ಕಥೆವಿನಯ ವಿಶೇಷ

ಕರ್ಣನಿಗೂ ಸಾರಥಿಯಾಗಿದ್ದ ಶ್ರೀಕೃಷ್ಣ..!

ಕರ್ಣನಿಗೂ ಸಾರಥಿಯಾಗಿದ್ದ ಶ್ರೀಕೃಷ್ಣ..!

-ಸುಷ್ಮಾ ಬಿ.ಹೂಗಾರ.
ಕರ್ಣನ ಜನ್ಮ ವೃತ್ತಾಂತದ ಬಗ್ಗೆ ಶ್ರೀಕೃಷ್ಣನು ಕರ್ಣನಿಗೆ ಹೇಳುತ್ತಾ ಹೇಳುತ್ತಾ.. ಕರ್ಣ ನೀನು ಪಾಂಡವರ ಕಡೆ ಬಂದು ಬಿಡು.. ನೀನು ಸೂತ ಪುತ್ರನಲ್ಲ.. ನೀನು ಸೂರ್ಯಪುತ್ರ ಕರ್ಣ ನೀನು ರಾಧೇಯನಲ್ಲ…ಕೌಂತೇಯ.. ನನ್ನ ಜೊತೆ ಬಂದು ಬಿಡು..ಎನ್ನತ್ತಾನೆ ಕೃಷ್ಣ.. ಕರ್ಣ ಪಾಂಡವರ ಕಡೆ ಬರವನೆಂಬ ಸಣ್ಣ..ಆಸೆಯಿಂದ.

ಅಲ್ಲದೆ ಪಾಂಡವ ಅಗ್ರಜನಾದ ಯುಧಿಷ್ಠಿರ ನಿನ್ನ ಪಾದ ಸೇವೆ ಮಾಡುತ್ತಾನೆ..ಭೀಮ ನಿನ್ನ ಅಂಗರಕ್ಷಕನಾಗುತ್ತಾನೆ. ಆಜನ್ಮ ಶತ್ರು ಅಂದು ಕೊಂಡಿರುವ ಅರ್ಜುನ ಮೂರು ಲೋಕಗಳನ್ನು ಗೆದ್ದು ನಿನ್ನ ಪಾದಕ್ಕೆರಗುತ್ತಾನೆ. ನಕುಲ-ಸಹದೇವರು ಸದಾ ನಿನ್ನ ಸೇವೆ ಮಾಡುತ್ತಾರೆ.

ಸಾಕು ಅಧರ್ಮದ ಹಾದಿ.. ನಡೆ ನನ್ನ ಜೊತೆ ಬಂದು ಬಿಡು ಎನ್ನುತ್ತಾನೆ ಕೃಷ್ಣ. ಆಗ ಕರ್ಣ ತುಟಿಯಂಚಲಿ ಸಣ್ಣ ಕಿರುನಗು ಬೀರುತ್ತಾ ಹೇಳುತ್ತಾನೆ.. ಕೃಷ್ಣ.. ನಾನು ದುರ್ಯೋಧನನ ಬಿಟ್ಟು ಬರಲಾರೆ. ನಾನು ಸೂತಪುತ್ರ ರಾಧೇಯ ಅಂತ ಗೊತ್ತಿದ್ದು, ನನಗೆ ಆಶ್ರಯ ನೀಡಿದ ದುರ್ಯೋಧನನ್ನು ಕಡೆ ಕ್ಷಣದಲ್ಲಿ ಬಿಟ್ಟು ಬರಲಾರೆ. ನನ್ನ ತಾಯಿ ನನ್ನನ್ನು ನದಿಗೆ ಬಿಟ್ಟು ಹೋದಳು.. ದ್ರೌಪದಿ ನನ್ನನ್ನು ಸ್ವಯಂವರದಲ್ಲಿ ಅವಮಾನ ಮಾಡಿದಳು. ಪಾಂಡವರು ನನ್ನನ್ನು ಕೀಳಾಗಿ ಕಂಡರು. ಗುರು ದ್ರೋಣಾಚಾರ್ಯರು ನನಗೆ ವಿದ್ಯೆ ಕಲಿಸಲಿಲ್ಲ. ಇನ್ನೂ ಪರಶುರಾಮರು ನನಗೆ ಕಲಿಸಿದ ಶಸ್ತ್ರ ವಿದ್ಯೇಯೇ..ಕಷ್ಟ ಕಾಲದಲ್ಲಿ ಮರೆಯುವಂತೆ ಶಾಪ ನೀಡಿದರು.

ಆದರೆ, ಆಗ ನನಗೆ ಆಶ್ರಯ ನೀಡಿ, ಅಂಗ ದೇಶದ ರಾಜನಾಗಿ ಮಾಡಿದವನು ನನ್ನ ಮಿತ್ರ ಸುಯೋಧನ. ಇನ್ನೂ ನನ್ನನ್ನು ನದಿಯಿಂದ ತಂದು ಮನೆಯಲ್ಲಿ ಸಾಕಿ ಬೆಳೆಸಿ ಎಲ್ಲಾ ವಿದ್ಯೆಗಳನ್ನು ಕಲಿಸಿದ್ದು ನನ್ನ ತಂದೆ ಅದಿರಥ ಮತ್ತು ತಾಯಿ ರಾಧೆ ಅವರನ್ನು ಬಿಟ್ಟು ಬರಲಾರೆ ಎನ್ನುತ್ತಾನೆ.

ಆಗ ಕೃಷ್ಣ ಮುಗುಳನಗುತ್ತಾ…ಕೇಳು ಕರ್ಣ.. ನಾನು ಹುಟ್ಟಿದಾಗ ನನ್ನ ತಾಯಿ ದೇವಕಿ ತಂದೆ ನನ್ನನ್ನು ನೀರಿಗೆ ಎಸೆದರು. ಯಶೋದೆ ನನ್ನನ್ನು ಸಾಕಿದಳು. ನಾನು ಹದಿಹರೆಯದ ವಯಸ್ಸಿನಲ್ಲಿ ಮಾಡಿದ ಪ್ರೀತಿ ನನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ ರಾಧೆಯನ್ನು ಈ ಜಗತ್ತು ನನ್ನಿಂದ ದೂರ ಮಾಡಿತು.

ಅದಾದನಂತರ ನಾನು ಮಥುರಾಕ್ಕೆ ಬಂದೆ ಅಲ್ಲಿ ನಾನು ನನ್ನ ಸೇನೆಯನ್ನ ಸಮಾಜವನ್ನು ಕ್ಷತ್ರಿಯರ ಸರಿಸಮಾನ ಬೆಳೆಸಿದೆ. ಅಲ್ಲಿ ನನ್ನ ಮಾವ ಜರಾಸಂಧನ ದಾಳಿಯಿಂದ ಓಡಿ ದ್ವಾರಕೆಗೆ ಬಂದೆ. ಆಗ ಜನ ಹಾಗೂ ಜಗತ್ತು ನನ್ನನ್ನು ಹೇಡಿ ಅಂದಿತು..ಹೇಳು ಕರ್ಣ ನಿನಗಿಂತ ನಾನು ಯಾವುದರಲ್ಲಿ ಸರಿಸಮಾನ ಹೇಳು..? ಕರ್ಣ.. ನಿಜಕ್ಕೂ ನನಗಿಂತ ಹೆಚ್ಚಿನ ಕಷ್ಟ ನಿನದ್ದಾಗಿತ್ತಾ,? ನಾನು ರಾಜನು ಆಗಿರಲಿಲ್ಲ, ಕ್ಷತ್ರೀಯನು ಆಗಿರಲಿಲ್ಲ.. ನಾನು ಯಾರ ಹಂಗಿಗು ಬೀಳಲಿಲ್ಲ.

ಈ ಮಹಾಯುದ್ಧದ ನಂತರ ನನಗೆ ಅತಿದೊಡ್ಡ ಶಾಪವೊಂದು ಸಿಗಲಿದೆ. ಆದರೂ ನಾನು ಚಿಂತಿಸಲ್ಲ. ನಾನು ಕೇವಲ ಧರ್ಮಕ್ಕಾಗಿ ಹೋರಾಡಿದೆ. ನ್ಯಾಯಕ್ಕಾಗಿ ಎಲ್ಲವನ್ನು ಮಾಡಿದೆ. ಆದರೆ ನೀನು ನಿನ್ನ ಸಮುದಾಯವನ್ನು ಬೆಳಸಲಿಲ್ಲ.? ನಿನ್ನ ಗೆಳೆಯ ತಪ್ಪು ಮಾಡುವಾಗ ತಿದ್ದಲಿಲ್ಲ..ಯಾಕೆ.? ಅವನು ಮಾಡುವ ಎಲ್ಲ ಅಧರ್ಮದಲ್ಲಿಯು ಭಾಗಿಯಾದೆ.? ಈಗಲಾದರೂ ನನ್ನ ಮಾತು ಕೇಳು ಕರ್ಣ.. ನೀನು ನಿನ್ನ ಅಣ್ಣತಮ್ಮಂದಿರೊಡನೆ ಸೇರು.

ಈಗಲಾದರೂ ನೀನು ಧರ್ಮದ ದಾರಿಯಲ್ಲಿ ಪಾಂಡವರಿಗೆ ಉಪದೇಶ ಮಾಡುತ್ತಾ..ಸಾರ್ವಭೌಮನಾಗಿ ಮೆರೆಯುವಂತ ಸುವರ್ಣವಕಾಶವನ್ನು ನಿರಾಕರಿಸಬೇಡ ಕರ್ಣ.. ಎಂದು ಹೇಳುವಾಗ ಆಗ ಕರ್ಣನದು ಅದೇ ಕಿರು ನಗು ಅವರನ್ನು ತಡೆಯುತ್ತಾ..
ಹೇ ಮಾಧವ.. ನಾನು ನಿನಗೆ ಆಭಾರಿ ನಾನು ನಿನಗೆ ಚಿರಋಣಿಯಾಗಿದ್ದೇನೆ ಕೃಷ್ಣ. ಆದರೆ ನಾನು ಕೌರವ ಸೇನೆಯನ್ನು ಬಿಟ್ಟು ಬರಲಾರೆ. ಗೊತ್ತೋ..ಗೊತ್ತಿಲ್ಲದೆ ನಾನು ಅಪರಾಧ ಮಾಡಿರುವೆ. ಅಧರ್ಮದ ಪರವಾಗಿ ಯುದ್ಧ ಮಾಡುವೆ. ನನ್ನ ಸ್ನೇಹಿತ ಧುರ್ಯೋಧನನ ಉಪ್ಪಿನ ಋಣ ತೀರಿಸುವೆ. ಕೃಷ್ಣ..ಈಗ ನೀನು..ಮತ್ತೊಂದು ಅಪರಾದ ನನ್ನಿಂದ ಮಾಡಿಸಬೇಡ.ಯುದ್ಧ ನಿಶ್ಚಿತ ಕೃಷ್ಣ. ಅದನ್ನ ತಡೆಯೋದು ಬೇಡ ಮುರಾರಿ.. ಎಂದಾಗ ಅವನ ಮೇಲಿನ ಪ್ರೀತಿ ಕೃಷ್ಣನಿಗೆ ಮತ್ತಷ್ಟು ಹೆಚ್ಚಾಯಿತು.

ಧರ್ಮವಂತನಾದ ಯುಧಿಷ್ಟಿರ ರಾಜನಾಗಬೇಕು. ಅವನಿಗೆ ಮಾರ್ಗದರ್ಶಕನಾಗಿ ನೀನು ಇದ್ದೀಯಾ.. ಯದ್ಧ ಮಾಡೋಕೆ ಅರ್ಜುನ ಇದ್ದಾನೆ ಕೃಷ್ಣ..ನನಗೆ ಚನ್ನಾಗಿ ಗೊತ್ತು. ಈ ಯುದ್ಧ ಒಂದು ಮಹಾಯಜ್ಞ. ಅದರ ಕರ್ತೃ ನೀನು. ಅರ್ಜುನ ಸೇರಿದಂತೆ ಉಳಿದ ಪಾಂಡವರು ಅದರ ಸಹಾಯಕರು. ನೀನು ಭೀಮನ ಕೈಯಿಂದ ದುರ್ಯೋಧನನ ತೊಡೆ ಮುರಿಸಿದಾಗ ಯಜ್ಞ ಒಂದು ಹಂತಕ್ಕೆ ಬಂದು ನಿಲ್ಲುತ್ತದೆ. ಅರ್ಜುನನ ಕೈಯಿಂದ ನನ್ನನ್ನು ಕೊಲ್ಲಿಸಿದಾಗ ಪೂರ್ಣಾಹುತಿಯೊಂದಿಗೆ ಎಲ್ಲವೂ ಕೊನೆಗೊಳ್ಳುತ್ತದೆ.. ಕೃಷ್ಣ ಎಂದನು.

ಆಗ ಕೃಷ್ಣ ಮತ್ತೆ ಮಾತು ಮುಂದುವರೆಸುತ್ತಾ.. ಅದು ಅಷ್ಟು ಖಚಿತವಾಗಿ ಹೇಗೆ ಹೇಳುವೆ ಕರ್ಣ ಎಂದಾಗ, ಕರ್ಣನದೂ ಮತ್ತದೆ ದಿವ್ಯ ಮಂದಹಾಸ.. ಅಯ್ಯಾ ಚಕ್ರೀ ಈಗ ತಾನೆ ನೀನೆ ಹೇಳಿದೆ ನಾನು ಸೂರ್ಯಪುತ್ರ ಎಂದು ಅದೆ ಕಾರಣಕ್ಕೆ ಇರಬಹುದು ನನಗೆ ಇದೆಲ್ಲವೂ ಒಂದು ಕನಸಿನಂತೆ ಆಭಾಸವಾಗುತ್ತಿದೆ ಕೃಷ್ಣ.. ಎಂದು ಹೇಳಿ ಮಾತು ಮುಗಿಸಿದ.
ಕೃಷ್ಣ ನಾವಿನ್ನು ಹೊರಡೋಣ ಮುಂದೆ ನಾನು ನನ್ನ ತಾಯಿ ಸಹೋದರರನ್ನು ಯಾವ ದಾಯಾದಿ ಮತ್ಸರಗಳಿಲ್ಲದೆ ಯಾವ ರಾಗ ದ್ವೇಷಗಳಿಲ್ಲದೆ ಸ್ವರ್ಗದಲ್ಲಿ ಭೇಟಿಯಾಗುತ್ತೇನೆ ಎಂದು ಹೊರಟಾಗ ಅಲ್ಲಿ ಮಹಾರಥಿಯಾಗಿ ಕರ್ಣನಿದ್ದ…ಸಾರಥಿಯಾಗಿ ಶ್ರೀಕೃಷ್ಣನಿದ್ದನು.

ಈ ಪ್ರಸಂಗದ ಸಂದರ್ಭದಲ್ಲಿ ಮುಂದಾಗಲಿರುವ ಮಹಾವಿನಾಶ ಗೊತ್ತಾಗಿ ಸೂರ್ಯ ಕೂಡ ಅತ್ಯಂತ ಭಾರವಾದ ಮನಸಿನಿಂದ ಪಶ್ಚಿಮದತ್ತ ಮುಖ ಮಾಡಿ ಮುಳುಗಿ ಹೋಗಿದ್ದ.

Related Articles

One Comment

  1. ಮನುಷ್ಯ ಬದುಕಿಗೆ ಹಲವು ಮೌಲ್ಯಗಳನ್ನು ತಿಳಿಸುವ ಬರಹ. ಅಭಿನಂದನೆಗಳು ಮೆಡಮ್

Leave a Reply

Your email address will not be published. Required fields are marked *

Back to top button