ಸಾವಿನಂಚಿಗೆ ಹೋಗಿ ಬಂದ ಹನುಮ ಇವನೇನಾ.?
ಹೇಗಿದ್ದ ಹೇಗಾದ ನೋಡ ನಮ್ಮೂರ ಹನುಮ
ಫಿನಿಕ್ಸ್ ಹಕ್ಕಿಯಂತೆ ಎದ್ದು ನಿಂತ ಯುವಕ, ಯುವ ರೈತನೀಗ ಜಿಮ್ ಮ್ಯಾನ್
ಮಲ್ಲಿಕಾರ್ಜುನ ಮುದ್ನೂರ
ಶಹಾಪುರಃ ಕಳೆದ ಒಂದುವರೆವರ್ಷದ ಹಿಂದೆ ಇಲ್ಲಿನ ಯುವಕನೋರ್ವ ಅನಾರೋಗ್ಯದಿಂದ ಆಸ್ಪತ್ರೆ ಸೇರಿ ಇನ್ನೇನು ಉಳಿಯುವದಿಲ್ಲ ಎಂದು ಸಂಬಂಧಿಕರು ಜನರು ಸ್ನೇಹಿತರು ಮಾತಾಡಿಕೊಳ್ಳುತ್ತಿರುವ ಪ್ರಸಂಗವದು. ಕಲಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ಕೋಣೆಯಲ್ಲಿ ವಾರಗಟ್ಟಲೇ ಕೋಮಾ ಸ್ಥಿತಿಯಲ್ಲಿ ಮಲಗಿದ್ದ ಎಂದರೆ ನಂಬಲೇಬೇಕು.
ತಿಂಗಳು ಗಟ್ಟಲೇ ಸಾವು ನೋವಿನ ಮಧ್ಯ ಹೋರಾಡಿ ಇದೀಗ ಬಲಾಢ್ಯ ದೇಹಹೊಂದಿದ್ದಾನೆ ಅಂದರೆ ಅಚ್ಚರಿ ಪಡುವಂತಹದ್ದು, ಹೌದು ಇಂತಹ ಸಾವನ್ನು ಜಯಿಸಿ ಬಂದವನ ಕಥೆ ಮತ್ತು ವ್ಯಥೆ ಇಲ್ಲಿದೆ.
ಶಹಾಪುರ ಹಳಿಸಗರ ಬಡಾವಣೆಯ 35 ವರ್ಷದ ಈ ವ್ಯಕ್ತಿಯ ಹೆಸರು ಹಣಮಂತ ದೊರೆ. ಅಂದ ಹಾಗೇ ಈತನ ಕೆಲಸ ಕೃಷಿ. ಒಂದುವರೆ ವರ್ಷದ ಹಿಂದೆ ಈತ ತೆಳ್ಳನೆಯ ಸೊಳಕಲು ದೇಹ ಹೊಂದಿದ್ದ, ಸಹವಾಸ ದೋಷದಿಂದ ಹಲವು ದುಶ್ಚಟಕ್ಕೆ ದಾಸನಾಗಿದ್ದ. ಚಿಕ್ಕ ವಯಸ್ಸಿನಿಂದಲೇ ಗುಟ್ಕಾ, ಸಿಗೇರೇಟ ಮತ್ತು ಕುಡಿತದಿಂದಾಗಿ ಒಮ್ಮೆ ಹಠಾತ್ತಾನೆ ಅನಾರೋಗಕ್ಕೆ ಈಡಾಗಿ ಆಸ್ಪತ್ರೆ ಸೇರಿದ್ದ. ಲೋ-ಬಿಪಿಯಾಗಿದೆ ಎಂದು ಹೇಳಲಾಗಿತ್ತು. ಲಕ್ಷಾಂತರ ರೂ. ಹಾಕಿ ಬದುಕಿಸಿಕೊಂಡ ಪಾಲಕರು ನಿಟ್ಟುಸಿರು ಬಿಡುವಂತಾಗಿತ್ತು.
ಅದನ್ನೆ ಚಾಲೆಂಜ್ ಆಗಿ ತೆಗೆದುಕೊಂಡ ಹುಡುಗ ಆಸ್ಪತ್ರೆಯಿಂದ ಬಂದ ನಂತರ ಎಲ್ಲಾ ಚಟಗಳನ್ನು ಬಿಟ್ಟು, ನಿತ್ಯ ಬೆಳಗಿನವ ಜಾವ 4 ಗಂಟೆಗೆ ಎದ್ದು ನಗರದ ರಾಯಲ್ ಜಿಮ್ಗೆ ತೆರಳಿ ಬಾಡಿ ವರ್ಕ್ಔಟ್ ಶುರು ಮಾಡಿದ. ಬೆಳಗ್ಗೆ ಮತ್ತು ಸಂಜೆ ಎರಡೆರಡು ಟೈಂ ಜಿಮ್ಗೆ ಹೋಗಲು ಶುರು ಮಾಡಿದ. ಜಿಮ್ ಮುಗಿಸಿದ ನಂತರ ಬೆಳಗ್ಗೆ ಮನೆಯಲ್ಲಿ ನಿತ್ಯದ ಉಪಹಾರ ಹೆಸರು, ಮೆಟಗಿ ಕಾಳು, ಒಂದು ತತ್ತಿ ಸೇರಿದಂತೆ ಪೌಷ್ಠಿಕಾಂಶ ಉಳ್ಳ ಆಹಾರ ಸೇವನೆಗೆ ಒತ್ತು ನೀಡಿದ.
ಜೊತೆಗೆ ಒಂದೆರಡು ಗ್ಲಾಸ್ ಹಾಲು ಸೇವನೆ ಮಾಡುತ್ತ ನಿತ್ಯದ ಕೆಲಸದ ಜೊತೆ ಇದನ್ನು ಮೈಗೂಡಿಕೊಂಡಿದ್ದಾನೆ.
ಇದೀಗ ರಾಯಲ್ ಜಿಮ್ ನಲ್ಲಿ ಈತನ ಸರಿಸಾಟಿ ದೇಹದಾಢ್ರ್ಯ ಹೊಂದಿದವರು ಕಾಣಿಸುವದಿಲ್ಲ. ಇಷ್ಟೊಂದು ಬೇಗ ಬಲಾಢ್ಯ ದೇಹ ಹೊಂದುವ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಿದ್ದಾನೆ. ಸಾವನ್ನೆ ಜಯಿಸಿ ಬಂದ ಹಣಮಂತ ಇದಿಗ ಆರೋಗ್ಯವಾಗಿ ಫುಲ್ ಫಿಟ್ನೆಸ್ ಹೊಂದಿರುವದು ನೋಡಿದರೆ ಅಚ್ಚರಿ ಮೂಡುವದು ಸಹಜವಾಗಿದೆ. ಇವನೇನಾ ಹಣಮಂತ ಎನ್ನುವಂತಾಗಿದೆ.
ಕೃಷಿ ಕಾಯಕದವ ಬೆಳೆಸಿದ ಕಾಯ
ಸಾವಿನಂಚಿಗೆ ಹೋಗಿ ಬಂದ ಯುವಕ ಇದೀಗ ಉತ್ತಮ ಆರೋಗ್ಯ ಬಲಾಢ್ಯ ದೇಹ ಹೊಂದಿರುವದು ನಿಜಕ್ಕೂ ಅಚ್ಚರಿಯೇ ಸರಿ. ನಿತ್ಯ ಜಿಮ್ಗೆ ಹೋಗಿ ಬಂದ ನಂತರ ಹೊಲದಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾನೆ. ಈತನೀಗ ತನ್ನ ಎರಡು ಮಕ್ಕಳು ತಂದೆ, ತಾಯಿ ಹೀಗೆ ತುಂಬ ಕುಟುಂಬದೊಂದಿಗೆ ಸಂತೋಷವಾಗಿದ್ದಾನೆ.
ಹತ್ತಿ ಬಿಡಿಸಿವುದು, ಜೋಳ ಕೊಯ್ಯುವದು ಸೇರಿದಂತೆ ಕೃಷಿಯ ಎಲ್ಲಾ ಕೆಲಸಗಳನ್ನು ಮಾಡುತ್ತಾನೆ. ಪ್ರಾಥಮಿಕ ಹಂತದಿಂದಲೇ ಶಿಕ್ಷಣ ಈತನಿಗೆ ಒಲಿಯದ ಕಾರಣ ಅತ್ತ ತಲೆ ಹಾಕದಿರುವದೆ ನೋವಿನ ಸಂಗತಿ.
ಹಣಮಂತ ಎರಡು ವರ್ಷದ ಹಿಂದೆ ಅನಾರೋಗ್ಯದಿಂದ ಸಾವಿನ ಬಾಗಿಲು ತಟ್ಟಿ ಬಂದಿದ್ದಾನೆ. ಬದುಕುಳಿದಿರವುದೇ ಆಶ್ಚರ್ಯಕರವಾಗಿದ್ದು, ಖಿನ್ನತೆಗೆ ಒಳಗಾಗಿದ್ದ ಆತ ಎಲ್ಲವನ್ನು ಬಿಟ್ಟು, ನಿತ್ಯ ಹೊಲ ಮನೆ ಕೆಸಲದ ಜೊತೆಗೆ ಜಿಮ್ ಗೆ ಬಂದು ಸದೃಢ ಕಾಯಕ್ಕಾಗಿ ಶ್ರಮವಹಿಸುತ್ತಿದ್ದ, ಈಗ ಜಿಮ್ ನಲ್ಲಿ ಆತನೇ ಫೇಮಸ್. ಎಲ್ಲರೂ ಆತನ ಮಾರ್ಗ ದರ್ಶನ ಪಡೆಯುವಂತಾಗಿದೆ.
-ಶರಣಗೌಡ ಕಟ್ಟಿಮನಿ. ಶಹಾಪುರ.
——————-
ಒಂದುವರೆ ವರ್ಷದ ಹಿಂದಿನಿಂದ ನಾನು ಜಿಮ್ ಮಾಡುತ್ತಿದ್ದೇನೆ. ಆಸ್ಪತ್ರೆಯಲ್ಲಿ ಸಾವು ನೋವುನ ಮಧ್ಯೆ ಹೋರಾಡಿ ಬದುಕಿರುವದೇ ಒಂದು ವಿಚಿತ್ರ. ನಮ್ಮ ಕುಟುಂಬಸ್ಥರು ಹೇಳಿರುವದು ನೋಡಿದ್ರೆ ನಾನು ಉಳಿಯಬಾರದಿತ್ತು. ಅದೃಷ್ಟ ಉಳಿದಿದ್ದೇ. ನಮ್ಮ ತಂದೆ ತಾಯಿ ಪುಣ್ಯ. ಈಗ ಎಲ್ಲಾ ದುಶ್ಚಟ ಬಿಟ್ಟಿದ್ದೇನೆ. ಹೊಲದಲ್ಲಿ ಕೆಲಸ ಮಾಡುವದು ನಿತ್ಯ ಬೆಳಗ್ಗೆ ಜಿಮ್ ನಲ್ಲಿ ಬಾಡಿ ವರ್ಕ್ಔಟ್ ಮಾಡುವದು. ಮನೆಯಲ್ಲಿ ಬೆಳಗ್ಗೆ ಮೊಳಕೆ ಬಂದ ಕಡ್ಲಿ, ಹೆಸರು, ಮೆಟಿಗಿಕಾಳು ಮತ್ತು ತತ್ತಿ, ತುಪ್ಪದಲ್ಲಿ ನೆನಿಸಿಟ್ಟ ಖಜೂರ್ ತಿನ್ನುತ್ತೇನೆ.
-ಹಣಮಂತ ದೊರೆ. ಹಳಿಸಗರ.
———————
ಒಂದುವರೆ ವರ್ಷ ಮೇಲಾಯಿತು ಹಣಮಂತ ನಮ್ಮ ಜಿಮ್ಗೆ ಬರುತ್ತಿರುವದು. ನಿತ್ಯ ಬೆಳಗ್ಗೆಯೇ 4 ಗಂಟೆಗೆ ಆಗಮಿಸುತ್ತಾನೆ. ನಮ್ಮಿಂದ ಮೊದಲಿಗೆ ಸಲಹೆ ಪಡೆದಿದ್ದಾನೆ ವರ್ಕ್ಔಟ್ ಹೇಗೆ ಮಾಡುವದು ಎಂದು. ಇದೀಗಿ ಆತನೆ ಬೆಳೆದು ನಿಂತಿದ್ದಾನೆ. ಉತ್ತಮ ದೇಹ ಹೊಂದ್ದಾನೆ. ನಮ್ಮ ಜಿಮ್ ನಲ್ಲಿ ಆತ ತರಹ ಬಾಡಿ ಹೊಂದಿದ್ದವರಲ್ಲಿ ಈತನೇ ಮೊದಲಿಗ.
-ಶೇಖರ ರಡ್ಡಿ. ಜಿಮ್ ಮಾಲೀಕ.
————————-
ಮಾದರಿ ಬರಹ