವು, ಈಗ ಅವರೇಕೆ ಕಷ್ಟಪಡಬೇಕು, ಅವರು ಕಷ್ಟಪಟ್ಟರೆ ಎಲ್ಲಿ ಬಾಡಿಹೋಗುತ್ತಾರೋ ಎನ್ನುವ ಆಲೋಚನೆಗಳು ಚೀನಾದ ಅಪ್ಪಂದಿರಲ್ಲೇ ಅಲ್ಲ, ಎಲ್ಲಾ ದೇಶದ ಅಪ್ಪಂದಿರಲ್ಲೂ ಇರಬಹುದು.
ವಿದ್ಯೆ ಕಲಿಯಲು, ಕೆಲಸ ಮಾಡುವುದನ್ನು ಕಲಿಯಲು ಅವಸರ ಏಕೆ? ಅಪ್ಪ ಮಾಡಿಟ್ಟದ್ದೇ ಬೇಕಾದಷ್ಟಿದೆಯಲ್ಲಾ ಎನ್ನುವ ಆಲೋಚನೆಯುಳ್ಳ ಮಕ್ಕಳು ಎಲ್ಲ ದೇಶದಲ್ಲೂ ಇರಬಹುದು. ಕೆಲಸ ಕಲಿಯದೇ, ಗಳಿಸುವುದನ್ನು ಕಲಿಯದೇ, ಕೂತು ಉಂಡರೆ ಕೊಪ್ಪರಿಗೆ ಹಣವೂ ಸಾಕಾಗುವುದಿಲ್ಲ ಎನ್ನುವುದನ್ನು ಮಕ್ಕಳೂ ಅರಿಯಬೇಕು. ಅವರ ಅಪ್ಪಂದಿರೂ ಅರಿಯಬೇಕು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.