ಕ್ಷೇತ್ರದ ಮತದಾರರಿಗೆ ‘ಹಳ್ಳಿಹಕ್ಕಿ’ಯ ಪತ್ರಸಂದೇಶ!
ಬೆಂಗಳೂರು: ಅನರ್ಹಗೊಂಡಿರುವ ಹುಣಸೂರು ಕ್ಷೇತ್ರದ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಕ್ಷೇತ್ರದ ಮತದಾರರಿಗೊಂದು ಬಹಿರಂಗ ಪತ್ರ ಬರೆದಿದ್ದಾರೆ. ಹೆಚ್.ವಿಶ್ವನಾಥ್ ಅವರ ಪತ್ರದ ಸಾರಾಂಶ ಈ ಕೆಳಗಿನಂತಿದೆ.
ಹುಣಸೂರು ವಿಧಾನಸಭಾ ಕ್ಷೇತ್ರದ ನನ್ನ ಮತದಾರ ಬಂಧುಗಳೇ, ಇತ್ತೀಚೆಗಿನ ರಾಜ್ಯದ ರಾಜಕೀಯ ವಿದ್ಯಮಾನಗಳು ನಿಮಗೆಲ್ಲ ತಿಳಿದಿದೆ. ಆದರೆ ಇವುಗಳಿಗೆ ಸಕಾರಣಗಳನ್ನು ನಿಮಗೆ ತಿಳಿಸುವುದು ನನ್ನ ಜವಬ್ದಾರಿ. ನನ್ನ ರಾಜಕೀಯ ವಿರೋಧಿಗಳು ಅಪಪ್ರಚಾರದಲ್ಲಿ ತೊಡಗಿದ್ದಾರೆ. ನನ್ನನ್ನು ನಾನು ಮಾರಿಕೊಂಡಿಲ್ಲ, ನೀವು ನನ್ನ ಮೇಲೆ ವಿಶ್ವಾಸವಿರಿಸಿ ದಯಪಾಲಿಸಿದ ಮತಗಳಿಗೆ ಅಪಚಾರ ಮಾಡಿಲ್ಲ. ನಿಮ್ಮ ಪ್ರತೀ ಮತಕ್ಕೆ ಸದಾ ಋಣಿಯಾಗಿದ್ದೇನೆ, ತಲೆ ಬಾಗಿದ್ದೇನೆ.
ನಿಮ್ಮ ಮತದ ಬಲದಿಂದ ಶಾಸಕನಾದ ನನ್ನನ್ನು ಈ ವ್ಯವಸ್ಥೆ ಶೋಷಿಸಿತು, ಅಪಮಾನಿಸಿತು, ಕಡೆಗಣಿಸಿತು. ಅನುಭವ, ಪ್ರಾಮಾಣಿಕತೆ ಮತ್ತು ಹಿರಿತನಕ್ಕೆ ಬೆಲೆಯಿಲ್ಲದಂತಾಯಿತು. ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾಗುವಂತಹ ಅನೇಕ ಘಟನೆಗಳು ನಡೆದುಹೋದವು. ಅವುಗಳನ್ನು ಸಹಿಸಲಾಗದೆ ನಾನು ಮತ್ತು ನನ್ನಂತೆ ನೋವುಂಡ ಶಾಸಕ ಮಿತ್ರರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇದೆಲ್ಲಾ ನಿಮಗೆ ನಾನು ತೋರಿದ ನಿರ್ಲಕ್ಷ್ಯವೆಂದು ತಾವು ಭಾವಿಸಬಾರದು.
ಬದಲಾಗಿ ಮತ ಕೊಟ್ಟು ಹರಸಿದ ಶಾಸಕ ಪದೇ ಪದೇ ಆದ ಅವಮಾನಗಳನ್ನು, ತಾರತಮ್ಯಗಳನ್ನು ನುಂಗಲಾರದೆ ತನ್ನ ಆತ್ಮಗೌರವಕ್ಕಾಗಿ, ಕ್ಷೇತ್ರದ ಜನರ ಸ್ವಾಭಿಮಾನ ಮತ್ತು ಒಳಿತಿಗಾಗಿ ಕೊಟ್ಟ ರಾಜೀನಾಮೆ ಎಂದು ತಾವು ತಿಳಿಯಬೇಕು. ಇದಾದ ಮೇಲೂ ಈ ದ್ವೇಷಪೂರಿತ ವ್ಯವಸ್ಥೆ ನಮ್ಮನ್ನು ದಮನಿಸಲು ಯತ್ನಿಸಿದೆ. ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ. ನಮ್ಮ ರಾಜಕೀಯ ಮತ್ತು ಸಾರ್ವಜನಿಕ ಬದುಕನ್ನು ಮುಗಿಸುವ ಹುನ್ನಾರ ನಡೆಸಿದೆ. ಈಗ ನಾವು ದೇಶದ ಸರ್ವೋಚ್ಚ ನ್ಯಾಯಲಯದ ಬಾಗಿಲನ್ನು ತಟ್ಟುತ್ತಿದ್ದೇವೆ.
ನಿಮ್ಮನ್ನು ಸದ್ಯದಲ್ಲೇ ಹುಣಸೂರಿನಲ್ಲಿ ಭೇಟಿಯಾಗಿ ಅನೇಕ ವಿಚಾರಗಳನ್ನು ಹಂಚಿಕೊಳ್ಳಲಿದ್ದೇನೆ, ವಾಸ್ತವ ಸಂಗತಿಗಳನ್ನು ತಿಳಿಸಲ್ಲಿದ್ದೇನೆ. ದಯವಿಟ್ಟು ತಾವು ನನ್ನನ್ನು, ನನ್ನ ಜೀವನವನ್ನು ಬಲ್ಲವರಾಗಿದ್ದರಿಂದ ವದಂತಿಗಳಿಗೆ ದಯವಿಟ್ಟು ಕಿವಿಗೊಡಬೇಡಿ.
ನಿಮ್ಮ ಬೆಂಬಲ, ಆಶೀರ್ವಾದ ಸದಾ ನನ್ನ ಮೇಲಿರಲಿ…
ವಿಶ್ವಾಸಗಳೊಂದಿಗೆ
ನಿಮ್ಮ
ಅಡಗೂರು ಎಚ್. ವಿಶ್ವನಾಥ್