ಅವೈಜ್ಞಾನಿಕ ಮೀಸಲಾತಿ ಪ್ರಕಟ ವಾಲ್ಮೀಕಿ ಸಮುದಾಯ ಆಕ್ರೋಶ
ಜಿಪಂ ಕ್ಷೇತ್ರ ಅವೈಜ್ಞಾನಿಕ ಮೀಸಲಾತಿ-ಆರೋಪ
yadgiri, ಶಹಾಪುರ: ಪ್ರಸ್ತುತ ರಾಜ್ಯ ಚುನಾವಣೆ ಆಯೋಗ ಪ್ರಕಟಿಸಿರುವ ಶಹಾಪುರ ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಮತಕ್ಷೇತ್ರದ ಮೀಸಲಾತಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಮುಖಂಡರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಸಂಘ ಕರೆದ ಪೂರ್ವಭಾವಿ ಸಭೆಯಲ್ಲಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ ಮಾತನಾಡಿ, ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಸ್ತಿತ್ವಕ್ಕೆ ಬಂದ ಕಾಲದಿಂದಲೂ ಶಿರವಾಳ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗೆ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಒದಗಿಸಿಲ್ಲ. ಶಿರವಾಳ ಜಿಪಂ ಕ್ಷೇತ್ರದಲ್ಲಿ 3,490 ಪರಿಶಿಷ್ಟ ಪಂಗಡದ ಜನಸಂಖ್ಯೆ ಇದೆ. ಪ್ರಸಕ್ತ ಬಾರಿಯೂ ಮೀಸಲಾತಿ ಲಭಿಸಿಲ್ಲ. ಚುನಾವಣೆ ಆಯೋಗ ಪ್ರಕಟಿಸಿರುವ ಮೀಸಲಾತಿ ಅವೈಜ್ಞಾನಿಕ ಹಾಗೂ ಅಸಮಂಜಸವಾಗಿದೆ. ಇದನ್ನು ಸರಿಪಡಿಸುವಂತೆ ಚುನಾವಣೆ ಆಯೋಗಕ್ಕೆ ಸಂಘದಿಂದ ಆಕ್ಷೇಪಣೆ ಸಲ್ಲಿಸಿದೆ ಎಂದರು.
ನೂತವಾಗಿ ವನದುರ್ಗ ಜಿಲ್ಲಾ ಪಂಚಾಯಿತಿ ಅಸ್ತಿತ್ವಕ್ಕೆ ಬಂದಿರುವ ಕ್ಷೇತ್ರಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿ ನೀಡಿದೆ. ವನದುರ್ಗ ಕ್ಷೇತ್ರದಲ್ಲಿ 4,591 ಪರಿಶಿಷ್ಟ ಪಂಗಡ ಜನಸಂಖ್ಯೆ ಇದೆ. ಹಿಂದೆ ಗೋಗಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದಾಗ ಎರಡು ಬಾರಿ ಪರಿಶಿಷ್ಟ ಜಾತಿಗೆ ಮೀಸಲಾತಿ ಬಂದಿತ್ತು. ಅಲ್ಲದೆ ದೋರನಹಳ್ಳಿ ಕ್ಷೇತ್ರಕ್ಕೂ ಎರಡು ಬಾರಿ ಪರಿಶಿಷ್ಟ ಜಾತಿ ಮೀಸಲಾತಿ ನೀಡಿದೆ. ತಾಲ್ಲೂಕಿನಲ್ಲಿಯೇ 5,370 ಹೆಚ್ಚು ಪರಿಶಿಷ್ಟ ಪಂಗಡದ ಜನಸಂಖ್ಯೆ ಹೊಂದಿರುವ ರಸ್ತಾಪುರ ಕ್ಷೇತ್ರಕ್ಕೆ ಸಾಮಾನ್ಯ ಕ್ಷೇತ್ರವೆಂದು ಘೋಷಣೆ ಮಾಡಿದೆ. ಅಲ್ಲದೆ ತಡಿಬಿಡಿ ಕ್ಷೇತ್ರವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿದ್ದಾರೆ. ಅಲ್ಲಿ ಜನಸಂಖ್ಯೆ ಕಡಿಮೆ ಇದೆ.
ಸಾಮಾಜಿಕ ನ್ಯಾಯದ ಮೂಲಕ ಅಧಿಕಾರ ಸಿಗಬೇಕಾಗಿದೆ. ದೋಷಪೂರಿತ ಮೀಸಲಾತಿ ತಕ್ಷಣ ರದ್ದುಗೊಳಿಸಬೇಕು ಎಂದು ವಾಲ್ಮೀಕಿ ನಾಯಕ ಸಂಘದ ಮುಖಂಡರಾದ ಗೌಡಪ್ಪಗೌಡ ಆಲ್ದಾಳ ಹಾಗೂ ಶೇಖರ ದೊರೆ ಕಕ್ಕಸಗೇರಾ ಒತ್ತಾಯಿಸಿದ್ದಾರೆ.
ಚುನಾವಣೆ ಆಯೋಗ ಪ್ರಕಟಿಸಿರುವ ಮೀಸಲಾತಿಯನ್ನು ಸರಿಪಡಿಸಿ ಪರಿಶಿಷ್ಟ ಪಂಗಡಕ್ಕೆ ಸೂಕ್ತ ಮೀಸಲಾತಿ ನೀಡಬೇಕು ಇಲ್ಲದೆ ಹೋದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಾಲ್ಮೀಕಿ ಸಂಘದ ಮುಖಂಡರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಮುಖಂಡರಾದ ರವಿಕುಮಾರ ಯಕ್ಷಿಂತಿ ಹಳಿಸಗರ, ಅಶೋಕ ಹಳಿಸಗರ, ರಾಘವೇಂದ್ರ ಯಕ್ಷಿಂತಿ, ಸುಭಾಸ ರಾಂಪುರ, ಅಮರೇಶ ನಾಯಕ ಇಟಗಿ, ಶರಣಪ್ಪ ಪ್ಯಾಟಿ ಶಿರವಾಳ, ಯಲ್ಲಾಲಿಂಗ ಯಕ್ಷಿಂತಿ, ಅಶೋಕ, ಶರಣಪ್ಪ, ಸಾಯಿಬಣ್ಣ, ಲಕ್ಷ್ಮಣ ಯಾದಗಿರಿ ಇತರರಿದ್ದರು.