ಪ್ರಮುಖ ಸುದ್ದಿ
ಅಕ್ರಮ ಅಕ್ಕಿ ಸಾಗಾಣಿಕೆ ಆರೋಪಿ ಬಂಧನ
ಶಹಾಪುರಃ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಡಿಯಲ್ಲಿ ವಿತರಣೆ ಮಾಡಲಾಗುತ್ತಿದ್ದ ನ್ಯಾಯಬೆಲೆ ಅಂಗಡಿಯಿಂದ ಅಕ್ರಮ ಅಕ್ಕಿ ಸಂಗ್ರಹಿಸಿಕೊಂಡು ಚೀಲಗಳಲ್ಲಿ ತುಂಬಿಕೊಂಡು ಗೂಡ್ಸ್ ವಾಹನದ ಮೂಲಕ ಸಾಗಿಸುವ ವೇಳೆ ಪೊಲೀಸರು ದಾಳಿ ನಡೆಸಿ ವಾಹನ ಸಮೇತ ಆರೋಪಿಯಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಚಿದಾನಂದ ಹಾಗೂ ಸಿಪಿಐ ಹನುಮರಡ್ಡೆಪ್ಪ ಪೊಲೀಸ್ ತಂಡ ಚಟ್ನಳ್ಳಿ ಗ್ರಾಮದಿಂದ ಇಬ್ರಾಹಿಂಪುರ ಮಾರ್ಗವಾಗಿ ನ್ಯಾಯಬೆಲೆ ಅಂಗಡಿಯ ಅಕ್ಕಿಯನ್ನು ವಾಹನವೊಂದರಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವಾಗ ಪರಿಶೀಲನೆ ನಡೆಸುವ ಮೂಲಕ 9 ಕ್ವಿಂಟಲ್ ಅಕ್ರಮ ಅಕ್ಕಿ, ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಲಕ್ಷ್ಮಣ ಅಚ್ಚೋಲೆ (45) ಸಾ.ಜೇವರ್ಗಿ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಿಪಿಐ ಹನುಮರಡ್ಡೆಪ್ಪ ತಿಳಿಸಿದ್ದಾರೆ. ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.